ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಮತ್ತೊಂದು ರೋಚಕ ಪಂದ್ಯ ಆರಂಭವಾಗಿದ್ದು, ಭಾರತದ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸುವುದು ನಿಶ್ಚಿತವಾಗಲಿದೆ.
ಮೊದಲ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಆತ್ಮವಿಶ್ವಾಸ ತುಂಬಿಕೊಂಡಿರುವ ಭಾರತ, ಮತ್ತೊಂದು ಗೆಲುವಿನತ್ತ ನೋಟ ಹರಿಸಿದೆ. ಬಾಂಗ್ಲಾದೇಶವೂ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಬಲ ಹೆಚ್ಚಿಸಿಕೊಂಡಿದೆ. ಅಂಕಿ-ಅಂಶಗಳ ಪ್ರಕಾರ ಭಾರತ ಬಲಿಷ್ಠ ತಂಡ. ಇದುವರೆಗೆ ಆಡಿದ 17 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ 16ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದೆ. ಆದರೆ ಬಾಂಗ್ಲಾದೇಶವನ್ನು ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ನಿಧಾನವಾಗಿದ್ದು, ಮಧ್ಯಮಓವರ್ಗಳಲ್ಲಿ ರನ್ ಗಳಿಸಲು ಕಷ್ಟವಾಗಬಹುದು. ಸ್ಪಿನ್ ಬೌಲರ್ಗಳಿಗೆ ಸಹಕಾರಿ ಪಿಚ್ ಆಗಿರುವ ಕಾರಣ, ಆರಂಭಿಕ ಓವರ್ಗಳಲ್ಲಿ ವೇಗದ ದಾಳಿಯು ಮತ್ತು ಮಧ್ಯಭಾಗದಲ್ಲಿ ಸ್ಪಿನ್ ದಾಳಿ ಪ್ರಮುಖವಾಗಲಿದೆ. ಟಾಸ್ ಗೆದ್ದ ತಂಡಗಳು ಸಾಮಾನ್ಯವಾಗಿ ಫೀಲ್ಡಿಂಗ್ ಆಯ್ಕೆ ಮಾಡುತ್ತವೆ ಎಂಬ ನಿರೀಕ್ಷೆಯಂತೆ ಬಾಂಗ್ಲಾದೇಶವೂ ಅದನ್ನೇ ಆಯ್ಕೆ ಮಾಡಿಕೊಂಡಿದೆ.
ಇದನ್ನು ಓದಿದ್ದೀರಾ? ಏಷ್ಯಾ ಕಪ್ 2025: ಭಾರತ-ಪಾಕಿಸ್ತಾನ ಪುನಃ ಮುಖಾಮುಖಿ
ಪಾಕ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಮತ್ತೊಮ್ಮೆ ಆರಂಭಿಕ ಹೊಣೆ ಹೊರುವ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಬ್ಯಾಟಿಂಗ್ನಲ್ಲಿ ಜವಾಬ್ದಾರಿ ಹೊರುವ ಅಗತ್ಯವಿದೆ. ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಆಲ್ರೌಂಡರ್ಗಳಾಗಿ ತಂಡಕ್ಕೆ ಬಲ ತುಂಲಿದ್ದಾರೆ. ಸ್ಪಿನ್ ದಾಳಿಯಲ್ಲಿ ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ, ವೇಗದ ದಾಳಿಯಲ್ಲಿ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದ ಪ್ರಮುಖ ಆಯುಧರಾಗಿದ್ದಾರೆ. ಫೈನಲ್ ಪ್ರವೇಶಕ್ಕಾಗಿ ಎರಡೂ ತಂಡಗಳು ತೀವ್ರ ಹೋರಾಟಕ್ಕೆ ಸಜ್ಜಾಗಿದ್ದು, ದುಬೈ ಪಿಚ್ನಲ್ಲಿ ರೋಚಕ ಪಂದ್ಯ ನಡೆಯುವ ನಿರೀಕ್ಷೆಯಿದೆ
ಪಂದ್ಯವಾಡುವ ಉಭಯ ತಂಡಗಳ ಬಳಗ
ಭಾರತ:
ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಬಾಂಗ್ಲಾದೇಶ:
ಸೈಫ್ ಹಸನ್, ತಂಝಿದ್ ಹಸನ್, ಲಿಟನ್ ದಾಸ್ (ನಾಯಕ ಹಾಗೂ ವಿಕೆಟ್ ಕೀಪರ್), ತೌಹಿದ್ ಹೃದೋಯ್, ಶಮಿಮ್ ಹುಸೇನ್, ಜಾಕರ್ ಅಲಿ, ಮೆಹೆದಿ ಹಸನ್, ನಸುಮ್ ಅಹ್ಮದ್, ಟಸ್ಕಿನ್ ಅಹ್ಮದ್, ತಂಝಿಮ್ ಹಸನ್, ಮುಸ್ತಾಫಿಜುರ್ ರೆಹಮಾನ್.
