ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದರೆ, ಒಂದು ದೇಶದಲ್ಲಿ ವಿವಿಧ ಜಾತಿಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ. ಸರ್ಕಾರವು ಹಿಂದುಳಿದ ಸಮುದಾಯಗಳಿಗೆ ಕಲ್ಯಾಣ ಕಾರ್ಯಕ್ರಮ, ನೀತಿಗಳು ಮತ್ತು ಮೀಸಲಾತಿಗಳನ್ನು ರೂಪಿಸಲು ಈ ಮಾಹಿತಿ ಅತ್ಯಗತ್ಯ ಎಂದು ಬಾಗೇಪಲ್ಲಿ ತಹಶೀಲ್ದಾರ್ ಮನೀಷಾ ಎನ್.ಪತ್ರಿ ಹೇಳಿದರು.
ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ದೇವರಾಜ ಅರಸು ಭವನದಲ್ಲಿ ಗುರುವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಣತಿದಾರರಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.
“ಈ ಸಮೀಕ್ಷೆಯಲ್ಲಿ, ಬಡತನ, ಅನಕ್ಷರತೆ ಮತ್ತು ಅಸಮಾನತೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಯಾವ ಸಮುದಾಯಗಳು ಹೆಚ್ಚು ಬಾಧಿತವಾಗಿವೆ ಎಂದು ತಿಳಿಯುವುದು ಬಹಳ ಮುಖ್ಯ. ಆದರಿಂದ ಜನರು ಈ ಸಮೀಕ್ಷೆಗೆ ನಿಖರ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಸಹಕರಿಸಬೇಕು. ಅವರ ಪ್ರಾಮಾಣಿಕ ಸಹಭಾಗಿತ್ವದಿಂದ ಸರ್ಕಾರದ ಸಾಮಾಜಿಕ ರಚನೆ ಮತ್ತು ಜನರ ಅಗತ್ಯಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಭಾಗವಹಿಸುವುದರಿಂದ, ಜನರು ತಮ್ಮ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಿದಂತಾಗುತ್ತದೆ’ ಎಂದರು.
ಬಿಇಒ ಎನ್.ವೆಂಕಟೇಶಪ್ಪ ಮಾತನಾಡಿ, “ಸೆ.22ರಿಂದ ಅ.7ರವರೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು 60 ಪ್ರಶ್ನೆಗಳನ್ನೊಳಗೊಂಡಿದ್ದು, ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಬೇಕು’ ಎಂದು ಸಾರ್ವಜನಿಕರಲ್ಲಿ ಕೋರಿದರು.
ಇದನ್ನೂ ಓದಿ: ಬಾಗೇಪಲ್ಲಿ | ಡಾ. ಬಿ ಆರ್ ಅಂಬೇಡ್ಕರ್ ಸೇನೆಯ ತಾಲೂಕು ಪದಾಧಿಕಾರಿಗಳ ಆಯ್ಕೆ
ಬಿಸಿಎಂ ಅಧಿಕಾರಿ ಶಿವಪ್ಪ ಮಾತನಾಡಿ, “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಮೀಕ್ಷೆ ಕುರಿತು ತಪ್ಪು ಕಲ್ಪನೆ ಬೇಡ. ಇದು ಜಾತಿಗಣಿತಿಯಲ್ಲ. ಸಮಾಜದಲ್ಲಿ ದುರ್ಬಲ ವರ್ಗದವರನ್ನು ಮುಖ್ಯ ವಾಹಿನಿಗೆ ತರುವ ಒಂದು ಐತಿಹಾಸಿಕ ನಿರ್ಣಯವಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಮನ್ವಯಾಧಿಕಾಕಿಗಳಾದ ವೆಂಕಟರಾಮ್, ಚಂದ್ರಶೇಖರ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.