ಕೇಂದ್ರ ಬಿಜೆಪಿ ಸರ್ಕಾರ ಜಿಎಸ್ಟಿ ಜಾರಿಗೆ ತಂದು ಜನಸಾಮಾನ್ಯರಿಗೆ ಈಗಾಗಲೇ ಸಾಕಷ್ಟು ತೊಂದರೆ ನೀಡಿದೆ. ಕಳೆದ 8 ವರ್ಷಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಇದರಿಂದ ತತ್ತರಿಸಿ ಹೋಗಿದ್ದಾರೆ. ಜಿಎಸ್ಟಿ ಹೆಚ್ಚು ಮಾಡಿದ್ದು ಅವರೇ; ಈಗ ಕಡಿಮೆ ಮಾಡುವುದು ಅವರೇ. ಇದಕ್ಕೆಲ್ಲಾ ಸಂಭ್ರಮದ ಆಚರಣೆಯ ಅಗತ್ಯ ಇದ್ಯಾ? ಎಂದು ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಎಸ್ಟಿಯಿಂದ ಅದೆಷ್ಟೋ ಸಂಖ್ಯೆಯ ಕಂಪೆನಿಗಳು ನೆಲ ಕಚ್ಚಿವೆ. ಉದ್ದಿಮೆಗಳು ನಷ್ಟ ಅನುಭವಿಸಿವೆ. ಆವಾಗ್ಲೇ ಜಿಎಸ್ಟಿಯನ್ನು ಸರಳೀಕರಣ ಮಾಡಿದ್ದರೆ ಆರ್ಥಿಕತೆ ಸುಧಾರಣೆ ಕಾಣುತ್ತಿತ್ತು. ಕಳೆದ 8 ವರ್ಷಗಳಲ್ಲಿ ಜನರಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಿದ್ದಾರೆ. 2014 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿದ್ದರೆ ಜಿಎಸ್ಟಿಯನ್ನು ಜಾರಿಗೆ ತರುತ್ತಿತ್ತು. ಚುನಾವಣೆಯ ಪ್ರಣಾಳಿಕೆಯಲ್ಲಿಯೂ ಈ ವಿಷಯಗಳಿದ್ದವು. ಇದು ಮಹಾನ್ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ಕನಸಿನ ಕೂಸು ಕೂಡ ಆಗಿತ್ತು. ಆದರೆ ಮನಮೋಹನ್ ಸಿಂಗ್ ಅವರ ಪರಿಕಲ್ಪನೆಯ ಜಿಎಸ್ಟಿಗೂ ಬಿಜೆಪಿ ಸರ್ಕಾರ ಜಾರಿಗೆ ತಂದ ಜಿಎಸ್ಟಿಗೂ ಹಲವಾರು ವ್ಯತ್ಯಾಸಗಳಿವೆ” ಎಂದರು.
ಇದನ್ನೂ ಓದಿ: ಮಂಗಳೂರು | ಕೆಲಸ ನಿರಾಕರಣೆ; ಪ್ರತಿಭಟನೆಗಿಳಿದ ಹಳೆ ಬಂದರು ಹಮಾಲಿ ಕಾರ್ಮಿಕರು
“ಮುಂದೆ ಬಿಹಾರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿದೆ. ಎಲ್ಲಿ ಚುನಾವಣೆಯಲ್ಲಿ ಕಡಿಮೆ ಮತ ಸಿಗುತ್ತೋ ಎಂಬ ಭಯದಲ್ಲಿ ಜಿಎಸ್ಟಿ ಕಡಿಮೆ ಮಾಡಲಾಗಿದೆ” ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂಎಸ್ ಮುಹಮ್ಮದ್, ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷ ಸಾಹುಲ್ ಹಮೀದ್, ಎಸ್ ಅಪ್ಪಿ, ಇಬ್ರಾಹಿಂ ನವಾಜ್, ಸುಹಾನ್ ಆಳ್ವಾ, ಶುಭಶ್ಚಂದ್ರ ಶೆಟ್ಟಿ ಕೊಲ್ನಾಡ್, ಚಿತ್ತಾರಂಜನ್ ಶೆಟ್ಟಿ, ವಿಕಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.