ಶಿವಮೊಗ್ಗ, ಭಾರತೀಯ ವೈದ್ಯಕೀಯbಸಂಘ, ಶಿವಮೊಗ್ಗ ಶಾಖೆಯು ಈ ವರ್ಷ 75 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಬರುವ 27ಮತ್ತು28 ರಂದು ಅಮೃತ ಮಹೋತ್ಸವ ಕಾರ್ಯಕ್ರಮವು ನಿಗದಿಯಾಗಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಐಎಂಎ ಅಧ್ಯಕ್ಷ ಡಾ!! ಎಸ್. ಶ್ರೀಧರ ಮತ್ತು ಮಾಜಿ ರಾಜ್ಯಾಧ್ಯಕ್ಷ ಡಾ!! ಕೆ ಆರ್ ಶ್ರೀಧರ, ಶಿವಮೊಗ್ಗ ಜಿಲ್ಲೆಯ ಎಲ್ಲ ವೈದ್ಯರನ್ನು ಒಳಗೊಂಡಿರುವ ಈ ಸಂಸ್ಥೆ, ಹಿಂದಿನಿಂದಲೂ ಸಾರ್ವಜನಿಕರಲ್ಲಿ ಆರೋಗ್ಯದ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ.
ಸಾರ್ವಜನಿಕರಿಗಾಗಿ ಮಧುಮೇಹ, ರಕ್ತದೊತ್ತಡ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣಾ ಶಿಬಿರಗಳು, ಕ್ಯಾನ್ಸರ್ ತಪಾಸಣಾ ಶಿಬಿರಗಳು, ಕುಟುಂಬ ಯೋಜನೆ ಶಸ್ತ್ರಚಿಕಿತ್ಸಾ ಶಿಬಿರಗಳು ಮೊದಲಾದ ಉಪಯುಕ್ತ ಚಟುವಟಿಕೆಗಳನ್ನು ಶಿವಮೊಗ್ಗದ ಜನತೆಗಾಗಿ ಸಂಘವು ನಿರಂತರವಾಗಿ ನಡೆಸಿಕೊಂಡುಬಂದಿದೆ ಎಂದರು.
75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸಂದರ್ಭದಲ್ಲಿ ವರ್ಷ ಪೂರ್ತಿ ಹಲವು ಆಯಾಮಗಳಲ್ಲಿ ಸಾರ್ವಜನಿಕರ ಆರೋಗ್ಯವನ್ನು ವೃದ್ಧಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಒಟ್ಟು 20, ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ, ಪೌಷ್ಟಿಕ ಆಹಾರ, ಹದಿಹರೆಯದವರ ಆರೋಗ್ಯ, ಪರೀಕ್ಷೆ ಎದುರಿಸುವುದು ಹೇಗೆ ಮೊದಲಾದ ವಿಷಯಗಳ ಕುರಿತು ಉಪನ್ಯಾಸ, ಸಂವಾದ, ಒಟ್ಟು 50 ಮೊದಲಾದುವು.ಆಯ್ದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಮೋಗ್ಲೋಬಿನ್ ತಪಾಸಣೆ, ಆರೋಗ್ಯತಪಾಸಣೆ, ಮಹಿಳಾಸಂಘಗಳಲ್ಲಿ ಆರೋಗ್ಯಉಪನ್ಯಾಸ, ತಪಾಸಣೆ ಮೊದಲಾದ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯದ ಅರಿವನ್ನು ಹೆಚ್ಚಿಸುವ ಶ್ರೇಷ್ಠ ಕೆಲಸವನ್ನುಸಂಘವು ಮಾಡಿದೆ ಎಂದರು.
ಸೆ. 27 ಮತ್ತು 28 ರಂದು ಸಂಘವು ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 27 ರಂದು ರಾಮನ್ ಸಹೋದರಿಯರಿಂದ ವೀಣಾವಾದನ, ವೈದ್ಯರ ಛಾಯಾಚಿತ್ರ ಪ್ರದರ್ಶನವಿದ್ದು, 28 ರಂದು ಸದಸ್ಯರಿಗಾಗಿ ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ವೈಜ್ಞಾನಿಕಗೋಷ್ಠಿಗಳು ಹಾಗೂ ಸಂಜೆ ಸಮಾರೋಪ ಸಮಾರಂಭವಿದೆ.
ಹಿರಿಯ ಮನೋವೈದ್ಯರೂ, ಪದ್ಮಶ್ರೀ ಪುರಸ್ಕೃತರೂ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಪೂರ್ವಾಧ್ಯಕ್ಷರೂ ಆಗಿರುವ ಡಾ!! ಬಿ ಎನ್ ಗಂಗಾಧರ್, ನಿಮಾನ್ಸ್ನ ಸಹ ಪ್ರಾಂಶುಪಾಲ ಡಾ!! ವೈ ಸಿ ಜನಾರ್ಧನ್ ರೆಡ್ಡಿ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಡಾ!! ವಿ ವಿ ಚಿನಿವಾಲರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದರು.
ಸಮಾರೋಪ ಸಮಾರಂಭದಲ್ಲಿ ಈ ವರೆಗೆ ಸಂಘದ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಎಲ್ಲ ವೈದ್ಯರನ್ನು ಸಮಾರಂಭದಲ್ಲಿ ಗೌರವಿಸುವ ಯೋಜನೆಯೂ ಇದೆ ಎಂದರು.
27 ರ ಬೆಳಿಗ್ಗೆ 8 ಗಂಟೆಗೆ ಅಮೃತ ನಡಿಗೆ, ವೈದ್ಯ ಸದ್ಯಸ್ಯರು ತಮ್ಮ ಒಗ್ಗಟ್ಟು ಹಾಗೂ ಜನ ಸಾಮಾನ್ಯರ ಆರೋಗ್ಯದ ಬಗೆಗಿರುವ ಕಾಳಜಿಯನ್ನು ತೋರಲು ಜಾಥಾ ಹಮ್ಮಿಕೊಂಡಿದ್ದಾಗಿ ವಿವರಿಸಿದರು.
