ಗ್ರಾಮೀಣ ಮಕ್ಕಳು, ಯುವಕರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಉತ್ಸಾಹದಲ್ಲಿರುವ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರು, ವಯಸ್ಕರು, ಹಿರಿಯ ನಾಗರಿಕರು ಹೀಗೆ ಯಾವುದೇ ಭೇದ ಭಾವವಿಲ್ಲದೆ ವೈವಿಧ್ಯತೆಯನ್ನು ಹಂಚಿಕೊಳ್ಳುವ ʼಅರಿವು ಕೇಂದ್ರʼಗಳೆಂಬ ಜ್ಞಾನದೇಗುಲಗಳು ಜನಪ್ರಿಯಗೊಳ್ಳುತ್ತಿವೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಪರಿಸರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕ್ರಮೇಣ ಒಂದು ಅದ್ಭುತ ಘಟಿಸತೊಡಗಿದೆ. ಒಳ ಪ್ರವೇಶಿಸುತ್ತಿದ್ದಂತೆ ಮಾನಸಿಕವಾಗಿ ನೆಮ್ಮದಿ ತರುವ ಪರಿಸರ, ಅವಶ್ಯಕತೆಗೆ ಅನುಗುಣವಾಗಿ ಉಪಯುಕ್ತ ಪುಸ್ತಕಗಳು, ವೃತ್ತಪತ್ರಿಕೆಗಳು, ಮಾಹಿತಿಗಳನ್ನು ಜಾಲಾಡಲು ಡಿಜಿಟಲೀಕರಣದ ವ್ಯವಸ್ಥೆ ಈ ಎಲ್ಲಾ ಸಾಕಾರಗೊಂಡಿರುವ ಗ್ರಾಮೀಣ ಗ್ರಂಥಾಲಯಗಳಾದ ʼಅರಿವು ಕೇಂದ್ರʼಗಳು ಈಗ ಜನಾದರಣೀಯವಾದ ಪ್ರಮುಖ ಸ್ಥಳಗಳಾಗಿ ಪರಿಣಮಿಸಿವೆ.
ಸಾಂಸ್ಕೃತಿಕ ಬಸವಣ್ಣನವರ ʼಅರಿವೇ ಗುರುʼ ಮಹಾನ್ ಸಂದೇಶದ ತತ್ತ್ವದ ಆಧಾರದ ಮೇಲೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಜ್ಜುಗೊಳಿಸಿರುವ ಅರಿವು ಕೇಂದ್ರಗಳಾದ ಗ್ರಾಮೀಣ ಗ್ರಂಥಾಲಯಗಳು ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಂತೆ ಗ್ರಾಮೀಣ ವಿದ್ಯಾರ್ಥಿಗಳೂ ಸೇರಿದಂತೆ ಜನರ ಬದುಕಿನ ಭಾಗವಾಗಿ ಬೆಳೆಯುತ್ತಾ ಜನಪ್ರಿಯಗೊಳ್ಳುತ್ತಿವೆ ಎನ್ನಬಹುದು.

ಗ್ರಾಮೀಣ ಭಾಗದ ಮಕ್ಕಳಲ್ಲಿ ಗ್ರಂಥಾಲಯಗಳನ್ನು ಉಪಯೋಗಿಸಿಕೊಳ್ಳುವ ಹಾಗೂ ಓದುವ ಹವ್ಯಾಸವನ್ನು ಪ್ರೋತ್ಸಾಹಿಸಿದ ಪರಿಣಾಮವಾಗಿ ರಾಜ್ಯದ ಗ್ರಂಥಾಲಯಗಳಲ್ಲಿ ಒಟ್ಟು 48,57,351 ಮಕ್ಕಳು ನೋಂದಣಿಯಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಹಿತಿ ನೀಡಿದೆ.
ಬೆರಗುಗೊಳಿಸುವ ಪರಿಸರ :
ಕಲಬುರಗಿ ಜಿಲ್ಲೆಯ 100 ಅರಿವು ಕೇಂದ್ರಗಳಿಗೆ ₹3 ಕೋಟಿ ವೆಚ್ಚದಲ್ಲಿ ಹೊಸ ರೂಪ ನೀಡಿ ಮತ್ತಷ್ಟು ಜನಸ್ನೇಹಿಯಾಗಿ ಮಾಡಲಾಗಿದೆ. ಅರಿವು ನೀಡುವ ಜ್ಞಾನ ಸಂಪತ್ತನ್ನು ಪಡೆಯಲು ಈ ಕೇಂದ್ರಗಳಿಗೆ ಬರುವವರನ್ನು ಬೆರಗುಗೊಳಿಸುವ ಪರಿಸರವನ್ನು ಸೃಷ್ಟಿಸಲಾಗಿದೆ.
ಅರಿವು ಕೇಂದ್ರದ ಕಟ್ಟಡಗಳನ್ನು ನವೀಕರಿಸಿ, ಒಳಾಂಗಣಗಳ ಸೌಲಭ್ಯಗಳನ್ನು ಉನ್ನತೀಕರಣಗೊಳಿಸಲಾಗಿದೆ. ಒಳ ಭಾಗಗಳ ನೆಲಕ್ಕೆ ವಿಕ್ಟ್ರಿಫೈಡ್ ಹಾಸು ಅಳವಡಿಸಿ ಆಕರ್ಷಣೀಯವಾಗಿಸಲಾಗಿದೆ. ಚಾವಣಿಗಳನ್ನು ದುರಸ್ತಿ ಮಾಡಿ ಫಾಲ್ಸ್ ಸೀಲಿಂಗ್ ಮೂಲಕ ಶೋಭೆ ಹೆಚ್ಚಿಸಲಾಗಿದೆ. ಗ್ರಂಥಾಲಯ ಹಾಗೂ ಅಧ್ಯಯನ ಮಾಡಲು ಹೊಸ ಪೀಠೋಪಕರಣಗಳನ್ನು ಅಳವಡಿಸಿ, ಇಡೀ ಗ್ರಂಥಾಲಯವನ್ನು ಪೂರ್ಣವಾಗಿಸಲಾಗಿದೆ.

ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಇರಿಸುವ ಹೊಸ ಕಪಾಟುಗಳು, ಮೇಜು ಹಾಗೂ ಖುರ್ಚಿಗಳು, ಅಧ್ಯಯನ ಮಾಡಲು ಅನುಕೂಲವಾಗುವ ಕ್ಯೂಬಿಕಲ್ಗಳು, ದೀಪ ಹಾಗೂ ಫ್ಯಾನುಗಳ ಸ್ವಿಚ್ಗಳು, ಫ್ಯಾನುಗಳ ದುರಸ್ತಿ ಹಾಗೂ ಅವಶ್ಯವಿರುವೆಡೆ ಫ್ಯಾನುಗಳು, ಕಂಪ್ಯೂಟರ್ ಒಳಗೊಂಡಂತೆ ಡಿಜಿಟಲ್ ಮೂಲಸೌಕರ್ಯ ಮುಂತಾದ ಸೌಲಭ್ಯಗಳೊಂದಿಗೆ ಪರಿಸರವನ್ನು ಸುಂದರವಾಗಿಸಿ ಗ್ರಂಥಾಲಯಗಳಿಗೆ ಬರುವ ವಿದ್ಯಾಕಾಂಕ್ಷಿಗಳಲ್ಲಿ ಉತ್ಸಾಹವನ್ನು ನೂರ್ಮಡಿಗೊಳಿಸಲಾಗಿದೆ. ಫಲಶೃತಿಯಾಗಿ ಗ್ರಂಥಾಲಯಗಳಿಗೆ ಭೇಟಿ ನೀಡುವ ಮಕ್ಕಳು, ಯುವಕರು ಹಾಗೂ ಹಿರಿಯ ನಾಗರಿಕರ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂಬುದು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
ಮಕ್ಕಳ ಪ್ರೀತಿಯ ʼಓದುವ ಬೆಳಕುʼ :
ರಜೆ ಅವಧಿಯಲ್ಲಿ ಶಾಲೆಗಳು ಮುಚ್ಚಿದ್ದರೂ ಮಕ್ಕಳು ಓದುವ ಅಭ್ಯಾಸದಿಂದ ದೂರ ಉಳಿಯಬಾರದೆಂಬ ಉದ್ದೇಶದೊಂದಿಗೆ ಅರಿವು ಕೇಂದ್ರಗಳಲ್ಲಿ ʼಓದುವ ಬೆಳಕುʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ, ಅಜೀಂ ಪ್ರೇಮ್ ಜೀ ಫೌಂಡೇಶನ್, ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಮತ್ತು ಶಿಕ್ಷಣ ಫೌಂಡೇಶನ್ ಸಂಸ್ಥೆಗಳು ನೆರವು ನೀಡಿವೆ. 6-18 ವರ್ಷದ ಮಕ್ಕಳಿಗೆ ಗ್ರಂಥಾಲಯದ ಸದಸ್ಯತ್ವವನ್ನು ನೀಡಿ ಅವರು ಮನೆಗೆ ಪುಸ್ತಕ ತೆಗೆದುಕೊಂಡು ಹೋಗಿ ಓದಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈ ಕಾರ್ಯಕ್ರಮದ ಬಗ್ಗೆ ಮಕ್ಕಳು ವಿಶೇಷ ಪ್ರೀತಿಯನ್ನು ಹೊಂದಿದ್ದಾರೆ ಎಂಬುದು ಜನರ ಅಭಿಪ್ರಾಯ.
ʼಗ್ರಾಮ ಪಂಚಾಯತಿ ಗ್ರಂಥಾಲಯಗಳಲನ್ನು ಮಕ್ಕಳ ಸ್ನೇಹಿಯಾಗಿಸಲು, ಓದಿನ ಮನೆಗೆ ಹೋಗೋಣ, ಚದುರಂಗ ಆಟ ಆಡೋಣ, ಗಟ್ಟಿ ಓದು, ಅಮ್ಮನಿಗಾಗಿ ಒಂದು ಪುಸ್ತಕ, ಪತ್ರ ಬರಹ, ಚಿಣ್ಣರ ಚಿತ್ತಾರ, ನಿಮ್ಮ ಗೆಳೆಯರನ್ನು ಗ್ರಂಥಾಲಯಕ್ಕೆ ಕರೆ ತನ್ನಿ. ಮಕ್ಕಳಿಗೆ ಬೇಸಿಗೆ ಶಿಬಿರ, ಸಣ್ಣ ಕಥೆ ಬರೆಯುವುದು, ನಾನು ಓದುವ ಪುಸ್ತಕಗಳು, ನನ್ನ ಪ್ರೀತಿಯ ಗ್ರಂಥಾಲಯ, ವಾರ್ತಾ ಪತ್ರಿಕೆ ಓದೋಣ ಅಭಿಯಾನಗಳನ್ನು ಕೈಗೊಳ್ಳಲಾಗಿದೆʼ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

30 ಮಾದರಿ ಅರಿವು ಕೇಂದ್ರಗಳ ಕಟ್ಟಡ ನಿರ್ಮಾಣ :
ರಾಜ್ಯ ಸರ್ಕಾರ ಅರಿವು ಕೇಂದ್ರಗಳ ಅಭಿವೃದ್ಧಿಗಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹೆಚ್ಚಿನ ಮಹತ್ವ ನೀಡಿದೆ. ಜಿಲ್ಲೆಯಲ್ಲಿನ 261 ಗ್ರಾಪಂಗಳಲ್ಲಿ 261 ಅರಿವು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 2023-24ನೇ ಹಾಗೂ 2024-25ನೇ ಸಾಲಿನಲ್ಲಿ ಹಾಕಿಕೊಳ್ಳಲಾದ ನೀಲ ನಕ್ಷೆಯಂತೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿಗಳ ಅರ್ನಿಬಂಧಿತ ಅನುದಾನದಲ್ಲಿ ಸುಮಾರು ₹3 ಕೋಟಿ ಮೊತ್ತದಲ್ಲಿ 100 ಅರಿವು ಕೇಂದ್ರಗಳನ್ನು ಉನ್ನತೀಕರಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ʼ2025-26ನೇ ಸಾಲಿನಲ್ಲಿ ಮತ್ತೂ ₹3 ಕೋಟಿ ರೂ. ಮೊತ್ತದಲ್ಲಿ 75 ಅರಿವು ಕೇಂದ್ರಗಳನ್ನು ಉನ್ನತೀಕರಣಗೊಳಿಸಲು ನಿರ್ದೇಶಿಸಲಾಗಿದೆ. ಇದಲ್ಲದೆ, ಸುಮಾರು ₹11 ಕೋಟಿ ಅನುದಾನದಲ್ಲಿ 30 ಹೊಸದಾಗಿ ಮಾದರಿ ಆರಿವು ಕೇಂದ್ರಗಳ ಕಟ್ಟಡ ನಿರ್ಮಾಣ ಪ್ರಾರಂಭಿಸಲಾಗುವುದುʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಮುಖ್ಯಮಂತ್ರಿ, ಕೃಷಿ ಸಚಿವರು ಖುದ್ದಾಗಿ ಅತಿವೃಷ್ಟಿ ಹಾನಿ ಪರಿಶೀಲಿಸಲಿ : ಶಾಸಕ ಶರಣು ಸಲಗರ
ʼಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ, ಆಲೂರ (ಬಿ), ಲಾಡ್ಡಾಪೂರ, ಕಮರವಾಡಿ, ನಾಲವಾರ, ಸಾತನೂರ, ಭಾಗೋಡಿ, ಗುಂಡಗುರ್ತಿ, ಹಳಕಟ್ನಾ ಶಹಾಬಾದ ತಾಲೂಕಿನ ರಾವೂರ, ಮಾಲಗತ್ತಿ, ಮರತೂರ, ಮುಗಳನಾಗಾಂವ, ಅಫಜಲಪುರ ತಾಲೂಕಿನ ಗುಡೂರು, ಹಸರಗುಂಡಗಿ, ಅತನೂರ, ಮಲ್ಲಾಬಾದ, ಕಲ್ಲೂರ, ಭೈರಾಮಡಗಿ ಹಾಗೂ ಆಳಂದ ತಾಲ್ಲೂಕಿನ ರುದ್ರವಾಡಿ, ಅಳಂಗಾ, ಧಂಗಾಪೂರ, ಭೂಸನೂರ ಸೇರಿದಂತೆ ಜಿಲ್ಲೆಯ 100 ಅರಿವು ಕೇಂದ್ರಗಳನ್ನು ಉನ್ನತೀಕರಣಗೊಳಿಸಲಾಗಿದೆʼ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಒ ಭವರ್ ಸಿಂಗ್ ಮೀನಾ ತಿಳಿಸಿದ್ದಾರೆ.