ಕಳೆದ ಐದು ದಿನಗಳಿಂದ ತೀವ್ರವಾಗಿದ್ದ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಭೀಮಾ ನದಿಯ ಪ್ರವಾಹ ಪರಿಸ್ಥಿತಿ ಶುಕ್ರವಾರ ಮತ್ತಷ್ಟು ರೌದ್ರ ರೂಪ ತಾಳಿದೆ. ನದಿಯ ನೀರು ತಗ್ಗು ಪ್ರದೇಶಗಳು ಮತ್ತು ಹೊಲಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಳಿಸಿದೆ.
ದೇವಣಗಾವ ಸಮೀಪದ ಸೊನ್ನ ಬ್ಯಾರೇಜ್ನಲ್ಲಿ 3.50 ಲಕ್ಷ ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 28 ಗೇಟ್ಗಳ ಮೂಲಕ ಸಮಾನ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೆಎನ್ಎನ್ಎಲ್ಎ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷಕುಮಾರ ಸಜ್ಜನ್ ತಿಳಿಸಿದ್ದಾರೆ. ತಾರಾಪುರ, ಕಡ್ಲೆವಾಡ, ಶೇಂಬೆವಾಡ, ತಾವರಖೇಡ ಮತ್ತು ಬ್ಯಾಡಗಿಹಾಳ ಗ್ರಾಮಗಳ ರಸ್ತೆಗಳಲ್ಲಿ ನೀರು ತುಂಬಿ ಸಂಪರ್ಕ ಕಡಿತಗೊಂಡಿದೆ. ದೇವಣಗಾಂವ ಗ್ರಾಮದಲ್ಲಿನ ಹನುಮಾನ್, ಅಂಬಿಗರ ಚೌಡಯ್ಯ ಮತ್ತು ಶಾಂತೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ಮನೆಗಳು ನೀರಿನಲ್ಲಿ ಮುಳುಗಿವೆ.
ದೇವಣಗಾಂವ–ಆಲಮೇಲ ರಸ್ತೆಯ ಪಕ್ಕದಲ್ಲಿ ನೀರು ತುಂಬಿ ನಿಂತಿದ್ದು, ನೀರಿನ ಮಟ್ಟ ಇನ್ನಷ್ಟು ಏರಿದರೆ ಕಲಬುರಗಿ–ವಿಜಯಪುರ ಮುಖ್ಯರಸ್ತೆಯ ಸಂಪರ್ಕವೂ ಕಡಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಮಸಾಗಿ ಗ್ರಾಮದ ಅಂಚಿನಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಆಗೋ ಹಳ್ಳ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ನೀರು ನುಗ್ಗಿ ಹತ್ತಿ, ತೊಗರಿ, ಕಬ್ಬು ಬೆಳೆಗಳು ನೀರಿನಲ್ಲಿ ನಿಂತಿವೆ. ಭೀಮಾ ತೀರದ ಕಡಣಿ, ಕುರುಬತಹಳ್ಳಿ, ಮಗ್ನಳ್ಳಿ, ಬಗಲೂರ, ಚಿಕ್ಕ ಹಾವಳಗಿ, ಕಕ್ಕಳಮೇಲಿ, ಶಿರಸಗಿ, ಕುಳಿ ಕುಮಟಗಿ ಗ್ರಾಮಗಳ ಜಮೀನುಗಳಲ್ಲಿ ನೀರು ನುಗ್ಗಿದ್ದು, ಬೆಳೆಗಳು ನೀರುಪಾಲಾಗಿವೆ.
ಇದನ್ನೂ ಒದಿ: ವಿಜಯಪುರ | ಕೇಂದ್ರ ಸರ್ಕಾರ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದೆ: ಅಮೂಲ್ಯ ನಿಧಿ
ಆಲಮೇಲ ತಹಶೀಲ್ದಾರ್ ಧನಪಾಲ ಶೆಟ್ಟಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರಲ್ಲಿ ಧೈರ್ಯ ತುಂಬಿದರು. ದೇವಣಗಾಂವ ಪಿಡಿಒ ಸಂಜೀವ ಕುಮಾರ ದೊಡ್ಡಮನಿ, ಗ್ರಾಮ ಲೆಕ್ಕಾಧಿಕಾರಿ ಎಂಕೆ ಪೂಜಾರಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.