“ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಮಹಾರಾಜರ ಹೆಸರಿಡಬೇಕು” ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷರು ರಾಹುಲ್ ಶೆಟ್ಟರ ಆಗ್ರಹಿಸಿದರು.
ಬಾಗಲಕೋಟಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, “ಆರು ವರ್ಷಗಳ ನಿರಂತರ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರ ಬಾಗಲಕೋಟೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಮಾಡಿ, ಸ್ಥಾಪನೆಗೆ 450 ಕೋಟಿ ರೂಪಾಯಿ ಅನುದಾನ ನೀಡಲು ಅನುಮೋದನೆ ನೀಡಿದ್ದು ಅತೀವ ಸಂತಸ ತಂದಿದೆ” ಎಂದರು.
“ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆದ ಎಲ್ಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ಎಲ್ಲ ಅಡೆತಡೆಗಳನ್ನು ಎದುರಿಸಿ ಮುನ್ನಡೆದದ್ದು ಇಂದು ಸಾರ್ಥಕತೆಯ ಆನಂದ ತಂದಿದೆ. ಎಲ್ಲ ಹೋರಾಟಗಳಲ್ಲಿ ಭಾಗವಹಿಸಿದ ಅಸಂಖ್ಯಾತ ಕನ್ನಡ ಸೇನಾನಿಗಳಿಗೆ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡಿದ ಬಾಗಲಕೋಟೆಯ ಜನತೆಗೆ, ರಾಜ್ಯ ಸರ್ಕಾರಕ್ಕೆ, ಬಾಗಲಕೋಟೆ ಶಾಸಕರಾದ ಸನ್ಮಾನ್ಯ ಹೆಚ್. ವಾಯ್. ಮೇಟಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ” ಎಂದರು.
ಮುಂದಿನ ದಿನಗಳಲ್ಲಿ ಆರಂಭವಾಗುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಮಹಾರಾಜರ ಹೆಸರಿಡಬೇಕು ” ರಾಜ್ಯ ಸರ್ಕಾರವನ್ನು ವಿನಂತಿಸಿದರು.