ವಿಜಯಪುರ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಆಗ್ರಹಿಸಿ ಕಳೆದ 12 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಎಐಟಿಯುಸಿ ಬೆಂಬಲ ಸೂಚಿಸಿದೆ.
ಜನಸಾಮಾನ್ಯರಿಗೆ ಆಸ್ಪತ್ರೆ ಬೇಕು; ಬಡ ಮಕ್ಕಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು. ಅಲ್ಲಿವರೆಗೆ ಹೋರಾಟ ಮುಂದುವರೆಸೋಣ. ಸರ್ಕಾರ ಇದಕ್ಕೆ ಮಣಿಯಲೇ ಬೇಕಾಗುತ್ತದೆ. ಯಾವುದೇ ಪಟ್ಟಭದ್ರ ಹಿತಾಸಕ್ತಿಗೆ ಮಣಿಯದಂತೆ ನೋಡಿಕೊಳ್ಳೋಣ. ನಿಮ್ಮ ಜೊತೆ ನಮ್ಮ ಕಾರ್ಮಿಕ ಸಂಘಟನೆ ಬೆಂಬಲವಿದೆ ಎಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ ಸೋಮಶೇಖರ ಹೇಳಿದರು.
ಸರ್ಕಾರವೇ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕಿತ್ತು ಆದರೆ, ಕಾರ್ಪೊರೇಟ್ ಮನೆತನಗಳಿಗೆ ಬಂಡವಾಳಶಾಹಿಗಳಿಗೆ ಕಾಲೇಜನ್ನು ತೆರೆಯಲು ಅವಕಾಶ ಮಾಡಿಕೊಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದರು.
ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಸೋಮಶೇಖರ ಯಾದಗಿರಿ ಮಾತನಾಡಿ, “ಸರ್ಕಾರಿ ವೈದ್ಯಕೀಯ ಕಾಲೇಜು ಸರ್ಕಾರದ ಸ್ವಾಧೀನದಲ್ಲಿ ಆಗಬೇಕು. ವಿಜಯಪುರದಲ್ಲಿ ಎಷ್ಟು ವರ್ಷಗಳಾದರೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸದಿದ್ದಕ್ಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು. 150 ಎಕರೆ ಜಾಗ ಇದ್ದರೂ ಸರ್ಕಾರ ಸುಸಜ್ಜಿತ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲು ಹಿಂದೇಟು ಹಾಕುತ್ತಿದೆ. ಪಿಪಿಪಿ ಅಡಿ ಕಾಲೇಜು ತರುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ನಮ್ಮ ಕಾರ್ಮಿಕ ಸಂಘಟನೆ ಬೆಂಬಲವಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ಭೀಮಾ ನದಿಯ ರೌದ್ರ ರೂಪ; ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಅಂಗನವಾಡಿ ಮತ್ತು ಹಾಸ್ಟೆಲ್ ಕಾರ್ಮಿಕರ ಸಂಘದ ಮುಖಂಡರಾದ ಕಾಶಿಬಾಯಿ ಜನಗೊಂಡ, ನಿಂಗಮ್ಮ ಮಠ, ಸಾವಿತ್ರಿ ನಾಗರಹತ್ತಿ, ಗಾಯತ್ರಿ ಹಿರೇಮಠ, ರೇಣುಕಾ ಹಡಪದ, ಲಕ್ಷ್ಮಿ ಲಕ್ಷಟ್ಟಿ, ಮಹಾದೇವಿ ಧರ್ಮಶೆಟ್ಟಿ, ಗಂಗೂಬಾಯಿ ಉಳ್ಳಾಗಡ್ಡಿ ಹೋರಾಟ ಬೆಂಬಲಿಸಿ ಮಾತನಾಡಿದರು.
ಹೋರಾಟ ಸಮಿತಿ ಸದಸ್ಯರಾದ ಅರವಿಂದ ಕುಲಕರಣಿ, ಭಗವಾನ ರೆಡ್ಡಿ,ಅನಿಲ ಹೊಸಮನಿ, ಲಲಿತ ಬಿಜ್ಜರಗಿ, ಕೆ ಎಫ್ ಅಂಕಲಿಗಿ, ವಿದ್ಯಾವತಿ ಅಂಕಲಿಗಿ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್ ಟಿ ಮಲ್ಲಿಕಾರ್ಜುನ ಎಚ್ ಟಿ, ಶಿವಬಾಳಮ್ಮ ಕೊಂಡಗುಳಿ, ಗೀತಾ ಎಚ್ ,ನೀಲಾಂಬಿಕೆ ಬಿರಾದಾರ ಇದ್ದರು.