ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕಾರ್ ಸ್ಟ್ರೀಟ್ ಬಳಿ ಸೆಪ್ಟೆಂಬರ್ 26ರಂದು ನಡೆದ ಸಿನಿಮೀಯ ಶೈಲಿಯ ಚಿನ್ನದ ಗಟ್ಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಮತ್ತು ಒಬ್ಬ ಬಾಲಕನನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದು, ದರೋಡೆಗೆ ಬಳಸಿದ ಒಂದು ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.
ಹಂಪನಕಟ್ಟೆಯಲ್ಲಿರುವ ಚಾಯ್ಸ್ ಗೋಲ್ಡ್ ಚಿನ್ನಾಭರಣದ ಅಂಗಡಿಯ ಕೆಲಸಗಾರ ಮುಸ್ತಾಫಾ ಸೆ. 26ರಂದು ರಾತ್ರಿ 8:45ರ ಸುಮಾರಿಗೆ ತಮ್ಮ ಸ್ಕೂಟರ್ (ನಂ. KA-19EZ-2079) ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದರು. ಅವರು ಕಾರ್ ಸ್ಟ್ರೀಟ್ನ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಗೆ ಬರುತ್ತಿದ್ದಂತೆ, ಮತ್ತೊಂದು ಸ್ಕೂಟರ್ನಲ್ಲಿ ಬಂದ ಇಬ್ಬರು ಆಗಂತುಕರು ಅವರನ್ನು ಅಡ್ಡಗಟ್ಟಿದ್ದಾರೆ. ಇದೇ ವೇಳೆ, ಕಾರೊಂದರಲ್ಲಿ ಬಂದ ಉಳಿದ ಆರೋಪಿಗಳು ಮುಸ್ತಾಫಾ ಅವರನ್ನು ಬಲವಂತವಾಗಿ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ. ಅಪಹರಣದ ನಂತರ ಹಲ್ಲೆ ನಡೆಸಿ, ಅವರನ್ನು ಮಂಗಳೂರಿನ ಎಕ್ಕೂರು ಎಂಬಲ್ಲಿ ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಫಾರಿಶ್ (18 ), ಸಫ್ವಾನ್ (23 ), ಅರಾಫತ್ ಆಲಿ (18 ), ಫರಾಝ್ (19) ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಂಧಿತ ಆರೋಪಿಗಳು.
ಈ ದರೋಡೆ ಪೂರ್ವಯೋಜಿತ ಕೃತ್ಯವಾಗಿದ್ದು, ದರೋಡೆಗೆ ಒಳಗಾದ ಚಾಯ್ಸ್ ಗೋಲ್ಡ್ ಅಂಗಡಿಯಲ್ಲೇ ಹಿಂದೆ ಕೆಲಸ ಮಾಡಿದ್ದ ಆರೋಪಿ ಫಾರಿಶ್ ಈ ಪಿತೂರಿ ಯೋಜಿಸಿದ ಪ್ರಮುಖನಾಗಿದ್ದಾನೆ. ಇದೇ ಅಂಗಡಿಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದ ಬಾಲಕನು, ಮುಸ್ತಾಫಾ ಅವರು ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುವ ಸಮಯದ ಬಗ್ಗೆ ಫಾರಿಶ್ಗೆ ಖಚಿತ ಮಾಹಿತಿ ನೀಡಿದ್ದ. ಈ ಮಾಹಿತಿಯನ್ನೇ ಆಧರಿಸಿ ಉಳಿದ ಆರೋಪಿಗಳೊಂದಿಗೆ ಸೇರಿ ಫಾರಿಶ್ ಈ ದರೋಡೆ ಸಂಚನ್ನು ರೂಪಿಸಿದ್ದಾನೆ. ಆರೋಪಿ ಸಫ್ವಾನ್ ಕೃತ್ಯಕ್ಕೆ ಕಾರನ್ನು ಒದಗಿಸಿದ್ದಾನೆ.
ಇದನ್ನೂ ಓದಿ: ಮಂಗಳೂರು | ಕೆಲಸ ನಿರಾಕರಣೆ; ಪ್ರತಿಭಟನೆಗಿಳಿದ ಹಳೆ ಬಂದರು ಹಮಾಲಿ ಕಾರ್ಮಿಕರು
ಕೃತ್ಯಕ್ಕೆ ಉಪಯೋಗಿಸಿದ ಕಾರು ಹಾಗೂ ದರೋಡೆ ಮಾಡಿದ ಚಿನ್ನದ ಗಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ತನಿಖೆ ಮುಂದುವರಿದಿದೆ.