ಅತಿವೃಷ್ಟಿ ಹಾಗೂ ಪ್ರವಾಹದಂತಹ ಆಕಸ್ಮಿಕಗಳು ಸಂಭವಿಸಿದ ಸಂದರ್ಭಗಳಲ್ಲಿ ಅಧಿಕಾರಿಗಳು ವಿವೇಚನೆಯಿಂದ ವರ್ತಿಸಿ, ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ತುರ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ತಾತ್ಕಾಲಿಕ ವಸತಿ, ಆಹಾರ ಸರಬರಾಜು ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ 2025ರ ಆಗಸ್ಟ್ ತಿಂಗಳಲ್ಲಿ ಶೇ 69ರಷ್ಟು ಹಾಗೂ ಸೆಪ್ಟೆಂಬರ್ ತಿಂಗಳ ಮೊದಲ 28 ದಿನಗಳಲ್ಲಿ ಶೇ 72ರಷ್ಟು ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿದ್ದು, ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಅಧಿಕ ಮಳೆಯಿಂದ ಆಗಿರುವ ಪರಿಣಾಮಗಳು ಹಾಗೂ ಅವುಗಳನ್ನು ಸಮರ್ಪಕವಾಗಿ ಎದುರಿಸುವ ಸಂಬಂಧ ಕಲುಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಲವು ಸೂಚನೆಗಳು ನೀಡಿದ್ದಾರೆ.
ಬೆಳೆವಿಮೆ :
2025ರ ಮುಂಗಾರು ಹಂಗಾಮಿನಲ್ಲಿ 3.01 ಲಕ್ಷ ರೈತ ಬಾಂಧವರು ನೊಂದಣಿ ಮಾಡಿಸಿದ್ದು ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ಕಾರಣಕ್ಕೆ ಇಲ್ಲಿಯವರೆಗೆ 1.78 ಲಕ್ಷ ರೈತ ಬಾಂದವರು ಸ್ಥಳೀಯ ವಿಪತ್ತು ಅಡಿಯಲ್ಲಿ ಶೇ 59ರಷ್ಟು ರೈತರು ದೂರು ಸಲ್ಲಿಸಿರುವ ಪ್ರಯುಕ್ತ ಬೆಳೆ ವಿಮೆ ಮಾಡಿಸಿದ ರೈತರ ಬೆಳೆ ಹಾನಿ ಸಮಿಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಕೆಲ ದಿನಗಳಲ್ಲಿ ಬೆಳೆ ಹಾನಿಯಾದ ರೈತ ಬಾಂಧವರಿಗೆ ಪರಿಹಾರ ವಿತರಿಸಲಾಗುವುದುʼ ಎಂದು ಸಚಿವರು ತಿಳಿಸಿದ್ದಾರೆ.
ನದಿಗಳಿಂದ ಅಧಿಕ ನೀರು ಹೊರಕ್ಕೆ :
ಮಹಾರಾಷ್ಟ್ರ ರಾಜ್ಯದ ಉಜ್ಜನಿ ಮತ್ತು ಸಿನಾ ಜಲಾಶಯದಿಂದ ಭೀಮಾ ನದಿಗೆ 3.25 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಈ ನೀರು ಅಫಜಲಪೂರ ತಾಲ್ಲೂಕಿನ ಭೀಮಾ ಸೊನ್ನ ಬ್ಯಾರೇಜಿಗೆ ಬಂದು ಬಂದಿದೆ. ಈಗಾಗಲೇ ಸೊನ್ನ ಬ್ಯಾರೇಜ್ನಿಂದ 3.25 ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ, ಉಜ್ಜನಿ ಮತ್ತು ಸಿನಾ ಜಲಾಶಯದ ನೀರು ಬಂದ ನಂತರ ಸೊನ್ನ ಬ್ಯಾರೇಜಿನಿಂದ ಇನ್ನೂ ಹೆಚ್ಚಿನ ಗೇಟ್ಗಳ ಮೂಲಕ ಭೀಮಾ ನದಿಗೆ ನೀರು ಹರಿಬಿಡಲಾಗುವುದು ಎಂದು ಹೇಳಿದರು.
ಬೆಣ್ಣೆತೋರಾ ಜಲಾಶಯದಿಂದ 300 ಕ್ಯೂಸೆಕ್ ಸೆಕ್ ನೀರು ಹೊರ ಬಿಡಲಾಗುತ್ತಿದೆ. ಮಳೆಯ ಮುನ್ಸೂಚನೆ ಇರುವ ಕಾರಣ ಜಲಾಶಯದ ಒಳಹರಿವು ಹೆಚ್ಚಾಗುವ ಸಾಧ್ಯತೆ ಯಾವುದೇ ಸಮಯದಲ್ಲಿ ಜಲಾಶಯದಿಂದ ಇನ್ನು ಹೆಚ್ಚಿನ ನೀರು ನದಿಗೆ ಹರಿಸಲಾಗುವುದು. ಆದ್ದರಿಂದ ಮುಂದಿನ ದಿನಗಳಲ್ಲಿ ಸೊನ್ನ ಮತ್ತು ಬೆಣ್ಣತೊರಾ ಬ್ಯಾರೇಜ್ ಕೆಳಗಡೆ ಇರುವ ನದಿ ಪಾತ್ರದ ಜನರು ಮುಂಜಾಗರೂಕತೆ ವಹಸಿಲು ಸೂಚಿಸುವಂತೆ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಸಚಿವರು ನಿರ್ದೇಶನ ನೀಡಿದರು.
ಮಳೆಯಿಂದ ಮೃತರಾದವರ ಕುಟುಂಬಗಳ ಅವಲಂಬಿತರಿಗೆ ತಕ್ಷಣ ಪರಿಹಾರ ಒದಗಿಸಲು ಕ್ರಮ ಆಗಬೇಕು, ಆಸ್ಪತ್ರೆಗಳಲ್ಲಿ ಅವಶ್ಯ ಔಷಧಿ, ಓಆರ್ಎಸ್, ಪ್ರಥಮ ಚಿಕಿತ್ಸೆ ಸಾಮಗ್ರಿಗಳನ್ನು ದಾಸ್ತಾನು ಇರಿಸಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಮನೆ ಕಳೆದುಕೊಂಡಿರುವ ನಿರಾಶ್ರಿತರನ್ನು ಆಯಾ ಗ್ರಾಮಗಳ ಪರಿಮಿತಿಯೊಳಗಿನ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಬೇಕು, ಅಪಾಯದ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ವಾಸ ಮಾಡುವವರನ್ನು ಸಹ ಕಾಳಜಿ ಕೇಂದ್ರಗಳಲ್ಲಿರಿಸಬೇಕು, ಬಿಇಒಗಳು ತೊಂದರೆಗೀಡಾದ ಗ್ರಾಮಗಳಿಗೆ ಭೇಟಿ ನೀಡಿ ಶಾಲಾ ಕಟ್ಟಡಗಳು ಶಿಥಿಲವಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹೊಳೆ ಹರಿಯುವ ಹಾಗೂ ನೀರು ನಿಂತ ಸ್ಥಳಗಳಲ್ಲಿ ಮಕ್ಕಳನ್ನು ಕಳುಹಿಸದಂತೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಪ್ರವಾಹಕ್ಕೆ ತುತ್ತಾಗಿರುವ ನದಿ ಹಾಗೂ ಹೊಳೆಗಳತ್ತ ಹೋಗದಂತೆ ಗ್ರಾಮಸ್ಥರು ಜಾಗ್ರತೆವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹ ಪೀಡಿತ ಗ್ರಾಮ, ಕಾಳಜಿ ಕೇಂದ್ರಗಳು :
ಈಗಾಗಲೇ ಕಲಬುರಗಿ ಜಿಲ್ಲೆಯ ಭಾರಿ ಮಳೆಯಿಂದಾಗಿ ಒಟ್ಟು 88 ಗ್ರಾಮಗಳನ್ನು ಪ್ರವಾಹ ಪೀಡಿತ ಗ್ರಾಮಗಳೆಂದು ಗುರುತಿಸಲಾಗಿದ್ದು, ಒಟ್ಟು 56 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸದ್ಯ 19 ಕಾಳಜಿ ಕೇಂದ್ರಗಳನ್ನು ಮುಚ್ಚಲಾಗಿದ್ದು ಒಟ್ಟು 37 ಕಾಳಜಿ ಕೇಂದ್ರಗಳು ಚಾಲ್ತಿಯಲ್ಲಿವೆ. ಸದರಿ ಚಾಲ್ತಿಯಲ್ಲಿರುವ ಕಾಳಜಿ ಕೇಂದ್ರಗಳಿಗೆ ಒಟ್ಟು 5,785 ಸಾರ್ವಜನಿಕರಿಗೆ ಇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ : ಬೀದರ್ | ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿ ತುರ್ತು ಪರಿಹಾರ ಘೋಷಿಸಲಿ : ಬಿ.ವೈ.ವಿಜಯೇಂದ್ರ
ಪ್ರವಾಹ ಸಂದರ್ಭದಲ್ಲಿ ರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲ್ಲು 20 ಅಧಿಕಾರಿಗಳ ಒಳಗೊಂಡ ಪರಿಣಿತ 1 ಎನ್ಡಿಆರ್ಎಫ್ ತಂಡವನ್ನು ವಾಡಿ ಗ್ರಾಮದಲ್ಲಿ ಇರಿಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲ್ಲು ಒಂದು SDRF ತಂಡವನ್ನು ಕಲಬುರಗಿಯಲ್ಲಿ ಇರಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.