ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕತ್ತೆ ಕಾಯಲು ಬಿಜೆಪಿಗರು ಆಯ್ಕೆ ಮಾಡಿ ಕಳಿಸಿದ್ದಾರಾ? ಎಲ್ಲವನ್ನೂ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಅವರೇ ಪರಿಹಾರ ಮಾಡಲು ಆಗುತ್ತದಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವೈಮಾನಿಕ ಸಮೀಕ್ಷೆ ನಡೆಸುವ ಮುನ್ನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
“ಬಿಜೆಪಿಗರು ಮಾತು ಎತ್ತಿದರೆ ಸಾಕು ಮೋದಿ ವಿಶ್ವಗುರು, ಮಹಾನ್ ನಾಯಕ ಎಂದು ಕರೆಯುತ್ತಾರೆ. ದೇವರಂತ ಹೇಳುತ್ತಾರೆ. 12 ವರ್ಷಗಳಲ್ಲಿ ಕರ್ನಾಟಕಕ್ಕೆ ಅವರೇನು ಕೊಟ್ಟಿದ್ದಾರೆ, ಎಲ್ಲವೂ ವಿರೋಧ ಪಕ್ಷದವರೇ ಕೊಡಬೇಕಾ” ಎಂದು ಪ್ರಶ್ನಿಸಿದರು.
“ಕೇಂದ್ರ ಸರ್ಕಾರಕ್ಕೆ ಪರಿಹಾರ ಕೊಡಲು ಆಗದಿದ್ದರೆ ಕುರ್ಚಿ ಬಿಟ್ಟು ತೊಲಗಲಿ. ಪರಿಹಾರ ಘೋಷಣೆಗೆ ನಮಗೂ ಅಂಕಿ ಅಂಶಗಳು ಬೇಕಲ್ವಾ? ಸಮೀಕ್ಷೆ ಇಲ್ಲದೇ ಪರಿಹಾರ ಬಿಡುಗಡೆ ಮಾಡಲು ಆಗುತ್ತದಾ? ಜಂಟಿ ಸಮೀಕ್ಷೆ ಮುಗಿದ ಮೇಲೆ ಪರಿಹಾರ ಕೊಡುತ್ತೇವೆ” ಎಂದು ತಿಳಿಸಿದರು.
“ನಾನು ಮಂತ್ರಿ ಆದ ಮೇಲೆ ಬಿಜೆಪಿ ನಾಯಕರಿಗೆ ಕಲಬುರಗಿ ನೆನಪಾಗಿದೆ. ಬಿಜೆಪಿಗೆ ಎಷ್ಟು ಸೀಟು ಬಂದಿದೆ ಎಂಬುದನ್ನು ರಾಜ್ಯ ನೋಡಿದೆ. ಅವರಿಂದ ನಾವು ಆಡಳಿತದ ಪಾಠ ಕಲಿಯಬೇಕಿಲ್ಲ” ಎಂದು ಹರಿಹಾಯ್ದರು.
ಬಳಿಕ ಭೀಮಾ ಮತ್ತು ಕೃಷ್ಣಾ ನದಿ ಪ್ರವಾಹದಿಂದಾದ ಹಾನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯಲ್ಲಿ ಕುಳಿತು ವೈಮಾನಿಕ ಸಮೀಕ್ಷೆ ನಡೆಸಿದರು.