ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ 3.85 ಕೋಟಿ ಮೌಲ್ಯದ ಸಾಮಗ್ರಿಗಳ ದುರುಪಯೋಗ ಮಾಡಿರುವ ಹಗರಣ ದಾವಣಗೆರೆ ಜಿಲ್ಲೆ ಹರಿಹರ ನಗರದ ವಿಭಾಗೀಯ ಉಗ್ರಾಣದಲ್ಲಿ ನಡೆದಿದೆ. ಆರೋಪದ ಮೇಲೆ ಸಹಾಯಕ ಉಗ್ರಾಣ ಪಾಲಕ (assistant store keeper) ಅರುಣಕುಮಾರ್ ಜಿ.ಎನ್. ಹಾಗೂ ಮತ್ತಿತರರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2018ರ ಜೂನ್ 19ರಿಂದ 2025ರ ಸೆಪ್ಟೆಂಬರ್ 16ರವರೆಗೆ ಹರಿಹರ ಬೆಸ್ಕಾಂ ಉಗ್ರಾಣದಲ್ಲಿ ಸಹಾಯಕ ಉಗ್ರಾಣ ಪಾಲಕರಾಗಿ ಸೇವೆ ನಿರ್ವಹಿಸುತ್ತಿದ್ದ ಆರೋಪಿ ಅರುಣಕುಮಾರ್, ಲೆಡ್ಜರ್ ದಾಖಲೆಗಳಲ್ಲಿ ಸಾಮಗ್ರಿಗಳು ನೈಜವಾಗಿ ಉಗ್ರಾಣದಲ್ಲಿರುವಂತೆ ನಮೂದಿಸಿ, ಅವುಗಳನ್ನು ಹೊರಕ್ಕೆ ಸಾಗಿಸಿ ದುರುಪಯೋಗ ಮಾಡಿಕೊಂಡಿರುವ, ವಿಶೇಷವಾಗಿ, ಗ್ಯಾರಂಟಿ ಅವಧಿಯಲ್ಲಿದ್ದ ಪರಿವರ್ತಕಗಳನ್ನು ದುರಸ್ತಿ ಕೇಂದ್ರಗಳಿಗೆ ಕಳುಹಿಸದೆ, ಇನ್ವಾಯ್ಸ್ ಸಂಖ್ಯೆಗಳನ್ನು ಮಾತ್ರ ಲೆಡ್ಜರ್ ನಲ್ಲಿ ದಾಖಲಿಸಿವಂಚನೆ ಮಾಡಿದ ಬಗ್ಗೆ ಆರೋಪ ಕೇಳಿಬಂದಿದೆ.
2025ರ ಏಪ್ರಿಲ್ ನಲ್ಲಿ ತ್ರೈಮಾಸಿಕ ಪರಿಶೀಲನೆ ನಡೆಸಿದ ಆಂತರಿಕ ಲೆಕ್ಕಪರಿಶೋಧಕರು, ಪರಿವರ್ತಕ ತೈಲದಲ್ಲಿ(ಟಿ.ಸಿ.ಆಯಿಲ್) 89,270 ಲೀಟರ್ ಕೊರತೆ ಕಂಡುಬಂದಿದ್ದು, ಸಂಸ್ಥೆಗೆ ರೂ.56,67,864 ಆರ್ಥಿಕ ನಷ್ಟ ಉಂಟಾಗಿದೆ ಎಂದು ವರದಿ ನೀಡಿದ್ದರು. ವರದಿ ಹಿನ್ನೆಲೆಯಲ್ಲಿ, ಮೇಲಾಧಿಕಾರಿಗಳು ಉಗ್ರಾಣದಲ್ಲಿ ಸಾಮಗ್ರಿಗಳ ಎಣಿಕೆ ಕಾರ್ಯ ಕೈಗೊಂಡು, ಉಗ್ರಾಣದಲ್ಲಿದ್ದ ಸಾಮಗ್ರಿಗಳ ಭೌತಿಕ ಎಣಿಕೆ ಮತ್ತು ಲೆಡ್ಜರ್ ದಾಖಲೆಗಳನ್ನು ಹೋಲಿಕೆ ಮಾಡಿದಾಗ, ಒಟ್ಟು 39 ವಿಧದ ಸಾಮಗ್ರಿಗಳಲ್ಲಿ ಭಾರಿಕೊರತೆ ಕಂಡು ಬಂದಿತ್ತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಾತಿ ಧರ್ಮ ಭಾಷೆಗಳ ಸಂಘರ್ಷ ತಡೆಗೆ ಗಾಂಧೀಜಿ ದಾರಿ ಮುಖ್ಯ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ
ವರದಿಯಲ್ಲಿ ವಿವರಿಸಿದಂತೆ ರೂ.56,67,864 ಮೌಲ್ಯದ 89,270 ಲೀಟರ್ ಪರಿವರ್ತಕ ತೈಲ ದುರುಪಯೋಗ ಮಾತ್ರವಲ್ಲದೆ ರೂ.72,58,014 ಮೌಲ್ಯದ 102 ಪರಿವರ್ತಕಗಳು ಬಫರ್ ಸ್ಟಾಕ್ ನಿಂದ ಅಜ್ಞಾತವಾಗಿ ಕಣ್ಮರೆಯಾಗಿದ್ದವು. ಇದಲ್ಲದೆ ರೂ.12,75,937 ಮೌಲ್ಯದ 21 ಪರಿವರ್ತಕಗಳು ಲೆಡ್ಜರ್ ನಲ್ಲಿ ದುರಸ್ತಿದಾರರಿಗೆ ಇನ್ವಾಯ್ಸ್ ಮಾಡಿದಂತೆ ದಾಖಲಾಗಿದ್ದರೂ ವಾಸ್ತವದಲ್ಲಿ ದುರಸ್ತಿದಾರರಿಗೆ ಹಸ್ತಾಂತರವಾಗಿರಲಿಲ್ಲ. ಈ ರೀತಿಯಾಗಿ ಒಟ್ಟಾರೆ ರೂ.3,85,69,119 ಮೌಲ್ಯದ ಸಾಮಗ್ರಿಗಳನ್ನು ದುರುಪಯೋಗ ಮಾಡಲಾಗಿದೆ ಎಂಬುದು ಪರಿಶೀಲನೆಯಿಂದ ದೃಢಪಟ್ಟಿದ್ದು, ಕಾನೂನು ಕ್ರಮ ಜರುಗಿಸಬೇಕೆಂದು ಬೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ರವಿಕಿರಣ ದೂರಿನಲ್ಲಿ ವಿವರಿಸಿದ್ದಾರೆ. ಕ್ರಿಮಿನಲ್ ವಿಶ್ವಾಸಘಾತುಕತನ, ಸಾರ್ವಜನಿಕ ನೌಕರನಾಗಿ ಸ್ವತ್ತಿನ ದುರುಪಯೋಗ, ಮೋಸ, ವಂಚನೆ ಮುಂತಾದ ಬಿಎನ್ಎಸ್ ಕಲಂಗಳಡಿ ಸೋಮವಾರ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹರಿಹರದ ಬೆಸ್ಕಾಂ ವಿಭಾಗೀಯ ಉಗ್ರಾಣಕ್ಕೆ ಹರಿಹರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.