ಬೈಂದೂರು ರೈತ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ 12ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರದ ಧರಣಿ ನೇತೃತ್ವವನ್ನು ವಸ್ರೆ, ಮೈಕಳ ಭಾಗದ ರೈತರು ವಹಿಸಿದ್ದು ತಾಲೂಕು ಆಡಳಿತ ಸೌಧಕ್ಕೆ ಕೋಣಗಳನ್ನು ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಕೋಣಗಳನ್ನು ಮೆರವಣಿಗೆ ಮೂಲಕ ಕರೆ ತಂದು ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ಕಂಬಳದ ಅಣುಕು ಪ್ರದರ್ಶನ ನಡೆಯಿತು. ಜಿಲ್ಲಾ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ, ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು ಮಾತನಾಡಿ, ಬೈಂದೂರಿನಲ್ಲಿ ಗ್ರಾಮೀಣ ಭಾಗದ ರೈತರಿಗೆ ಅನ್ಯಾಯವಾಗಿದೆ. ಜಿಲ್ಲಾಡಳಿತ ಸರಕಾರ ಪಕ್ಷಾತೀತವಾಗಿ ರಾಜಕೀಯ ನಾಯಕರು ತಮ್ಮ ರಾಜಕೀಯ ಉದ್ದೇಶ ಕೈಬಿಟ್ಟು ರೈತರ ಪರ ನಿಲ್ಲಬೇಕಿದೆ. ಸಂಸದರು, ಉಸ್ತುವಾರಿ ಸಚಿವರು ಆದಷ್ಟು ಶೀಘ್ರ ಭೇಟಿ ನೀಡಿ ರೈತರ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಯು.ಬಿ.ಶೆಟ್ಟಿ ರೈತ ನಿಯೋಗವನ್ನು ಭೇಟಿ ಮಾಡಿ ಸರಕಾರದ ಮಟ್ಟದಲ್ಲಿ ಸಹಕಾರ ನೀಡುವ ಭರವಸೆ ನೀಡಿದರು. ವಸ್ರೆ ಭಾಗದ ಮಾಜಿ ಗ್ರಾ.ಪಂ ಸದಸ್ಯ ರಾಜು ಪೂಜಾರಿ, ಸೋಮಯ್ಯ ಪೂಜಾರಿ ಸಹಿತ ನೂರಾರು ರೈತರು ಧರಣಿಯಲ್ಲಿ ಭಾಗವಹಿಸಿದ್ದರು. ಅರುಣ್ ಕುಮಾರ್ ಶಿರೂರು ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ವೀರಭದ್ರ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು.
