ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಮುಂದಿನ 10 ದಿನಗಳ ವರೆಗೆ ಮುಂದುವರೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಸೆ.22 ರಿಂದ ಆರಂಭವಾಗಿರುವ ಸಮೀಕ್ಷಾ ಕಾರ್ಯ ಅ.7ರವರೆಗೆ ನಡೆಯಲಿದೆ. ದಸರಾ ನಿಮಿತ್ತ ಶಾಲಾ, ಕಾಲೇಜುಗಳಿಗೆ ರಜೆ ನೀಡಿರುವುದರಿಂದ ಪೋಷಕರು ಕುಟುಂಬ ಸಮೇತ ತಮ್ಮ ಸ್ವಂತ ಊರುಗಳಿಗೆ, ಪ್ರವಾಸಕ್ಕೆ ತೆರಳಿರುತ್ತಾರೆ. ಪರಿಣಾಮವಾಗಿ ಸಮೀಕ್ಷೆ ನಡೆಸುವ ಸರ್ಕಾರದ ಉದ್ದೇಶ ಪರಿಪೂರ್ಣವಾಗಿ ಈಡೇರುವುದಿಲ್ಲ. ದಲಿತ, ಹಿಂದುಳಿದ ವರ್ಗಗಳು ಹಾಗೂ ಬಡವರ ಪಾಲಿಗೆ ಬಹು ಮುಖ್ಯವಾದ ಈ ಸಮೀಕ್ಷೆ ಪರಿಪೂರ್ಣವಾಗಬೇಕಿದೆ. ಹೀಗಾಗಿ ಸಮೀಕ್ಷಾ ಕಾರ್ಯವನ್ನು ಅ.17ರವರೆಗೆ ಮುಂದುವರೆಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಈ ಹಿಂದೆ 158 ಕೋಟಿ ಅನುದಾನ ಖರ್ಚು ಮಾಡಿ ರಾಜ್ಯ ಸರ್ಕಾರದಿಂದ ಜಾತಿ ಸಮೀಕ್ಷೆ ನಡೆಸಲಾಯಿತು, ಆದರೆ ಆ ಸಮೀಕ್ಷಾ ಕಾರ್ಯ ತಾರ್ಕಿಕ ಹಂತಕ್ಕೆ ತಲುಪಲಿಲ್ಲ. ಈ ಬಾರಿಯ ಸಮೀಕ್ಷಾ ಕಾರ್ಯ ತಾರ್ಕಿಕ ಹಂತಕ್ಕೆ ತಲುಪಬೇಕು, ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಸಾಪಲ್ಯತೆ ಪಡೆಯಬೇಕೆಂದು” ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ತುಂಗಭದ್ರಾ ನದಿಯಲ್ಲಿ ವೃದ್ಧೆ ಆತ್ಮಹತ್ಯೆ ಯತ್ನ: ರಕ್ಷಿಸಿದ ಹರಿಹರ ಪೊಲೀಸರು
ಬಲಾಢ್ಯರು, ಸ್ಥಿತಿವಂತರು, ಮನುಸ್ಮೃತಿ ಆರಾಧಕರು ಈ ಸಮೀಕ್ಷೆ ಯಶಸ್ವಿಯಾಗದಂತೆ ತಡೆಯಲು ಹುನ್ನಾರ ನಡೆಸಿದ್ದಾರೆ. ಬಡವರ ಪರ ಇರುವ ಈ ಸಮೀಕ್ಷಾ ಕಾರ್ಯಕ್ಕೆ ಎಲ್ಲಾ ಧರ್ಮ, ಜಾತಿ, ಪಂಗಡದವರು ಸಹಕರಿಸಿ ಯಶಸ್ವಿಗೊಳಿಸಬೇಕಾಗಿ ಕೋರಿದ್ದಾರೆ.