“ಹಸು ಆಮ್ಲಜನಕ ಉಸಿರಾಡಿ ಆಮ್ಲಜನಕವನ್ನೇ ಹೊರಬಿಡುತ್ತದೆ ಎನ್ನುವ ಅವೈಜ್ಞಾನಿಕ ಮಿಥ್ಯ ಹರಡಲಾಗುತ್ತಿದೆ. ಹಸುವಿನ ಗಂಜಲದಿಂದ ಇಂದು ಕ್ಯಾನ್ಸರ್ ವಾಸಿ ಮಾಡುತ್ತೇವೆ ಎನ್ನುವಂತಹ ವೈದಿಕ ಮೂಲ ಹುಟ್ಟಿಕೊಂಡಿದೆ. ಮಂಗನಿಂದ ಮಾನವ ಹುಟ್ಟಿದನ್ನು ನಾನು ನೋಡಿಲ್ಲ ಎನ್ನುತ್ತಾ ವಿಜ್ಞಾನ, ವೈಚಾರಿಕತೆ ನಿರಾಕರಿಸುವ ಯತ್ನ ಅಧಿಕಾರಶಾಹಿಗಳಿಂದ ನಡೆಯುತ್ತಿದ್ದು, ಸಮಾಜ ಯಾವ ನಿಟ್ಟಿನಲ್ಲಿ ಸಾಗುತ್ತಿದೆ. ಇದರಿಂದ ಯುವ ಸಮೂಹ ಕಲಿಯುವುದೇನನ್ನು ಎನ್ನುವ ಆತಂಕವೂ ಎದುರಾಗಿದೆ” ಎಂದು ದಾವಣಗೆರೆಯಲ್ಲಿ ಚಿಂತಕ, ಹಿರಿಯ ಸಾಹಿತಿ ಜಿ ರಾಮಕೃಷ್ಣ ಕಳವಳ ವ್ಯಕ್ತಪಡಿಸಿದರು.

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಬೆಂಗಳೂರು ದಾವಣಗೆರೆ ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೊ. ಬಿವಿ ವೀರಭದ್ರಪ್ಪ ವೈಚಾರಿಕ ಸಾಹಿತ್ಯ-ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಸಾಹಿತಿ, ಚಿಂತಕರಾದ ಜಿ. ರಾಮಕೃಷ್ಣ ಮಾತನಾಡಿದರು.

“ಪ್ರಶ್ನೆ ಮಾಡುವುದೇ ವೈಚಾರಿಕತೆ. ಅದು ಪ್ರಶ್ನೆ ಮಾಡುವ ಗುಣ. ವೈಚಾರಿಕ ವಿಚಾರಗಳ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಖಚಿತವಾಗಿ ಸತ್ಯವನ್ನು ತಿಳಿಯುವ ತನಕ ಪ್ರಶ್ನೆ ಮಾಡುವುದನ್ನು ಮುಂದುವರೆಸುವುದೇ ವೈಚಾರಿಕತೆಯ ಮೂಲ. ಅಸಮಾನತೆ ಮತಾಂತರದ ಮೂಲ ಕಾರಣ. ಧರ್ಮ ಆರಿಸಿಕೊಳ್ಳುವ ಸ್ವಾತಂತ್ರ್ಯ ಅವರವರ ಹಕ್ಕು. ಶೋಷಣೆಯಿಂದ ಬಿಡುಗಡೆ ಹೊಂದಲೂ ಕೂಡ ವಿರೋಧವೇಕೆ?” ಎಂದು ಪ್ರಶ್ನಿಸಿದರು.
“ವೈದಿಕ ಧರ್ಮದಲ್ಲಿ ವೇದ ಪುರಾಣಗಳನ್ನು ಅಪೌರುಷೇಯ, ಮನುಷ್ಯರು ಬರೆದದ್ದಲ್ಲ ಎನ್ನುತ್ತಾರೆ.
ಬೈಬಲ್, ಕುರಾನ್, ಭಗವದ್ಗೀತೆ, ವೇದ ಸೇರದಂತೆ ಎಲ್ಲವನ್ನು ಅಪೌರುಷೇಯ ಎನ್ನುತ್ತಾರೆ. ಆದರೆ ಅಪೌರುಷೇಯ ಎನ್ನುವುದು ಸಾಮಾನ್ಯ ಮನುಷ್ಯನ ಚಿಂತನೆಗೆ ನಿಲುಕದ್ದು. ಯಾವುದೋ ಜನಗಳಿಗೆ ಉಪಯುಕ್ತವೋ ಅದು ಅಪೌರುಷೇಯ ಆಗಬೇಕು” ಎಂದು ಅಭಿಪ್ರಾಯಪಟ್ಟರು.

“ಜ್ಞಾನ ಯಾವ ರೂಪದಲ್ಲಿ ಹೇಗೆ ವಿಕಾಸವಾಗುತ್ತದೆ ಎನ್ನುವುದೇ ತತ್ವಜ್ಞಾನ. ಜ್ಞಾನ ಎನ್ನುವುದಕ್ಕೆ ಅಂತಿಮವೇ ಇಲ್ಲ. ಅದು ಸತತವಾಗಿ ಯಾವಾಗಲೂ ನಿತ್ಯವಾಗಿ ಮುಂದುವರೆಯುತ್ತದೆ. ಮುಖ್ಯವಾಗಿ ಜ್ಞಾನ ಮತ್ತು ತರ್ಕವನ್ನು ವೈಚಾರಿಕತೆ ಕಲಿಸುತ್ತದೆ. ಬುದ್ಧ ವೈದಿಕ ಆಚರಣೆಗಳನ್ನು ಮುಖ್ಯವಾಗಿ ವಿರೋಧ ಮಾಡಿದ ವ್ಯಕ್ತಿ. ಹಳೆಯ ನಂಬಿಕೆ, ಸಂಪ್ರದಾಯಗಳನ್ನು ಪ್ರಶ್ನೆ ಮಾಡುವ ಗುಣವನ್ನು ಹಣ ಬೆಳೆಸಿಕೊಳ್ಳಬೇಕು. ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬಾರದು ಎನ್ನುವ ವೈಚಾರಿಕತೆಯ ತರ್ಕವನ್ನು ಬುದ್ಧ ಮುಂದಿಟ್ಟಿದ್ದಾನೆ. ಅದೇ ರೀತಿ ಪ್ರೊ ಬಿ ವಿ ವೀರಭದ್ರಪ್ಪನವರ ಬರಹಗಳು ಕೂಡ ವೈಚಾರಿಕ ಚಿಂತನೆಗೆ ಹಚ್ಚುತ್ತವೆ” ಎಂದು ಅಭಿಪ್ರಾಯಪಟ್ಟರು.
“ನಮ್ಮ ಸುತ್ತಲಿನ ಜಾಡಮಾಲಿಗಳಿಗೆ ಮುಟ್ಟಿಸಿಕೊಳ್ಳುವಲ್ಲಿ, ಭೂರಹಿತರಿಗೆ ನ್ಯಾಯ ನೀಡುವಲ್ಲಿ, ಅಸ್ಪೃಶ್ಯತೆ ತೊಡೆದು ಹಾಕಲು ದರ್ಶನಗಳಲ್ಲಿ ಏನನ್ನು ಮಂಡನೆ ಮಾಡಿದ್ದಾರೆ. ಅವುಗಳನ್ನು ಪ್ರಶ್ನೆ ಮಾಡಿ ಮಾನವೀಯ ಮೌಲ್ಯಗಳನ್ನು ಹುಡುಕಬೇಕು. ಅಂತಹ ತರ್ಕ ಬೆಳೆಸಲು ಪ್ರೊ ಬಿ ವಿ ವೀರಭದ್ರಪ್ಪನವರ ಬರಹಗಳನ್ನು ಓದಿಕೊಂಡರೆ ಇಂತಹದು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷೆ ಸುಜಾತ ಮಾತನಾಡಿ,” ಹಾವೇರಿಯ ಬಳಿ ಶೇಷಗಿರಿ ಎನ್ನುವುದೊಂದು ಗಾಂಧಿಗ್ರಾಮ. ಎಲ್ಲಾ ರೀತಿಯ ಜಾತಿಯ ವರ್ಗದವರು ಸಮಾನತೆಯಿಂದ ರಂಗ ಚಟುವಟಿಕೆಯಲ್ಲಿ ತೆರೆದುಕೊಳ್ಳುತ್ತಾರೆ. ದಾವಣಗೆರೆಗೆ ಹತ್ತಿರದಲ್ಲೇ ಇರುವ ಶಾಂತಿಸಾಗರ ಎನ್ನುವಂತಹ ಕೆರೆಯೊಂದು ಭಾವನೆಗಳು ತುಂಬಿ ನಿಂತ ಹೆಣ್ಣಿನ ಅಂತರಂಗದಂತೆ ಕಾಣುತ್ತದೆ. ಇಲ್ಲಿಯ ಕಾಡಶೆಟ್ಟಿಹಳ್ಳಿಯಿಂದ ಪುಟ್ಟರಾಜ ಗವಾಯಿಗಳು, ಹತ್ತಿರದಲ್ಲೇ ಲಂಕೇಶರ ಊರು, ಸರ್ವಜ್ಞನ ಆಬಲೂರು , ಶರೀಫಜ್ಜನ ಶಿಶುನಾಳ, ಕನಕನ ಕಾಗಿನೆಲೆಗಳು ಹತ್ತಿರವಿರುವ ದಾವಣಗೆರೆಯಲ್ಲಿ ವೈಚಾರಿಕತೆಗೆ ಹೆಸರಾದ
ಪ್ರೊ ಬಿ ವಿ ವೀರಭದ್ರಪ್ಪನವರು ಕೂಡ ಇದೇ ನಾಡಿನವರು. ಹಲವು ದೇವಸ್ಥಾನಗಳಿರುತ್ತವೆ, ಆದರೆ ದೇವರು ಇರುತ್ತಾನೋ, ಇಲ್ಲವೋ ಗೊತ್ತಿಲ್ಲ. ಪೂಜಾರಿ ಮಾತ್ರ ಇರುತ್ತಾನೆ. ಜನರ ಸಾಂಸ್ಕೃತಿಕ ನಂಬಿಕೆಯನ್ನು ಮೂಢನಂಬಿಕೆಯನ್ನಾಗಿಸಿದೆ ಶೋಷಿಸಲಾಗುತ್ತಿದೆ. ಧರ್ಮ, ರಾಜಕೀಯ, ಜಾತಿಗಳು ಬೇರೂರಿದೆ. ಇವುಗಳನ್ನು ತೊಡೆದು ಹಾಕಲು ವೈಚಾರಿಕತೆ ಬೆಳೆಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ “ಧರ್ಮ ಮತ್ತು ವೈಚಾರಿಕತೆ” “ಮಹಿಳಾ ಮತ್ತು ದಲಿತ ನೋಟ” ವಿಷಯ ಕುರಿತು ವಿಷಯ ಕುರಿತು ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ತುಂಗಭದ್ರಾ ನದಿಯಲ್ಲಿ ವೃದ್ಧೆ ಆತ್ಮಹತ್ಯೆ ಯತ್ನ: ರಕ್ಷಿಸಿದ ಹರಿಹರ ಪೊಲೀಸರು.
ಕಾರ್ಯಕ್ರಮದಲ್ಲಿ ಐಜಿಪಿ ಡಾ.ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಪ್ರತಿಷ್ಠಾನದ ರಾಜೇಂದ್ರ ಪ್ರಸಾದ್, ಚಂದ್ರಮೌಳಿ ಆರ್., ಪ್ರಾಧ್ಯಾಪಕಿ ಡಾ.ಎಂ.ಎಸ್. ಆಶಾದೇವಿ, ಹಿರಿಯ ಬರಹಗಾರರಾದ ಸತೀಶ್ ಕುಲಕರ್ಣಿ, ಪ್ರಾಧ್ಯಾಪಕಿ ಡಾ.ಅನಸೂಯಾ ಕಾಂಬ್ಳೆ, ಕಥೆಗಾರರು, ಉಪನ್ಯಾಸಕರಾದ ಡಾ. ರವಿಕುಮಾರ್ ನೀಹ, ಸುಧಾ ಬಿ.ವಿ., ಮಲ್ಲಿಕಾರ್ಜುನ ಕಡಕೋಳ, ಪ್ರೊ. ಎಂ. ಬಸವರಾಜ್, ಶಿವನಕೆರೆ ಬಸವಲಿಂಗಪ್ಪ, ಬಿ.ಟಿ. ಜಾಹ್ನವಿ, ದಾದಾಪೀರ್ ನವಿಲೇಹಾಳ್, ಡಾ. ಮಂಜಣ್ಣ, ಡಾ. ಮಹಾಂತೇಶ ಪಾಟೀಲ, ಡಾ. ಶಿವಕುಮಾರ ಕಂಪ್ಲಿ, ಡಾ. ಕಾವ್ಯಶ್ರೀ ನಾಗಭೂಷಣ, ಬಾ.ಮ. ಬಸವರಾಜಯ್ಯ, ಕಂನಾಡಿಗ ನಾರಾಯಣ, ಬಿ.ಎನ್.ಮಲ್ಲೇಶ್, ಸಿದ್ದರಾಜು, ಪ್ರೊ. ಎ.ಬಿ. ರಾಮಚಂದ್ರಪ್ಪ, ಕಲಾವಿದ ಮಹಾಲಿಂಗಪ್ಪ, ಡಾ. ರಾಧಮ್ಮ, ಡಾ. ಫಕ್ಕಿರೇಶ ಹಳ್ಳಳ್ಳಿ, ಡಾ. ರುದ್ರಮುನಿ ಹಿರೇಮಠ, ಆವರಗೆರೆ ರುದ್ರಮುನಿ, ಜಾಹ್ನವಿ, ನಿರಂಜನ್ ಸೇರಿದಂತೆ ಇತರ ಚಿಂತಕರು, ಸಾಹಿತಿಗಳು, ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.