ವೈದ್ಯಕೀಯ ಪದವಿಗೆ ಅಗತ್ಯವಿರುವ ಎಲ್ಲ ಅರ್ಹತೆಗಳಿದ್ದರೂ 2017 – 18ನೇ ಸಾಲಿನಲ್ಲಿ ಎಂಬಿಬಿಎಸ್ ಆಕಾಂಕ್ಷಿಯಾಗಿದ್ದ ವಿದ್ಯಾರ್ಥಿನಿಗೆ ಸೀಟು ನೀಡುವುದಾಗಿ ಭರವಸೆ ನೀಡಿ ನಿರಾಕರಿಸಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಒಡೆತನದ ತುಮಕೂರಿನ ಸಿದ್ದಾರ್ಥ ಉನ್ನತ ಶಿಕ್ಷಣ ಸಂಸ್ಥೆಗೆ 15 ಲಕ್ಷ ರೂ. ಪರಿಹಾರ ಪಾವತಿಸುವಂತೆ ನಿರ್ದೇಶನ ನೀಡಿದೆ.
ವಿದ್ಯಾರ್ಥಿನಿಗಾಗಿರುವ ಕಾನೂನುಬಾಹಿರ ತೊಂದರೆಗೆ ಶಿಕ್ಷಣ ಸಂಸ್ಥೆಯೇ ಜವಾಬ್ದಾರಿ ಎಂದು ಹೇಳಿರುವ ನ್ಯಾಯಪೀಠ, ‘ಮುಂದಿನ ಎರಡು ತಿಂಗಳಲ್ಲಿ ಪರಿಹಾರ ಮೊತ್ತ ಪಾವತಿಸಬೇಕು’ ಎಂದು ನಿರ್ದೇಶಿಸಿ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಕೆ. ಮನ್ಮಧರಾವ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಏನಿದು ಪ್ರಕರಣ
2017ರಲ್ಲಿ ವಿ. ಸಂಜನಾ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ 1,95,911 ರಾಂಕ್ ಪಡೆದುಕೊಂಡಿದ್ದರು. 2017ರ ಸೆ.1 ರಂದು ಸಿದ್ಧಾರ್ಥ ಅಕಾಡೆಮಿ ನಡೆಸಿದ್ದ ಕೌನ್ಸೆಲಿಂಗ್ನಲ್ಲಿ ಮೂಲ ದಾಖಲೆಗಳ ಜತೆಗೆ, 15.6 ಲಕ್ಷ ರೂ. ಡಿಡಿ ಸಲ್ಲಿಸಿದ್ದರು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮೌಖಿಕವಾಗಿ ತಿಳಿಸಿದ್ದರೂ, ಈ ಸಂಬಂಧ ಯಾವುದೇ ರಸೀದಿ ಇಲ್ಲವೇ ಸೀಟು ಹಂಚಿಕೆ ಪತ್ರ ನೀಡಿರಲಿಲ್ಲ.
ಕೆಲ ದಿನಗಳ ಬಳಿಕ 52 ಲಕ್ಷ ರೂ. ಬ್ಯಾಂಕ್ ಗ್ಯಾರಂಟಿ ನೀಡಬೇಕೆಂದು ಶಿಕ್ಷಣ ಸಂಸ್ಥೆ ಒತ್ತಾಯಿಸಿತ್ತು. ಅದನ್ನೂ ವ್ಯವಸ್ಥೆ ಮಾಡಿ ಗ್ಯಾರಂಟಿ ಸಲ್ಲಿಸಿದ್ದರು. ಆದರೆ, ಪ್ರವೇಶ ಸಂಬಂಧ ವಿದ್ಯಾರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಬ್ಯಾಂಕ್ ಗ್ಯಾರಂಟಿ ಸ್ವೀಕರಿಸುವುದಕ್ಕೆ ಸಾಧ್ಯವಿಲ್ಲವೆಂದು ತಿಳಿಸಿ ನಿರಾಕರಿಸಲಾಗಿತ್ತು. ಅದನ್ನು ಪ್ರಶ್ನಿಸಿ ಸಂಜನಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿವಿಯ ವಾದ ತಿರಸ್ಕರಿಸಿರುವ ನ್ಯಾಯಪೀಠ, ” ಮಂದಿನ ವರ್ಷ ಸೀಟು ನೀಡುವುದಾಗಿ ಕುಲಪತಿ ನೀಡಿದ್ದಾರೆಂಬ ಪತ್ರದಲ್ಲಿಕುಲಪತಿ, ಪ್ರಾಂಶುಪಾಲರು ಮತ್ತು ಅರ್ಜಿದಾರರ ಸಹಿಗಳಿವೆ. ಈ ಪತ್ರವನ್ನು ಬಲವಂತವಾಗಿ ಪಡೆದುಕೊಂಡಿದ್ದಾರೆ ಎಂಬುದರ ಸಂಬಂಧ ದೂರು ದಾಖಲಾಗಿಲ್ಲ. ಜತೆಗೆ, ಅರ್ಜಿದಾರರಾದ ಸಂಜನಾ ನಿಗದಿತ ದಿನಕ್ಕೂ ಮೊದಲೇ ಶುಲ್ಕ ಪಾವತಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಎಲ್ಲಅಗತ್ಯತೆಗಳನ್ನು ಪೂರೈಸಿದ್ದಾರೆ. ತಕ್ಷಣ ಬ್ಯಾಂಕ್ ಗ್ಯಾರಂಟಿ ನೀಡಿದ್ದಾರೆ. ಹಾಗಾಗಿ, 15 ಲಕ್ಷ ರೂ. ಪರಿಹಾರ ನೀಡಬೇಕು,” ಎಂದು ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು, ”ಅರ್ಜಿದಾರರಿಗೆ ಸೀಟು ನೀಡುವುದಕ್ಕೆ ನಿರಾಕರಿಸಿದ್ದು, ಅವರಿಗಿಂತಲೂ ಕಡಿಮೆ ರ್ಯಾಂಕ್ ಪಡೆದಿದ್ದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ 2018 – 19ನೇ ಶೈಕ್ಷಣಿಕ ಸಾಲಿನಲ್ಲಿ ಉಚಿತ ಸೀಟು ನೀಡುವುದಾಗಿ ವಿವಿ ಕುಲಪತಿ ಭರವಸೆ ಪತ್ರ ನೀಡಿದ್ದರು. ಆದರೆ, ಅದನ್ನು ಈಡೇರಿಸಿಲ್ಲ. ಇದರಿಂದ ಮತ್ತೆ 2018ರಲ್ಲಿ ಕೆಇಎ ಮೂಲಕ ಕೌನ್ಸೆಲಿಂಗ್ಗೆ ಹಾಜರಾಗಿ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು ಕಾಲೇಜು ಶುಲ್ಕವಾಗಿ 24.2 ಲಕ್ಷ ರೂ. ಪಾವತಿ ಮಾಡಲಾಗಿದೆ,” ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.