ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರಿಗೆ ಹುಷಾರ್ ಆಗಿ ಇರಲು ಹೇಳಿ. ಅವರೇ ಹೇಳಿದ ಹಾಗೇ ನಾನು ಭ್ರಷ್ಟರ ಪಾಲಿಗೆ ಡಾಬರಮನ್ ನಾಯಿಯೇ ಎಂದು ಬಿಜೆಪಿ ಶಾಸಕ ಬಿಪಿ ಹರೀಶ್ ತಿರುಗೇಟು ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, “ಡಾಬರಮನ್ ನಾಯಿ ಬಾಯಿ ಹಾಕಿದರೆ ಎಲ್ಲಿ ಹಾಕುತ್ತದೆ ಅವರಿಗೆ ಗೊತ್ತಿದೆ. ನಾನು ಅಷ್ಟು ಸುಲಭಕ್ಕೆ ಬಿಡುವ ಮನುಷ್ಯ ಅಲ್ಲ. ಅಧಿಕಾರಿಗಳನ್ನು ಬಳಸಿಕೊಂಡು ಸಚಿವ ಮಲ್ಲಿಕಾರ್ಜುನ್ ಎಫ್ಐಆರ್ ಮಾಡಿಸಿದ್ದಾರೆ. ನಾನು ನೀಡಿದ ಹೇಳಿಕೆಗೆ ಈಗಲೂ ಬದ್ಧ” ಎಂದಿದ್ದಾರೆ.
“ಎಸ್ಪಿಗೆ ನಾನು ಪೊಮೆರೇನಿಯನ್ ನಾಯಿ ಎಂದು ಹೇಳಿಲ್ಲ. ಪೊಮೆರೇನಿಯನ್ ನಾಯಿ ಮರಿಗಳಂತೆ ಅಧಿಕಾರಿಗಳು ಉಸ್ತುವಾರಿ ಸಚಿವರ ಹಿಂದೆ ಸುತ್ತುತ್ತಿದ್ದಾರೆ ಎಂದು ಹೇಳಿದ್ದೇನೆ. ಎಸ್ಪಿ ಉಮಾ ಪ್ರಶಾಂಶ್ಗೆ ಬೇಸರ ಆಗಿದ್ದರೆ ನಾನೇನು ಮಾಡಲು ಆಗುವುದಿಲ್ಲ” ಎಂದರು.
ಎಸ್ಪಿಗೆ ಅವಹೇಳ ಪ್ರಕರಣ ವಿಚಾರವಾಗಿ ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ಅರ್ಜಿ ರದ್ದು ಪಡಿಸಬೇಕೆಂದು ಕೋರಿ ಶಾಸಕ ಬಿಪಿ ಹರೀಶ್ ಹೈಕೋರ್ಟ ಮೊರೆ ಹೋಗಿದ್ದರು. ವಿಚಾರಣೆ ನಡೆಸಿ ಶಾಸಕ ಬಿಪಿ ಹರೀಶ್ ವಿರುದ್ದ ಅವಸರದ ಕ್ರಮ ಬೇಡ ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ನ್ಯಾಯಮೂರ್ತಿ ಎಂ.ಐ. ಅರುಣ್ ಆದೇಶಿಸಿದ್ದಾರೆ.
ಬಿ.ಪಿ.ಹರೀಶ್ಗೆ ಶಿಕಾರಿಪುರ ಡಿವೈಎಸ್ಪಿಯಿಂದ ನೋಟಿಸ್
ಇನ್ನು ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಕೀಳುಮಟ್ಟದ ಹೇಳಿಕೆ ವಿಚಾರವಾಗಿ ಶಾಸಕ ಬಿ.ಪಿ.ಹರೀಶ್ಗೆ ಶಿಕಾರಿಪುರ ಡಿವೈಎಸ್ಪಿಯಿಂದ ನೋಟಿಸ್ ನೀಡಲಾಗಿದ್ದು, ಸೆ.17ರಂದು ಬೆಳಗ್ಗೆ 10 ಗಂಟೆಗೆ ಶಿಕಾರಿಪುರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.