ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಅಧಿಕಾರ ದುರ್ಬಳಕೆಯ ಗಂಭೀರ ಆರೋಪಗಳು ಕೇಳಿಬಂದಿವೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದರೂ ಜೋಶಿ ವಿಚಾರಣೆ ಹಾಜರಾಗಿಲ್ಲ. ಆದ್ದರಿಂದ, ಶೀಘ್ರದಲ್ಲೇ ಕಸಾಪಗೆ ಆಡಳಿತಾಧಿಕಾರಿ ನೇಮಕ ಮಾಡುವ ಸಾಧ್ಯತೆ ಇದೆ.
ಮಹೇಶ್ ಜೋಶಿ ಅವರು ಹಣಕಾಸಿನ ಅವ್ಯವಹಾರ ನಡೆಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಇವೆ. ಇದೇ ಕಾರಣಕ್ಕಾಗಿ, ಇದೇ ವರ್ಷದ ಜುಲೈನಲ್ಲಿ ಕಸಾಪಗೆ ವಿಚಾರಣಾ ಅಧಿಕಾರಿಯನ್ನು ಸಹಕಾರ ಇಲಾಖೆ ನೇಮಿಸಿತ್ತು. ಇದೀಗ, ಆಡಳಿತಾಧಿಕಾರಿಯ ನೇಮಕ ಮಾಡಲು ಸರ್ಕಾರ ಮುಂದಾಗಿದೆ ಎಂದು ‘ಪ್ರಜಾವಾಣಿ’ ವರದಿ ಮಾಡಿದೆ.
ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧದ ಆರೋಪಗಳನ್ನು ಸಹಕಾರ ಇಲಾಖೆ ಗಂಭೀರವಾಗಿ ಪರಿಗಣಿಸಿತ್ತು. ಆರೋಪಗಳ ಕುರಿತು ತನಿಖೆ ನಡೆಸಲು ಮುಂದಾಗಿತ್ತು. ಆದರೆ, ಜೋಶಿ ಅವರು ನಿಗದಿತ ಕಾಲಾವಧಿಯಲ್ಲಿ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡಿದ್ದಾರೆ. ಅಗತ್ಯ ದಾಖಲಾತಿಗಳನ್ನು ಒದಗಿಸುವಲ್ಲಿ ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಜೋಶಿ ಅವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಧೋರಣೆಯ ವಿರುದ್ದ ಅಸಮಾಧಾನಗೊಂಡಿದ್ದ ಸಹಕಾರ ಇಲಾಖೆಯು ಕಸಾಪಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದೆ. ಆ ಕಡತವನ್ನು ಮುಖ್ಯಮಂತ್ರಿ ಕಚೇರಿಗೆ ತಲುಪಿಸಲಾಗಿದೆ. ಈ ಬಗ್ಗೆ ಪರಿಶೀಲನೆಗಳು ನಡೆಯುತ್ತಿದ್ದು, ಇನ್ನೊಂದು ತಿಂಗಳೊಳಗೆ ಆಡಳಿತಾಧಿಕಾರಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆ: ಒಬಿಸಿಗಳಿಗೆ ವಂಚಿಸಲು ಬಿಜೆಪಿ ನಾಯಕರ ಯತ್ನ?
ಕಳೆದ ತಿಂಗಳು (ಸೆಪ್ಟೆಂಬರ್) 22ರಂದು ವಿಚಾರಣೆಗೆ ಹಾಜರಾಗುವಂತೆ ಜೋಶಿ ಅವರಿಗೆ ಸಹಕಾರ ಇಲಾಖೆಯ ಕಾರ್ಯದರ್ಶಿ ನೋಟಿಸ್ ಜಾರಿಮಾಡಿದ್ದರು. ನೋಟಿಸ್ನಲ್ಲಿ; “ತಮ್ಮ ವಿರುದ್ಧದ ಆರೋಪಗಳು ಸತ್ಯವೆಂಬುದು ಮೇಲ್ನೋಟಕ್ಕೆ ಕಾಣುತ್ತಿವೆ. ಕಸಾಪಗೆ ಆಡಳಿತಾಧಿಕಾರಿಯನ್ನು ಏಕೆ ನೇಮಕ ಮಾಡಬಾರದು” ಎಂದು ಪ್ರಶ್ನಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಜೋಶಿ ಅವರು ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು, ತಮ್ಮ ಸಹೋದರಿ ಪತಿ ಲಿಂಗರಾಜ ಕುರ್ತಕೋಟಿ ಅವರು ಮೃತಪಟ್ಟಿದ್ದು, ಲಿಖಿತ ಹೇಳಿಕೆ ನೀಡಲು ಮತ್ತು ವಿಚಾರಣೆಗೆ ಹಾಜರಾಗಲು 15 ದಿನಗಳ ಕಾಲಾವಕಾಶ ಬೇಕೆಂದು ಕೇಳಿದ್ದರು.
ಕಳೆದ ಒಂದು ವರ್ಷದಿಂದ ಕಸಾಪ ಅಧ್ಯಕ್ಷರ ಧೋರಣೆ, ನಡವಳಿಕೆ ಹಾಗೂ ಅವರ ಅಧಿಕಾರಗಳ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. 2022ರ ಆಗಸ್ಟ್ನಿಂದ ಮಹೇಶ್ ಜೋಶಿ ಅವರು ಕಸಾಪ ಅಧ್ಯಕ್ಷರಾಗಿದ್ದಾರೆ. ಆಗಿನ ಬಿಜೆಪಿ ಸರ್ಕಾರ, ಅವರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಿ, ಹಲವು ಸೌಲಭ್ಯಗಳನ್ನು ಒದಗಿಸಿತ್ತು. ಆದರೆ, ಜೋಶಿ ವಿರುದ್ಧ ಹಣಕಾಸು ಮತ್ತು ಅಧಿಕಾರ ದುರ್ಬಳಕೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ 2025ರ ಮೇ 31ರಂದು ಅವರಿಗೆ ನೀಡಲಾಗಿದ್ದ ಸಚಿವ ಸಂಪುಟ ಮಟ್ಟದ ಸ್ಥಾನಮಾನಗಳನ್ನು ಸರ್ಕಾರವು ಹಿಂಪಡೆದುಕೊಂಡಿತು.