ಕನ್ನಡದ ಹಿರಿಯ ಸಾಹಿತಿ, ಕಥೆಗಾರ, ವಿಮರ್ಶಕ ಮತ್ತು ದಲಿತ ಕಾವ್ಯ ಚಳವಳಿಯ ಪ್ರಮುಖ ಧ್ವನಿಯಾಗಿದ್ದ ಡಾ. ಮೊಗಳ್ಳಿ ಗಣೇಶ್ಇಂದು ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಗಣೇಶ್ ಅವರ ನಿಧನದಿಂದ ಕನ್ನಡದ ಪ್ರಗತಿಪರ ಸಾಹಿತ್ಯ ಲೋಕವು ತನ್ನ ಅತ್ಯಂತ ಪ್ರಭಾವಿ ಧ್ವನಿಯನ್ನು ಕಳೆದುಕೊಂಡಂತಾಗಿದೆ.
ಮೃತರು ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರ ನಿಧನದ ಸುದ್ದಿ ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಆಘಾತವನ್ನುಂಟುಮಾಡಿದ್ದು, ಅನೇಕ ಸಾಹಿತಿಗಳು ಮತ್ತು ಓದುಗರು ಶೋಕ ವ್ಯಕ್ತಪಡಿಸಿದ್ದಾರೆ.
ಡಾ. ಮೊಗಳ್ಳಿ ಗಣೇಶ್ ಅವರು 1963ರ ಜುಲೈ 1ರಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಂತೇಮೊಗಳ್ಳಿ ಗ್ರಾಮದಲ್ಲಿ ಜನಿಸಿದರು. ಹಳ್ಳಿಯ ಸರಳ ಜೀವನದ ಅನುಭವಗಳು ಅವರ ಸಾಹಿತ್ಯದಲ್ಲಿ ಮಣ್ಣಿನ ವಾಸನೆಯನ್ನು ತುಂಬಿದವು. ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೇ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದರು. ನಂತರ ಜಾನಪದ ಅಧ್ಯಯನದಲ್ಲಿ ಡಾಕ್ಟರೇಟ್ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿ, ಕೊನೆಗೆ ವಿಭಾಗದ ಮುಖ್ಯಸ್ಥರಾದರು. ಅವರ ಸಂಶೋಧನಾ ಕೃತಿ ‘ಆದಿಮ’ ಜಾನಪದ ಚಿಂತನೆಯಲ್ಲಿ ಮಹತ್ವದ ಕೊಡುಗೆಯಾಗಿದೆ.
ಸಾಹಿತ್ಯ ಸಾಧನೆಯಲ್ಲಿ ಅವರು ಕಥೆ, ಕವನ, ವಿಮರ್ಶೆ ಮತ್ತು ಆತ್ಮಕಥನದಲ್ಲಿ ತಮ್ಮ ಛಾಪು ಮೂಡಿಸಿದರು. ಅವರ ಮೊದಲ ಕಥಾ ಸಂಕಲನ ‘ಬುಗುರಿ’ (1993) ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿತು. ನಂತರದ ಎರಡು ವರ್ಷಗಳಲ್ಲಿ ಮತ್ತೆ ಎರಡು ಬಾರಿ ಮೊದಲ ಬಹುಮಾನ ಪಡೆದರು. ‘ಬುಗುರಿ’ ಕಥೆಯಲ್ಲಿ ಬಾಲಕನ ಮನಸ್ಥಿತಿ ಮತ್ತು ಕ್ರೂರ ಪ್ರಪಂಚದ ಆಘಾತವನ್ನು ಅಪೂರ್ವವಾಗಿ ಚಿತ್ರಿಸಿದ್ದಾರೆ. ‘ಭತ್ತ’ ಕಥೆಯು ಹಸಿವು, ಅವಮಾನ ಮತ್ತು ದಸಂಸ ಹೋರಾಟದ ಹಿನ್ನೆಲೆಯಲ್ಲಿ ಸಾಹಿತ್ಯದ ಮೂಲಕ ಹರಡಿದೆ. ಇದು ಓದುಗರಲ್ಲಿ ಬಾಲ್ಯದ ನೆನಪುಗಳನ್ನು ಉದ್ದೀಪಿಸುವಂತಿದೆ. ಅವರ ಇತರ ಕಥಾ ಸಂಕಲನಗಳಾದ ‘ಮಣ್ಣು’, ‘ಅತ್ತೆ’, ‘ಭೂಮಿ’, ‘ಕನ್ನೆಮಳೆ’, ‘ದೇವರ ದಾರಿ’ ಮತ್ತು ‘ಮೊಗಳ್ಳಿ ಕಥೆಗಳು’ ದೇಸಿ ಜೀವನದ ಸೂಕ್ಷ್ಮತೆಗಳನ್ನು ಬಿಂಬಿಸುತ್ತವೆ. ‘ದೇವರ ದಾರಿ’ಗೆ ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಲಭಿಸಿತು.
ಇದನ್ನು ಓದಿದ್ದೀರಾ? ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಕಾವ್ಯ ಕ್ಷೇತ್ರದಲ್ಲಿ ‘ದೇವಸ್ಮಶಾನ’ ಸಂಕಲನ ಮಹತ್ವದ್ದು. ಇದಕ್ಕೆ ಪು.ತಿ.ನ. ಕಾವ್ಯ ಪ್ರಶಸ್ತಿ ಲಭಿಸಿತು.ಈ ಕೃತಿಯು ಆಧುನಿಕ ಕಾವ್ಯದಲ್ಲಿ ಬೇಂದ್ರೆ ಮತ್ತು ಸಿದ್ದಲಿಂಗಯ್ಯ ನಡುವಿನ ಸೂಕ್ಷ್ಮ ಸಂಬಂಧವನ್ನು ಇದು ಬಿಚ್ಚಿಡುತ್ತದೆ. ಅವರ ಕಾವ್ಯ ಶಕ್ತಿ ಗದ್ಯದಲ್ಲಿ ವಿಸ್ತಾರಗೊಂಡಿದ್ದು, ಕನ್ನಡಕ್ಕೆ ಹೊಸ ಕಾವ್ಯ ಲೋಕ ಸೃಷ್ಟಿಸಬಹುದಿತ್ತು ಎಂದು ಸಾಹಿತ್ಯ ಪ್ರೇಮಿಗಳು ಅಭಿಪ್ರಾಯಪಡುತ್ತಾರೆ.
ದಲಿತ ಕಾವ್ಯ ಮತ್ತು ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ‘ಸಾಮಾಜಿಕ ಕೋಪ’ ಶಾಲೆಯ ಪ್ರತಿನಿಧಿಯಾಗಿ, ದಲಿತರ ದೌರ್ಜನ್ಯ ಮತ್ತು ಜಾಗತೀಕರಣದ ಪ್ರಭಾವಗಳನ್ನು ಕಾವ್ಯಾತ್ಮಕವಾಗಿ ವ್ಯಕ್ತಪಡಿಸಿದರು. ವೈಚಾರಿಕ ವಿಮರ್ಶೆಯಲ್ಲಿ ‘ದಲಿತರು ಮತ್ತು ಜಾಗತೀಕರಣ’ (1998) ಮತ್ತು ‘ತಕರಾರು’ ಕೃತಿಗಳು ಮಹತ್ವದ್ದು. ‘ತಕರಾರು’ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತು. ಇದು ಬ್ರಾಹ್ಮಣ್ಯದ ವಿಮರ್ಶೆಯಾಗಿ, ‘ಗೋವಿನ ಹಾಡು’ ಲೇಖನದ ಮೂಲಕ ಹಸು ಮತ್ತು ಹುಲಿಯ ರೂಪಕಗಳ ಮೂಲಕ ಸಾಮಾಜಿಕ ಅಸಮಾನತೆಯನ್ನು ಬಯಲುಮಾಡಿತು.
‘ನಾನೆಂಬುದು ಕಿಂಚಿತ್ತು’ ಆತ್ಮಕಥನದಲ್ಲಿ ದಲಿತ ಅನುಭವಗಳನ್ನು ಸಮಾಜ ವಿಮರ್ಶೆಯೊಂದಿಗೆ ಜೋಡಿಸಿ, ದಲಿತ ಚಳವಳಿಯನ್ನು ಬಲಪಡಿಸಿದರು. ಅವರ ಕೃತಿ ಜಾನಪದ ಚಿಂತನೆಯಲ್ಲಿ ಕನ್ನಡ ಜಾನಪದದ ದಿಕ್ಕನ್ನೇ ಬದಲಾಯಿಸಿದೆ. ದಲಿತ ಅನುಭವಗಳನ್ನು ದಿಗ್ಭ್ರಮೆ ಹುಟ್ಟಿಸುವಂತೆ ಚಿತ್ರಿಸಿದೆ. ಲಂಕೇಶ್ ಪತ್ರಿಕೆಯಲ್ಲಿ ಬರೆದ ವಿಮರ್ಶೆಗಳು ಮತ್ತು ಕಥೆಗಳು ಅವರನ್ನು ಪ್ರಸಿದ್ಧಿಗೆ ತಂದವು.
ಡಾ. ಮೊಗಳ್ಳಿ ಗಣೇಶ್ ಅವರ ನಿಧನ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟ. ಅವರ ಕೃತಿಗಳು ದಲಿತ ಅಸ್ಮಿತೆ, ಸಾಮಾಜಿಕ ನ್ಯಾಯ ಮತ್ತು ದೇಸಿ ಚಿಂತನೆಯನ್ನು ಶಾಶ್ವತಗೊಳಿಸುತ್ತವೆ. ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.
ಸಚಿವ ಶಿವರಾಜ್ ತಂಗಡಗಿ ಸಂತಾಪ
ಕನ್ನಡ ಸಾಹಿತ್ಯಕ್ಕೆ ಮೊಗಳ್ಳಿ ಗಣೇಶ ಅವರ ಕೊಡುಗೆ ಗಮನಾರ್ಹ. ತಮ್ಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸಂತಾಪ ಸೂಚಿಸಿದ್ದಾರೆ.
ಮೊಗಳ್ಳಿ ಗಣೇಶ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಒಬ್ಬ ಅತ್ಯುತ್ತಮ ಬರಹಗಾರನನ್ನು ಕಳೆದುಕೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಮಹದೇವಪ್ಪ ಸಂತಾಪ
ಕನ್ನಡದ ಬಹುಮುಖ್ಯ ಕಥೆಗಾರರಾದ ಡಾ.ಮೊಗಳ್ಳಿ ಗಣೇಶ್ ಅವರು ಇಂದು ನಮ್ಮನ್ನು ಅಗಲಿದ್ದು ಅವರಿಗೆ ನನ್ನ ಭಾವಪೂರ್ಣ ನಮನಗಳು. ಇವರ ಅಗಲಿಕೆಯು ಕನ್ನಡ ಸಾಹಿತ್ಯ ಲೋಕಕ್ಕೆ ಇದು ಬಹುದೊಡ್ಡ ನಷ್ಟವಾಗಿದ್ದು ಈ ವೇಳೆ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ನೆನೆಯುವೆನು ಎಂದು ಸಚಿವ ಎಚ್ ಸಿ ಮಹದೇವಪ್ಪನವರು ಸಂತಾಪ ಸೂಚಿಸಿದರು.
ಹ್ಯಾರಿಸ್ರಿಂದ ಸಂತಾಪ
ಸಾಹಿತ್ಯದ ಮೂಲಕ ಸಮಾನತೆ, ಸೌಹಾರ್ದತೆ, ಸಹೋದರತೆಯನ್ನು ಪ್ರತಿಪಾದಿಸಿದ ಮೊಗಳ್ಳಿ ಗಣೇಶ್ ಅವರ ನಿಧನದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಕನ್ನಡ ಕಥಾ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಸರು ಮೊಗಳ್ಳಿ ಗಣೇಶ್. ಅಷ್ಟೇ ಅಲ್ಲದೆ ಅವರ ವಿಮರ್ಶೆಗಳು ಹೊಸ ಚಿಂತನೆಗಳಿಗೆ ದಾರಿಮಾಡಿಕೊಟ್ಟಿತು. ಅವರ ನಿರ್ಗಮನವು ಈ ನಾಡಿಗೆ ತುಂಬಲಾರದ ನಷ್ಟ. ಮೃತರ ಕುಟುಂಬದವರು ಹಾಗೂ ಹಿತೈಷಿಗಳಿಗೆ ನನ್ನ ಸಾಂತ್ವನಗಳು ಎಂದು ಶಾಸಕ ಹ್ಯಾರಿಸ್ ಸಂತಾಪ ಸೂಚಿಸಿದರು.
ಮೊಗಳ್ಳಿ ಗಣೇಶರ ಕೃತಿಗಳು
ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ) ಮುಂತಾದವು ಮೊಗಳ್ಳಿ ಗಣೇಶ್ ಅವರ ಕಥಾ ಸಂಕಲನಗಳು. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ‘ಬೇರು’ ಅವರ ಬೃಹತ್ ಕಾದಂಬರಿ. ‘ಕಥನ’ ಅವರ ಪ್ರಬಂಧ ಸಂಕಲನ. ‘ಸೊಲ್ಲು’, ‘ವಿಮರ್ಶೆ’, ‘ಶಂಬಾ ಭಾಷಿಕ ಸಂಶೋಧನೆ’, ‘ತಕರಾರು’ ಅವರ ವಿಮರ್ಶಾ ಕೃತಿಗಳು. ‘ವಿಶ್ಲೇಷಣೆ’ ಎಂಬ ಅಂಕಣ ಕೂಡಾ ಜನಪ್ರಿಯ. ‘ ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ ’ ಅವರ ಚಿಂತನ ಕೃತಿ. ಗಣೇಶ್ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಅನುವಾದಗೊಂಡಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿ ಮೊಗಳ್ಳಿ ಅವರ ಅಕ್ಕ- ಭಾವನ ಊರು. ಅವರ ಅಕ್ಕನ ಮಗಳನ್ನೇ ಮೊಗಳ್ಳಿ ಮದುವೆ ಆಗಿದ್ದರು. ಇಲ್ಲಯೇ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.