ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಸಮೀಕ್ಷೆ) ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಮವಾರ (ಸೆ.2) ಆರಂಭವಾಗಿದೆ.
ಮೊದಲ ದಿನದ ಅಂತ್ಯಕ್ಕೆ 2,765 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಕೇವಲ 10,642 ಮಂದಿಯ ದತ್ತಾಂಶ ಸಂಗ್ರಹಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲೇ 680 ಕುಟುಂಬಗಳ ದತ್ತಾಂಶ ಸಂಗ್ರಹಿಸಲಾಗಿದೆ. 15 ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆ ಕಾರ್ಯದಲ್ಲಿ 10ಕ್ಕಿಂತಲೂ ಕಡಿಮೆ ಕುಟುಂಬಗಳು ಸಮೀಕ್ಷೆಗೆ ಒಳಪಟ್ಟಿವೆ.
ಸರಕಾರದ ಮಹತ್ವಾಕಾಂಕ್ಷಿ ಜಾತಿಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಇದಾಗಿರುವುದರಿಂದ ಜನರ ಸಹಭಾಗಿತ್ವವೂ ಬಹಳ ಮುಖ್ಯವಾಗಿದೆ. ಆದರೆ ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಸೋಮವಾರ ಬರೀ ಹತ್ತು ಸಾವಿರ ಗಣತಿ ದಾರರು ಸಮೀಕ್ಷೆಗಿಳಿದು, ಸುಮಾರು ಹತ್ತು ಸಾವಿರ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಪ್ರಕಾರ ಒಟ್ಟಾರೆ ಏಳು ಕೋಟಿ ಜನರಿದ್ದು, ಎರಡು ಕೋಟಿ ಮನೆಗಳನ್ನು ಸಮೀಕ್ಷೆಗೆ ಗುರುತಿಸಲಾಗಿದೆ. ಈ ಕಾರ್ಯಕ್ಕಾಗಿ 1.85 ಲಕ್ಷ ಗಣತಿದಾರರನ್ನು ನಿಯೋಜಿಸಲಾಗಿದೆ. ಇಡೀ ಪ್ರಕ್ರಿಯೆ ಪೂರ್ಣಗೊಳಿಸಲು 16 ದಿನಗಳ ಗಡುವು ನೀಡಲಾಗಿದೆ.
ಇಷ್ಟು ದೊಡ್ಡ ಪ್ರಮಾಣದ ಸಮೀಕ್ಷೆ ನಡೆಯುವಾಗ ಆರಂಭದಲ್ಲಿ ಗೊಂದಲ ಸಹಜ; ಮಂಗಳವಾರದಿಂದ ಚುರುಕುಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಅನೇಕ ಗಣತಿದಾರರಿಗೆ ಸೋಮವಾರ ಮಧ್ಯಾಹ್ನ 3 ಗಂಟೆಯಾದರೂ ಸಮೀಕ್ಷೆಯ ಕಿಟ್ ಸಿಗದಿರುವುದು ಕಂಡುಬಂತು. ಮೊಬೈಲ್ನಲ್ಲೇ ದಾಖಲಿಸಿಕೊಳ್ಳುವುದರಿಂದ ಕಿಟ್ ಅಗತ್ಯವೇನಿಲ್ಲ ಎಂದು ಹೇಳಬಹುದು. ಆದರೆ ಪ್ರತಿ ಮನೆಯ ಸಮೀಕ್ಷೆ ಮುಗಿದ ಬಳಿಕ ಬರೆಸಿಕೊಳ್ಳುವ ಸ್ವಯಂ ದೃಢೀಕರಣಪತ್ರ, ಗುರುತಿನ ಚೀಟಿಗೆ ಇದು ಅಗತ್ಯವಾಗಿದೆ. ಪೂರ್ಣ ಪ್ರಮಾಣದಲ್ಲಿ ಅನೇಕರಿಗೆ ಸಮೀಕ್ಷೆ ಕಿಟ್ ಇನ್ನೂ ತಲುಪಿಲ್ಲದಿರುವುದೇ ಸಮೀಕ್ಷೆ ಕಾರ್ಯ ನೀರಸಕ್ಕೆ ಕಾರಣ ಎನ್ನಲಾಗಿದೆ.
ಕೊಪ್ಪಳ, ಬೀದರ್ನಲ್ಲಿ ತಲಾ ಆರು ಕುಟುಂಬ, ಬಳ್ಳಾರಿ, ಧಾರವಾಡದಲ್ಲಿ ತಲಾ ಐದು, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಚಿಕ್ಕಬಳ್ಳಾಪುರದಲ್ಲಿ ತಲಾ ಮೂರು, ವಿಜಯಪುರ, ಉತ್ತರ ಕನ್ನಡ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಏಳು, ವಿಜಯನಗರ, ಕೋಲಾರ, ದಕ್ಷಿಣ ಕನ್ನಡ, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಎರಡು ಕುಟುಂಬಗಳ ಸಮೀಕ್ಷೆಯಷ್ಟೇ ನಡೆದಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಸೇರಿದ ಆನೇಕಲ್ ತಾಲ್ಲೂಕಿನಲ್ಲಿ ಒಂದು ಕುಟುಂಬ, ಮೈಸೂರು ಹಾಗೂ ತುಮಕೂರಿನಲ್ಲಿ ತಲಾ ಒಂದು ಕುಟುಂಬದ ಸಮೀಕ್ಷೆ ನಡೆದಿದೆ!