ಏಪ್ರಿಲ್ನಿಂದ ಜುಲೈವರೆಗೆ 3.02ಲಕ್ಷ ಮೆ.ಟನ್ ಡಿ.ಎ.ಪಿ ರಸಗೊಬ್ಬರದ ಬೇಡಿಕೆ ಇದ್ದು ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ 2.21 ಲಕ್ಷ ಮೆ.ಟನ್ ಸರಬರಾಜಾಗಿದ್ದು, ಇನ್ನೂ 81,000 ಮೆ.ಟನ್ ಸರಬರಾಜು ಬಾಕಿ ಇದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಡಿ.ಎ.ಪಿ. ಕೊರತೆ ಕಂಡು ಬಂದಾಗ ಕೃಷಿ ಸಚಿವರ ನಿರ್ದೇಶನದಂತೆ ಪರ್ಯಾಯ ರಸಗೊಬ್ಬರಗಳ ಬಳಕೆ ಕುರಿತು ರೈತರಲ್ಲಿ ಅರಿವು ಮೂಡಿಸಿ, ಪ್ರಸ್ತುತ, ಡಿ.ಎ.ಪಿ. ರಸಗೊಬ್ಬರದ ಕೊರತೆಯನ್ನು ನೀಗಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ.
ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ ಎಲ್ಲ ರಸಗೊಬ್ಬರಗಳನ್ನು ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮತ್ತು ಸರಬರಾಜು ಮಾಡಲಾಗಿರುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರದ ಕೊರತೆ ಕಂಡು ಬಂದಿರುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಮಾತ್ರ ಆರಂಭಿಕ ಶುಲ್ಕ ಪರಿಗಣಿಸಿ, ಕೇಂದ್ರ ಸರ್ಕಾರದಿಂದ ರಸಗೊಬ್ಬರ ಹಂಚಿಕೆ ಮತ್ತು ಸರಬರಾಜು ಪ್ರಕ್ರಿಯೆ ಜರುಗಿಸಲಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಪ್ರಾರಂಬಿಕ ದಾಸ್ತಾನನ್ನು ಪರಿಗಣಿಸಿ, ಯೂರಿಯಾ ರಸಗೊಬ್ಬರದ ಕಡಿಮೆ ಹಂಚಿಕೆ ಮಾಡಿರುವುದು ಕೊರತೆಗೆ ಮೂಲ ಕಾರಣವಾಗಿದೆ” ಎಂದಿದೆ.
“ರಾಜ್ಯದ ಬೆಳೆ ಪದ್ಧತಿಯನ್ನು ಆಧರಿಸಿ ಮುಂಗಾರು ಹಂಗಾಮಿಗೆ ಮುಂಚಿತವಾಗಿ ಕೇಂದ್ರ ಸರ್ಕಾರಕ್ಕೆ 12.95 ಲಕ್ಷ ಮೆ.ಟನ್ ಯೂರಿಯಾ ರಸಗೊಬ್ಬರ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರದಿಂದ 11.17 ಲಕ್ಷ ಮೆ.ಟನ್ ಹಂಚಿಕೆ ನಿಗದಿಪಡಿಸಲಾಗಿರುತ್ತದೆ. ಏಪ್ರಿಲ್ನಿಂದ ಜುಲೈವರೆಗೆ 6.80ಲಕ್ಷ ಮೆ.ಟನ್ ಯೂರಿಯಾ ರಸಗೊಬ್ಬರದ ಬೇಡಿಕೆ ಇದ್ದು ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ 5.35 ಲಕ್ಷ ಮೆ.ಟನ್ ಸರಬರಾಜಾಗಿದ್ದು, ಇನ್ನೂ 1.45 ಲಕ್ಷ ಮೆ.ಟನ್ ಸರಬರಾಜು ಬಾಕಿ ಇರುತ್ತದೆ” ಎಂದು ಹೇಳಿದೆ.
ರಾಜ್ಯದಿಂದ ರಸಗೊಬ್ಬರ ಪೂರೈಕೆಗೆ ಆರು ಬಾರಿ ಮನವಿ
ಕೇಂದ್ರ ರಸಗೊಬ್ಬರ ಇಲಾಖೆಯ ಅಧಿಕಾರಿಗಳಿಗೆ ಕೃಷಿ ಇಲಾಖೆ ವತಿಯಿಂದ ಏಪ್ರಿಲ್ ಮಾಹೆಯಿಂದ ಇಲ್ಲಿಯವರೆಗೆ ಆರು ಬಾರಿ ಪತ್ರಗಳನ್ನು ಬರೆದು ಹಂಚಿಕೆಗೆ ಅನುಗುಣವಾಗಿ ಅವಶ್ಯವಿರುವ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಲಾಗಿರುತ್ತದೆ. ರಾಜ್ಯದ ಕೃಷಿ ಸಚಿವರು ಕೇಂದ್ರ ಸರ್ಕಾರದ ರಸಗೊಬ್ಬರ ಖಾತೆ ಸಚಿವರಿಗೆ ಅಗತ್ಯವಿರುವ ಡಿ.ಎ.ಪಿ. ರಸಗೊಬ್ಬರದ ಪೂರೈಕೆಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ. ಅಲ್ಲದೇ, ಕೃಷಿ ಸಚಿವರೇ ಖುದ್ದಾಗಿ, ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನು ಇದೇ ಜುಲೈ 7 ರಂದು ಭೇಟಿ ಮಾಡಿ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಿರುತ್ತಾರೆ ಎಂದು ಇಲಾಖೆ ತಿಳಿಸಿದೆ.
“ರಾಜ್ಯದಲ್ಲಿ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರದ ಕಡಿಮೆ ಪೂರೈಕೆಯನ್ನು ಮನಗಂಡು, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ರಸಗೊಬ್ಬರ ಖಾತೆ ಸಚಿವರಿಗೆ, ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರ ಪೂರೈಕೆಗೆ ಜುಲೈ 17 ಮತ್ತು 25ರಂದು ಪತ್ರ ಮುಖೇನ ಮನವಿ ಸಲ್ಲಿಸಿರುತ್ತಾರೆ. ಪ್ರಸ್ತುತ ಕೇಂದ್ರ ಸರ್ಕಾರದಿಂದ ಹಂಚಿಕೆಗನುಗುಣವಾಗಿ ಯೂರಿಯಾ ರಸಗೊಬ್ಬರವನ್ನು ಸರಬರಾಜು ಮಾಡದಿರುವುದರಿಂದ ರಾಜ್ಯದಲ್ಲಿ ಅಲ್ಲಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಕಂಡು ಬಂದಿರುತ್ತದೆ. ಈ ಸಂಬಂಧವಾಗಿ ರೈತರು ವಿವಿಧ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರದ ಪೂರೈಕೆ ಬಗ್ಗೆ ಅಹವಾಲುಗಳನ್ನು ಸಲ್ಲಿಸಿರುತ್ತಾರೆ” ಎಂದು ವಿವರಿಸಿದೆ.