ಧರ್ಮಸ್ಥಳದಲ್ಲಿ ಅನುಮಾನಾಸ್ಪದವಾಗಿ ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸರ್ಕಾರ ಎಸ್ಐಟಿ ರಚನೆ ಮಾಡಿದ ನಂತರ ನಡೆದ ಬೆಳವಣಿಗೆಗಳು ಗೊತ್ತೇ ಇವೆ. ನಾನೇ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಬುರುಡೆ ಸಮೇತ ಪೊಲೀಸರು ಮತ್ತು ನ್ಯಾಯಾಧೀಶರ ಮುಂದೆ ಬಂದು ಹೇಳಿಕೆ ದಾಖಲಿಸಿದ್ದ ಧರ್ಮಸ್ಥಳದ ಸ್ವಚ್ಛತಾ ಕಾರ್ಮಿಕನಾಗಿದ್ದ ಚಿನ್ನಯ್ಯ ಎಸ್ಐಟಿ ತನಿಖೆಯ ವೇಳೆ ತಾನು ಸುಳ್ಳು ಹೇಳಿರುವುದಾಗಿ ಉಲ್ಟಾ ಹೇಳಿಕೆ ನೀಡಿರುವುದು ಗೊತ್ತೇ ಇದೆ.
ಆದರೆ ಸರ್ಕಾರ ಎಸ್ಐಟಿ ರಚನೆ ಮಾಡಿದ ನಂತರ ಸುಮಾರು 30 ಹೊಸ ದೂರುಗಳು ದಾಖಲಾಗಿವೆ. ಅದರಲ್ಲಿ ಈಗಾಗಲೇ ಸಿಬಿಐ ತನಿಖೆ ಮುಗಿದು ತೀರ್ಪು ಬಂದಿರುವ ಸೌಜನ್ಯ ಪ್ರಕರಣವೂ ಸೇರಿದೆ. ನಲುವತ್ತು ವರ್ಷಗಳ ಹಿಂದೆ ಕೊಲೆಯಾದ ಪದ್ಮಲತಾ, ಟೀಚರ್ ವೇದವಲ್ಲಿ, ಸೌಜನ್ಯ ಕೊಲೆಯಾಗುವುದಕ್ಕೆ ಎರಡು ವಾರಗಳ ಹಿಂದೆ ಕೊಲೆಯಾದ ಮಾವುತ ನಾರಾಯಣ ಮತ್ತು ಯಮುನಾ ಜೋಡಿ ಕೊಲೆ ಅಪರಾಧಿಗಳು ಯಾರು ಎಂಬುದು ಇದುವರೆಗೂ ಪತ್ತೆ ಆಗಿಲ್ಲ. ಈ ಪ್ರಕರಣಗಳ ಮರು ತನಿಖೆ ನಡೆಸಬೇಕು ಎಂದು ಸತ್ತವರ ಕುಟುಂಬದವರು ಎಸ್ಐಟಿಗೆ ದೂರು ನೀಡಿದ್ದಾರೆ. ಬುರುಡೆ ಪ್ರಕರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳಾಗಿರುವ ಈ ಸಮಯದಲ್ಲಿ ಎಸ್ಐಟಿ ಈ ಪ್ರಕರಣಕ್ಕಷ್ಟೇ ಸೀಮಿತವಾಗದೇ ಮಿಕ್ಕುಳಿದ ದೂರುಗಳನ್ನು ತನಿಖೆ ನಡೆಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಒತ್ತಡ ಹೆಚ್ಚಾಗಿದೆ.
ಸಮಾನ ಮನಸ್ಕ ಪಕ್ಷಗಳು, ಎಡ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ, ಸಾಂಸ್ಕೃತಿಕ ಸಂಘಟನೆಗಳ ಜಂಟಿ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ʼದೌರ್ಜನ್ಯ ವಿರೋಧಿ ವೇದಿಕೆʼ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸೆ.25ರಂದು ಬೆಳಿಗ್ಗೆ 10.30ಕ್ಕೆ ಬೃಹತ್ ನ್ಯಾಯ ಸಮಾವೇಶ ಆಯೋಜಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ದಾಖಲಾದ ಎಲ್ಲಾ ಅಸಹಜ ಸಾವುಗಳ ಸಮಗ್ರ ತನಿಖೆಗೆ ಒಳಪಡಿಸಬೇಕು. ಧರ್ಮಸ್ಥಳ ಭೂ ಅಕ್ರಮ ಭೂ ಕಬಳಿಕೆ, ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ದೌರ್ಜನ್ಯ ತನಿಖೆಯಾಗಬೇಕು. ಪದ್ಮಲತಾ, ವೇದವಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ಸಾವಿಗೆ ನ್ಯಾಯಬೇಕು. ಎಸ್ಐಟಿ ವಿರುದ್ಧದ ಷಡ್ಯಂತ್ರ ನಿಲ್ಲಲಿ; ಎಸ್ಐಟಿಗೆ ಪೂರ್ಣ ಸ್ವಾತಂತ್ರ್ಯ ನೀಡಿ ಮುಂತಾದ ಹಕ್ಕೊತ್ತಾಯ ಮಂಡಿಸಲಿವೆ.
ಖ್ಯಾತ ಸಾಮಾಜಿಕ ಹೋರಾಟಗಾರ್ತಿ, ಸಿಪಿಐನ ನಾಯಕಿ ಸುಭಾಷಿಣಿ ಅಲಿ ಭಾಗವಹಿಸಲಿದ್ದಾರೆ. ವರ್ಷದ ಹಿಂದೆ ಹಾಸನದ ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನ ಚಲೋನಲ್ಲೂ ಭಾಗವಹಿಸಿದ್ದರು. ಸುಭಾಷಿಣಿ ಅಲಿ ಅವರು ದೇಶದ ಅತಿ ದೊಡ್ಡ ಮಹಿಳಾ ಸಂಘಟನೆ AIDWA (All India Democratic Women’s Association)ದ ಸಕ್ರಿಯ ಕಾರ್ಯಕರ್ತರಾಗಿದ್ದು, ಅದರ ಅಖಿಲ ಭಾರತ ಅಧ್ಯಕ್ಷರಾಗಿದ್ದಾರೆ. ಅವರು CPI(M) (ಭಾರತ ಕಮ್ಯುನಿಸ್ಟ್ ಪಕ್ಷ – ಮಾರ್ಕ್ಸ್ ವಾದಿ)ನ ಹಿರಿಯ ನಾಯಕರಲ್ಲೊಬ್ಬರು. ಅವರು ದೀರ್ಘಕಾಲ ಪಕ್ಷದ ಕೇಂದ್ರ ಸಮಿತಿ ಸದಸ್ಯರು ಮತ್ತು ಎರಡನೆಯ ಮಹಿಳಾ ಪಾಲಿಟ್ ಬ್ಯುರೋ ಸದಸ್ಯರೂ ಆಗಿದ್ದರು. ಕಾನಪುರ ಕ್ಷೇತ್ರದಿಂದ 1989ರ ಚುನಾವಣೆಯಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯೂ ಆಗಿದ್ದರು. ಆಜಾದ್ ಹಿಂದ್ ಫೌಜ್ ನಲ್ಲಿ ಸೇವೆ ಸಲ್ಲಿಸಿದ್ದ ಕರ್ನಲ್ ಪ್ರೇಮ್ ಸೆಹಗಲ್ ಮತ್ತು ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಪುತ್ರಿಯಾಗಿದ್ದಾರೆ.
ರಾಜ್ಯದ ಎಲ್ಲೆಡೆಯಿಂದ ಬೆಂಗಳೂರಿಗೆ ಜನಸಾಗರ ಹರಿದು ಬರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ತುಮಕೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನೂರಾರು ಹೋರಾಟಗಾರರು ನ್ಯಾಯ ಸಮಾವೇಶಕ್ಕೆ ಬರುತ್ತಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿರುವ ಹಿರಿಯ ಸಾಹಿತಿ, ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ, ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ದಕ್ಷಿಣ ಕನ್ನಡದ ಕಮ್ಯುನಿಸ್ಟ್ ನಾಯಕ ಬಿ ವಿಷ್ಣುಮೂರ್ತಿ ಭಟ್, ಪದ್ಮಲತಾ ಸಹೋದರಿ ಇಂದ್ರಮತಿ, ಸಾಹಿತಿ ಡಾ ಎಚ್ ಎಸ್ ಅನುಪಮಾ, ಸಾಮಾಜಿಕ ಹೋರಾಟಗಾರ್ತಿ ಕುಮಾರಿ ಮಂಡ್ಯ, ರಂಗಕರ್ಮಿ ಸಿನಿಮಾ ನಿರ್ದೇಶಕ ಬಿ ಸುರೇಶ, ಹೋರಾಟಗಾರ ಕೃಷ್ಣೇಗೌಡ ಟಿ ಎಲ್, ಜಾಗೃತ ಕರ್ನಾಟಕದ ಡಾ ಹೆಚ್ ವಿ ವಾಸು, ಸಾಹಿತಿ ಸುರೇಶ ಕಂಜರ್ಪಣೆ, ಸಾಮಾಜಿಕ ಹೋರಾಟಗಾರ ಕೆ ಎಲ್ ಅಶೋಕ್, ಧರ್ಮಸ್ಥಳ ಪಾಂಗಳದ ಲಕ್ಷ್ಮಣ ಗೌಡ, ಸೌಜನ್ಯಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್, ಪತ್ರಕರ್ತ ನವೀನ್ ಸೂರಿಂಜೆ, ಕನ್ನಡಪರ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ಹಾಗೂ ʼಕೊಂದವರು ಯಾರು?ʼ ಅಭಿಯಾನದ ಸದಸ್ಯರು ಸೇರಿದಂತೆ ಹಲವಾರು ಮಂದಿ ನ್ಯಾಯಪರ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.