ಬಾಡಿಗೆ ಬಾಷಣಕಾರರು ಸೇರಿದಂತೆ ಪ್ರತಾಪ್ ಸಿಂಹ, ಸಿ ಟಿ ರವಿ ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆಗೆ ಕಳಿಸಿದ್ದಾರಾ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ಪ್ರಶ್ನಿಸಿದರು.
ಕಲಬುರಗಿಯಲ್ಲಿ ಸೋಮವಾರ ಮಾತನಾಡಿದ ಅವರು, “ಧರ್ಮಸ್ಥಳ, ಮದ್ದೂರು, ಚಾಮುಂಡೇಶ್ವರಿ ಚಲೋ, ಬಿಜೆಪಿಯವರಿಗೆ ಬೇಕಾಗಿರುವುದಾದರೂ ಏನು? ಕಾಮನ್ ಸೆನ್ಸ್ ಇದೆಯಾ? ಸೌಜನ್ಯ ಅವರ ಮನೆಗೆ ಹೋದಾಗ ರಾಶಿ ರಾಶಿ ಬುರುಡೆ ಸಿಕ್ಕ ಬಗ್ಗೆ ಗೊತ್ತಾಗಿದೆ. ಆ ಬಗ್ಗೆ ಏನು ಹೇಳುತ್ತಾರೆ” ಎಂದರು.
“ಧರ್ಮಸ್ಥಳ, ಮದ್ದೂರು ಚಲೋ ಆಯ್ತು. ತಲೆ ಕಡಿರಿ ಅಂತ ಪ್ರಚೋದನೆ ಹೇಳಿಕೆ ನೀಡುವುದು ಬಿಜೆಪಿ ನಾಯಕರ ಚಾಳಿಯಾಗಿದೆ. ಸಿಟಿ ರವಿ ಸೇರಿದಂತೆ ಯಾವ ಬಿಜೆಪಿನಾಯಕರು ತಮ್ಮ ಮಕ್ಕಳಕೈಗೆ ಮಚ್ಚು ಲಾಂಗು ಕೊಟ್ಟಿದ್ದಾರಾ? ಬಿಜೆಪಿಗರು ರಾಜ್ಯವನ್ನು ಯುಪಿ, ಬಿಹಾರ ಮಾಡಹೊರಟಿದ್ದಾರೆ” ಎಂದು ಆರೋಪಿಸಿದರು.
“ಭಾರತ ಪಾಕಿಸ್ತಾನ ಕ್ರಿಕೆಟ್ ನಡೆತಲ್ಲ ಬಿಜೆಪಿಗರಿಗೆ ನಾಚಿಕೆಯಾಗಬೇಕು. ಭಾರತ ಆಡದಿದ್ದರೆ ಅಂಕ ಹೋಗುತ್ತವೆ ಎನ್ನುವುದು ಬಿಜೆಪಿ ಸಮಜಾಯಿಷಿ. ಹೋದರೆ ಹೋಗಲಿ ಬಿಡಿ ಅಂಕ ಮುಖ್ಯನಾ? ಸರ್ಕಾರ ಬಿಸಿಸಿಐಗೆ ನಿರ್ದೇಶನ ಯಾಕೆ ನೀಡಿಲ್ಲ. ಪ್ರಧಾನಿ ಯಾಕೆ ಗೃಹ ಸಚಿವರಿಗೆ ಹೇಳಿಲ್ಲಾ? ಹುತಾತ್ಮರ ಮನೆಯವರು ಪಂದ್ಯ ಆಡುವುದುಬೇಡ ಅಂದಿದ್ದಾರೆ, ಆದರೂ ಪಂದ್ಯ ಯಾಕೆ ನಡೆಸಿದರು” ಎಂದು ಕೇಳಿದರು.
“ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ, ಚುನಾವಣೆ ನಡೆಸಲೇಬೇಕು. ಮೊದಲು ಮೀಸಲಾತಿ ಗೊಂದಲವಿತ್ತು. ಅದನ್ನು ಸರಿಪಡಿಸಲಾಯಿತು. ಹಿಂದಿನ ಸರ್ಕಾರದಲ್ಲಿ ಕೆಲ ಪಂಚಾಯತ್ ಗಳು ನಗರ ವ್ಯಾಪ್ತಿಗೆ ಸೇರಿ ಕ್ಷೇತ್ರ ಮರುವಿಂಗಡನೆಗೆ ತಡವಾಯ್ತು. ಬ್ಯಾಲೆಟ್ ಮೂಲಕ ಚುನಾವಣೆ ನಡೆಸಿದರೆ ತಡವಾಗುತ್ತದೆ ಎನ್ನುವ ವಿಚಾರ, ಆದರೆ ಆಗಲಿ ಬಿಡಿ ಅಮೆರಿಕಾ ಫ್ರಾನ್ಸ್ ಗಳಲ್ಲಿ ತಿಂಗಳುಗಟ್ಟಲೇ ಎಣಿಕೆ ನಡೆಯುತ್ತದಲ್ಲ? ಮತದಾರರ ಸ್ವಚ್ಛ ಪಟ್ಟಿ ನೀಡಲು ಚುನಾವಣೆ ಆಯೋಗ ವಿಫಲವಾಗಿದೆ. ಆಯೋಗ ಬಿಜೆಪಿ ಕೈಗೊಂಬೆಯಾಗಿದೆ. ನಾವು ನೀಡಿದ ದೂರಿನ ಬಗ್ಗೆ ವಿಚಾರಣೆನೆ ನಡೆಸುತ್ತಿಲ್ಲ” ಎಂದು ಹೇಳಿದರು.
“ಕಲಬುರಗಿ ಮಳೆ ಹಾನಿ ಬಗ್ಗೆ ಪರಿಶೀಲನೆ ಮಾಡಲು ನಿಖಿಲ್ ಕುಮಾರಸ್ವಾಮಿ ಬರುತ್ತಿರುವ ವಿಚಾರ ಒಳ್ಳೆಯದು. ಅವರ ತಂದೆಯೆ ಕೇಂದ್ರ ಸಚಿವರಾಗಿದ್ದರಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಲಿ. ರಾಜ್ಯ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ನೀಡುತ್ತಿದೆ. ನಾವು ನೀಡುವ ತೆರಿಗೆಯಲ್ಲಿಯೇ ನಮ್ಮ ರಾಜ್ಯಕ್ಕೆ ನೀಡುತ್ತಿಲ್ಲ. ಕಳೆದ ಬಾರಿ 4.50 ಲಕ್ಷ ಕೋಟಿ ತೆರಿಗೆ ನೀಡಿದ್ದೇವೆ, ಕೇಂದ್ರ ನಮಗೆ ಎಷ್ಟು ವಾಪಸ್ ನೀಡಿದ್ದಾರೆ” ಎಂದರು.
“ಬಿಜೆಪಿ ಸದಸ್ಯರ ನೋಂದಣಿ ನೋಡಿದ್ದೀರಿ? ಟಾಟಾ ಸ್ಕೈ ನೀಡುತ್ತೇವೆ ಫ್ರೀಮಿಸ್ ಕಾಲ್ ಕೊಡಿ ಅಂತೆಲ್ಲ ಜನರಿಗೆ ಹೇಳಿ, ಜನರಿಂದ ಮಿಸ್ ಕಾಲ್ ಪಡೆದುಕೊಂಡು ಸದಸ್ಯತ್ವ ಮಾಡಿಕೊಂಡಿದ್ದಾರೆ” ಎಂದು ಕುಟುಕಿದರು.
“ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ನಡೆದಿಲ್ಲ. ಆಕಾಂಕ್ಷಿಗಳು ಇದ್ದಾರೆ. ನಮ್ಮಲ್ಲಿ ಕೆಲವರು ಸಿಎಂ, ಎಐಸಿಸಿ ಅಧ್ಯಕ್ಷರಿಗೆ ಇನ್ನೂ ಕೆಲವರು ಡಿಸಿಎಂ ಅವರಗೆ ಮಾತನಾಡಿರುತ್ತಾರೆ. ಅವರು ಏನು ಮಾತನಾಡಿರುತ್ತಾರೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ಪುನರ್ ರಚನೆ ಅವರ ವಿವೇಚನೆಗೆ ಬಿಟ್ಟಿದ್ದು” ಎಂದು ತಿಳಿಸಿದರು.
