ಕೋಲಾರ:- ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯು ಕೇವಲ ಹಿಂದುಳಿದವರಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ, ರಾಜ್ಯದ ಒಳಿತಿಗಾಗಿ ಸಮಸ್ತ ಜನರ ಸ್ಥಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನವಾಗಿರುವುದರಿಂದ ಪ್ರತಿಯೊಬ್ಬರು ಜವಾಬ್ದಾರಿಯಿಂದ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕೆಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಜಾಗೃತ ಕರ್ನಾಟಕ, ಈದಿನ.ಕಾಂ ಹಾಗೂ ಲೋಕ ನಾಯಕ ಜೆ.ಪಿ.ವಿಚಾರವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ೨೦೨೫ರ ಅಗತ್ಯ ಪರಿಣಾಮ ಮತ್ತು ಸಾರ್ವಜನಿಕರ ಪಾತ್ರ ಕುರಿತು ವಿಚಾರಗೋಷ್ಠಿ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಮೀಕ್ಷೆ ಎನ್ನುವುದು ಜನರ ಬದುಕಿಗೆ ಸಂಬಂಧಪಟ್ಟ ವಿಚಾರವಾಗಿದೆ, ರಾಜ್ಯದಲ್ಲಿ ಪ್ರತಿಯೊಬ್ಬರೂ ಮೀಸಲಾತಿ ಫಲಾನುಭವಿಗಳೇ ಆಗಿದ್ದಾರೆ, ಸಮೀಕ್ಷೆ ಎಂದರೆ ಕೇವಲ ಮೀಸಲಾತಿ ಅಲ್ಲ ಸಾಮಾಜಿಕ ನ್ಯಾಯದ ಅನ್ಯಾಯ ಸರಿಪಡಿಸುವುದಾಗಿದೆ ಎಂದು ವಿವರಿಸಿದರು.
ಸಂವಿಧಾನಬದ್ಧವಾಗಿ ಕೇಂದ್ರ ಮಂತ್ರಿಯಾಗಿರುವ ಪ್ರಹ್ಲಾದ ಜೋಷಿ ಸಮೀಕ್ಷೆಯನ್ನು ವಿರೋಸುತ್ತಾ ಬಹಿಷ್ಕರಿಸುವಂತೆ ಜನರನ್ನು ರಾಜಕೀಯ ಕಾರಣಗಳಿಗಾಗಿ ಪ್ರಚೋದಿಸುತ್ತಿರುವುದು ಸರಿಯಲ್ಲ ಜೋಷಿ, ಆರ್.ಅಶೋಕ್ ಇತರರು ಸಮೀಕ್ಷೆ ವಿರೋಧಿ ತಮ್ಮ ಹೇಳಿಕೆಗಳನ್ನು ವಾಪಸ್ ಪಡೆದುಕೊಳ್ಳಬೇಕು, ಇಲ್ಲವೇ ಸಮೀಕ್ಷೆಗೆ ಸಂಬಂಧಪಟ್ಟಂತೆ ತಮ್ಮ ಪತ್ರದ ನಿಲುವೇನು ಎಂದು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
೧೨ ನೇ ಶತಮಾನದಲ್ಲಿಯೇ ಬಸವಣ್ಣನವರು ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದರು, ಸಾಮಾಜಿಕ ನ್ಯಾಯಕ್ಕೆ ವಿರೋಧ ಹೊಸದೇನಲ್ಲ ವಿಶ್ವೇಶ್ವರಯ್ಯನವರು ವಿರೋಸಿದಾಗಲೂ ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರು ಸಾಮಾಜಿಕ ನ್ಯಾಯ ಕಲ್ಪಿಸುವ ದಿಟ್ಟತನ ತೋರಿದ್ದರು, ಇಂತ ದಿಟ್ಟತನವನ್ನು ಈಗಲೂ ತೋರಬೇಕಾಗಿದೆ ಎಂದು ನುಡಿದರು.
ಸಮೀಕ್ಷೆಯನ್ನೇ ತಪ್ಪು ಎನ್ನುವುದು ಸರಿಯಲ್ಲಾ ಶೇ.೧೦೦ ಸರಿಯಾದ ಸಮೀಕ್ಷೆ ವಿಶ್ವದ ಯಾವ ರಾಷ್ಟ್ರದಲ್ಲಿ ಮಾಡಲಾಗಿದೆ ಎನ್ನುವುದನ್ನು ಬಿಜೆಪಿ ಮುಖಂಡರು ಸ್ಪಷ್ಟಪಡಿಸಬೇಕು, ಯಾವುದೇ ಸಮೀಕ್ಷೆಯಲ್ಲಿ ಶೇ.೫ ರಷ್ಟು ವ್ಯತ್ಯಾಸಗಳಿರುತ್ತವೆ, ಅನಾವಶ್ಯಕ ಗೊಂದಲ ಸೃಷ್ಠಿಸುವುದು ಬೇಡ ಎಂದರು.
ಕೇಂದ್ರ ಸರಕಾರವು ಜಾತಿ ಗಣತಿ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಹಾಗೆಯೇ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡುವುದು ಅತ್ಯಗತ್ಯ ಏಕೆಂದರೆ, ಕೇಂದ್ರ ಸರಕಾರವು ಯಾವ ಮಾನದಂಡದ ಆಧಾರದ ಮೇಲೆ ಯೋಜನೆಗಳನ್ನು ರೂಪಿಸುತ್ತದೆ ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಸಮೀಕ್ಷೆಯನ್ನು ವಿರೋಸದಿರುವುದನ್ನು ಅವರ ಸಮುದಾಯ ಗಮನಿಸಬೇಕು, ಇದು ಕಾಂಗ್ರೆಸ್ ಸಮೀಕ್ಷೆ ಅಲ್ಲ, ಸರಕಾರದ ಸಮೀಕ್ಷೆ, ಆರಂಭಿಕವಾಗಿ ತಾಂತ್ರಿಕ ಅಡಚಣೆಗಳಾಗಿರಬಹುದು, ಸಮೀಕ್ಷೆಯು ಸೆ.೭ ರ ನಂತರವೂ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಿ, ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದರು.
ಸಾಮಾಜಿಕ ಚಿಂತಕ ಎ.ನಾರಾಯಣ ಮಾತನಾಡಿ, ಸಮೀಕ್ಷೆಗೆ ವಿರೋಧ ಎನ್ನುವುದು ಸಾಮಾಜಿಕ ನ್ಯಾಯದ ವಿರೋಧವಾಗಿದೆ, ಹೆಚ್ಚು ಸವಲತ್ತು ಪಡೆದವರಿಂದಲೇ ಸಮೀಕ್ಷೆ ವಿರೋಧ ವ್ಯಕ್ತವಾಗುತ್ತಿದೆ, ಸಮೀಕ್ಷೆಗೆ ಜಾತಿ ಗಣತಿ ಎಂಬ ಹಣೆಪಟ್ಟಿ ಕಟ್ಟುವ ಹುನ್ನಾರ ನಡೆಯುತ್ತಿದೆ, ಸಮೀಕ್ಷೆ ಹಿಂದು ಧರ್ಮದ ವಿರೋಧಿಯಲ್ಲಾ, ಹೊಸ ಜಾತಿ ಸೃಷ್ಠಿಸುತ್ತಿಲ್ಲ ಹಳೇ ಜಾತಿಯನ್ನು ಬಿಡುತ್ತಿಲ್ಲ ಇರುವ ವ್ಯವಸ್ಥೆಗೆ ಕನ್ನಡಿಯಾಗಿರುತ್ತದೆ ಎಂದು ವಿವರಿಸಿ, ಅಪಪ್ರಚಾರಗಳಿಗೆ ಕಿವಿಗೊಡದೆ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಸಂವಾದದಲ್ಲಿ ಭಾಗವಹಿಸಿದ್ದ ಜಾಗೃತ ಕರ್ನಾಟಕದ ಡಾ.ಎಚ್.ವಾಸು ಮಾತನಾಡಿ, ಸಮೀಕ್ಷೆ ಕುರಿತು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಜಾಗೃತಿ ಮೂಡಬೇಕು, ಬ್ರಾಹ್ಮಣ, ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯವು ಸಮೀಕ್ಷೆಯನ್ನು ಸ್ವಾಗತಿಸಬೇಕು ಏಕೆಂದರೆ, ಸಮೀಕ್ಷೆಯ ಅಂಕಿ ಅಂಶಗಳು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲಿದೆ, ಆದರೂ, ಬಿಜೆಪಿ, ಸಂಸದ ತೇಜಸ್ವಿ ಸೂರ್ಯ, ಮಂತ್ರಿ ಪ್ರಹ್ಲಾದಜೋಷಿ ಸಮೀಕ್ಷೆಯನ್ನು ವಿರೋಸುತ್ತಿರುವುದು ಸಂವಿಧಾನಕ್ಕೆ ಎಸಗುತ್ತಿರುವ ದ್ರೋಹವಾಗಿದೆ ಎಂದರು.
ಲೋಕನಾಯಕ ಜೆ.ಪಿ.ವಿಚಾರವೇದಿಕೆಯ ಆರ್.ದಯಾನಂದ ಪ್ರಸ್ತಾವಿಕವಾಗಿ ಮಾತನಾಡಿ, ಸತ್ಯದ ಅನಾವರಣವಾಗಲು ಸಮೀಕ್ಷೆ ಅಗತ್ಯ ಕಡಿಮೆ ಜನಸಂಖ್ಯೆಯವರಿಗೂ ನ್ಯಾಯಯುತ ಪಾಲು ಸಿಕ್ಕಾಗಲೇ ಪ್ರಜಾಪ್ರಭುತ್ವಕ್ಕೆ ಅರ್ಥಬರುತ್ತದೆ, ಸರಕಾರದ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೈಜೋಡಿಸೋಣ, ಸಮ ಸಮಾಜದ ನಿರ್ಮಾಣ ಮಾಡೋಣ ಎಂದರು.
ಇದನ್ನು ಓದಿದ್ದೀರಾ..?ಕೋಲಾರ | ಅಕ್ರಮವಾಗಿ ಎಸ್ಟಿ ಪ್ರಮಾಣಪತ್ರ, ಇತರೆ ಸಮುದಾಯಗಳ ಎಸ್ಟಿ ಸೇರ್ಪಡೆ ವಿರೋಧಿಸಿ ಡಿಸಿಗೆ ಮನವಿ
ಸಮೀಕ್ಷೆ ಕುರಿತ ಸಂವಾದದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ರಾಮರಾಜು, ಪತ್ರಕರ್ತ ಕೆ.ಎಸ್.ಗಣೇಶ್, ಮುಳಬಾಗಿಲು ತಾಪಂ ಮಾಜಿ ಅಧ್ಯಕ್ಷ ಸಿ.ವಿ.ಗೋಪಾಲ್, ಮುಖಂಡರಾದ ಸಲಾಲುದ್ದೀನ್ ಬಾಬು, ಅಂಚೆ ಅಶ್ವತ್ಥ್, ನ್ಯಾಯವಾದಿ ದಿವಾಕರ್, ಮಂಜುನಾಥರೆಡ್ಡಿ, ಡಾ.ಕೆ.ವಿ.ನೇತ್ರಾವತಿ, ತಾಪಂ ಮಾಜಿ ಅಧ್ಯಕ್ಷೆ ರಮಾದೇವಿ, ರಘುಕುಮಾರ್ ಇತರರು ಭಾಗವಹಿಸಿದ್ದರು.ಉಮಾಶಂಕರ್ ನಿರೂಪಿಸಿ, ಮಂಜುಳ ಕೊಂಡರಾಜನಹಳ್ಳಿ, ನಂದಿನಿ ಪ್ರಾರ್ಥಿಸಿ, ಸಿ.ವಿ.ನಾಗರಾಜ್ ಸ್ವಾಗತಿಸಿ, ನದೀಂ ಪಾಷಾ ವಂದಿಸಿದರು.