ಹೆಣ್ಣು ಗಂಡು ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವ ಸಂಸಾರಿಕ ಜೀವನಕ್ಕೆ ಮದುವೆ ಎಂಬುದು ಒಂದು ನೆಪ. ಸಂಗಾತಿಗಳ ಸಹಬಾಳ್ವೆಯ ಸಹನೀಯ ಮಾಡುವುದಕ್ಕಿಂತ ಸರೀಕರ ಎದುರು ಸಿರಿಮಂತಿಕೆಯ ಪ್ರದರ್ಶನಕ್ಕೆ ವೇದಿಕೆಯಾಗುತ್ತಿದೆ.

ಅದೆಷ್ಟೋ ಕುಟುಂಬಗಳು ಮದುವೆಗೆ ಮಾಡಿದ್ದ ಸಾಲಕ್ಕೆ ಸಿಲುಕಿ ನರಕಯಾತನೆ ಪಟ್ಟಿದ್ದಾರೆ. ಜೀವನದುದ್ದಕ್ಕೂ ಸಾಲ ತೀರಿಸಲು ಜೀವನವನ್ನು ಮುಡಿಪಾಗಿಸುತ್ತಾರೆ. ಸಮಕಾಲೀನ ಅದ್ದೂರಿ ಮದುವೆಗಳಿಗೆ ನೀಡುವ ಪ್ರಾಮುಖ್ಯತೆ ದಾಂಪತ್ಯದ ಬದುಕನ್ನು ತಿರುಗಿ ನೋಡುವಂತೆ ಯಾಕೆ ಮಾಡುವುದಿಲ್ಲ, ಎಂಬ ಪ್ರಶ್ನೆ ಕೆಲವರಿಗೆ ಮಾತಾಗಿ ಉಳಿಯುತ್ತದೆ. ರೈತ–ಪ್ರಗತಿಪರ–ಶರಣ ಚಳವಳಿಯ ಆದರ್ಶ ಮದುವೆಗಳು ಅಪರೂಪಕ್ಕೆ ಕಾಣುವುದಾದರು ಪ್ರೇಮಿಸುವ ಯುವ ಮನಸುಗಳಿಗೆ ಸರಳ ಮದುವೆಯ ಆಸರೆ ನಾಡಿನ ಉದ್ದಗಲಕ್ಕೂ ಮಾರ್ಪಾಡಾಗುತ್ತದೆ ಎಂಬುದು ಸತ್ಯವಾಗಿದೆ.

ಮಂತ್ರ ಮಾಂಗಲ್ಯ ಆಚರಣೆ ಹೇಗೆ ಆರಂಭವಾಯಿತು: ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರು ತಮ್ಮ ಹಿರಿಯ ಮಗ ಪೂರ್ಣಚಂದ್ರ ತೇಜಸ್ವಿ ಅವರ ಮದುವೆಯನ್ನು ಮಾಡುವ ಸಮಯಕ್ಕೆ ‘ಮಂತ್ರ ಮಾಂಗಲ್ಯ’ ಎಂದು ಪ್ರಕಟಿಸುತ್ತಾರೆ. ಕರ್ನಾಟಕದಲ್ಲಿ ಸರಳ ಮದುವೆಗೆ ಅದು ಹೊಸ ತೇಜಸ್ಸನ್ನು ತುಂಬಿತು. ಅದ್ದೂರಿ ಮದುವೆಗಳು ಜನರ ಬಡತನದ ಮಟ್ಟವನ್ನು ಹೆಚ್ಚಿಸುವುದಲ್ಲದೇ ಮೌಢ್ಯದ ಕೂಪಕ್ಕೆ ತಳ್ಳುತ್ತದೆ ಎನ್ನುವುದು ವೈಚಾರಿಕ ಚಿಂತನೆ.
ವಿಪರೀತ ಖರ್ಚುನಿಂದ ಮನುಷ್ಯನ ಮನೋಸ್ಥಿತಿಯು ಭ್ರಷ್ಟಗೊಳಿಸುತ್ತದೆ ಎನ್ನುವ ಕೆಲವು ಕಡೆ ವಿಶ್ಲೇಷಣೆಯನ್ನು ನೋಡಿದ್ದೇವೆ. ಜಾಸ್ತಿ ಖರ್ಚಿಲ್ಲದೆ ನಡೆಯುವ ಮದುವೆಗಳು ವಿಚಾರವಂತ ಯುವಪ್ರೇಮಿಗಳಿಗೆ ಆಪ್ತವೂ ಆಕರ್ಷಕವೂ ಆಗಿರುವುದರಿಂದ ಆಗಾಗ ಕ್ರಾಂತಿಯ ಕಿಡಿ ಮಿಂಚಿನಂತೆ ಮಿಂಚುತ್ತಿರುತ್ತದೆ. ಇಂತಹ ಮದುವೆ ಸಮಾಜದ ಆರೋಗ್ಯದ ದೃಷ್ಟಿಯಿಂದಲೂ ಮುಖ್ಯವಾಗಿದೆ. ಪೋಷಕರಿಗೆ ಮಕ್ಕಳ ಮದುವೆ ಮಾಡುವ ದೊಡ್ಡ ಹೊಣೆಗಾರಿಕೆ, ತಮ್ಮ ಮಕ್ಕಳ ಪಾಲನೆ, ಅವರಿಗೆ ನೀಡುವ ಶಿಕ್ಷಣದ ವೆಚ್ಚಕ್ಕಿಂತ ಮದುವೆಗೆ ಅಧಿಕ ಹಣ ಖರ್ಚು ಮಾಡುವ ಪೋಷಕರು ಹೆಚ್ಚು. ಆಡಂಬರದ ಮದುವೆಗಳಿಂದ ದುಂದುಗಾರಿಕೆಯನ್ನು ತಪ್ಪಿಸಲು ಮಂತ್ರಮಾಂಗಲ್ಯ ಸಹಕಾರಿ ಆಗುತ್ತದೆ.

ಸರಳ ಮದುವೆ ಕುರಿತು ಕುವೆಂಪು ಅವರ ಒಂದೆರಡು ಮಾತು: ಸರಳ ಮದುವೆ ಕುರಿತು ಕುವೆಂಪು ‘ನೀವು ಲೋಕವನ್ನಾಗಲಿ ಸಮಾಜವನ್ನಾಗಲಿ ಬದಲಾಯಿಸುವ ಯತ್ನ ಅಗತ್ಯ ಇಲ್ಲ. ನೀವು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ. ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ, ನಾನು ಹೇಳುವ ಸಣ್ಣ ಸುಧಾರಣೆ ನಿಮ್ಮ ಜೀವನದಲ್ಲಿ ಮಾಡಿಕೊಳ್ಳಿ. ನಿಮ್ಮ ಮದುವೆಯನ್ನು ವರದಕ್ಷಿಣೆ ತೆಗೆದುಕೊಳ್ಳದೆ ಶಾಸ್ತ್ರ ಆಚಾರಗಳಿಗೆ ಕಟ್ಟು ಬೀಳದೆ ನಿಮ್ಮ ಅಂತಸ್ತಿನ ಪ್ರದರ್ಶನ ಮಾಡದೆ ಸರಳವಾಗಿ ಮದುವೆ ಮಾಡಿಕೊಳ್ಳಿ. ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ನೀವು ನಂಬಿದ ಆದರ್ಶಗಳ ಮೌಲ್ಯಗಳ ಪರವಾಗಿ ನಿಂತು ಬೇಡದ ಸಂಪ್ರದಾಯಗಳನ್ನು ಎದುರಿಸಿ, ನಾವು ನಂಬಿದ ಆದರ್ಶಗಳ ಪರವಾಗಿ ನಿಲ್ಲುವ ಅದ್ಭುತ ಅನುಭವ ಆನಂದ ಎಂದಾದರೂ ನಿಮಗೆ ಗೊತ್ತಾಗುತ್ತದೆ’’, ಸರಳ ಮದುವೆಗೆ ಮಾದರಿ ಸೂತ್ರ ಸರಳ ಮದುವೆಗಳು ಏರ್ಪಡಿಸಬೇಕು ಎಂದು ಸರಳವಾಗಿ ಜನರಿಗೆ ಅರ್ಥವಾಗುವಂತೆ ಸಂದೇಶವನ್ನು ತಿಳಿಸುತ್ತಾರೆ.

ಪ್ರದೀಪ್ ಟಿ ಎಂ ಮತ್ತು ಉಮಾ ಅವರ ವಿವಾಹ ಹೇಗಾಯಿತು: ಅದೇ ರೀತಿಯಲ್ಲಿ ಆಡಂಬರ, ಮೂಡನಂಬಿಕೆ, ಮೌಢ್ಯತೆಗಳನ್ನು ಬದಿಗೊತ್ತಿಟ್ಟು ಹಾಗೂ ಪುರೋಹಿತರಿಲ್ಲದೆ ಸರಳವಾಗಿ, ಹಾಸನ ಜಿಲ್ಲೆ ಬೇಲೂರು ತಾಲೂಕಿನ ವಿ ಆರ್ ಮದುವೆ ಮಂಟಪದಲ್ಲಿ ಪತ್ರಕರ್ತೆ, ಭಾರತೀಯ ಕಾರ್ಯಕರ್ತೆಯಾಗಿ ಪ್ರತಿಯೊಬ್ಬರ ಮನಸ್ಸಿನಲ್ಲಿರುವ ನಾನು ಗೌರಿಯಾಗಿ ನೆಲೆಸಿರುವ, ಗೌರಿ ಲಂಕೇಶ್ ಅವರ ಹೆಸರಿನಲ್ಲಿ “ಗೌರಿ ಲಂಕೇಶ್ ವೇದಿಕೆ”ಎಂಬ ಹೆಸರಿನಲ್ಲಿ ಬುಧವಾರ ಇಬ್ಬರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಪ್ರದೀಪ್ ಟಿ ಎಂ ಮತ್ತು ಉಮಾ ಅವರ ಸರಳವಾಗಿ (ಮಂತ್ರ ಮಾಂಗಲ್ಯ) ವೈಚಾರಿಕವಾಗಿ ಮದುವೆಯನ್ನು ಹಿರಿಯ ಸಾಹಿತಿಗಳು, ವೈಚಾರಿಕವಾಗಿರುವ ಸ್ವಾಮೀಜಿಯವರು, ವಧು ವರರ ಪೋಷಕರು, ಸಂಬಂಧಿಕರು ಹಾಗೂ ಬಳಗದವರೆಲ್ಲ ಸೇರಿ ಮದುವೆಯನ್ನು ಯಶಸ್ವಿನಿಂದ ನೆರವೇರಿಸಿದರು.

ಮೊದಲು ಬುದ್ಧ, ಅಂಬೇಡ್ಕರ್, ಬಸವಣ್ಣನವರ ಚಿತ್ರ ಪಟ ಹಾಗೂ ಪಕ್ಕದಲ್ಲಿ ಅರಳಿಗಿಡವನ್ನು ಇಟ್ಟು ಪಟಕ್ಕೆ ಹೂ ಹಾಕುವ ಮೂಲಕ ಹಾಗೂ ಗಿಡಕ್ಕೆ ನೀರು ಹಾಕುವ ಮೂಲಕ ಪ್ರಾರಂಭಿಸಿ, ಕ್ರಾಂತಿಗೀತೆಗಳ ಹಾಡನ್ನು ಮಂಜುನಾಥ್ ಮತ್ತು ಅಂಗಡಿ ಚಂದ್ರು ತಂಡದವರ ಮೂಲಕ ಹಾಡಿಸಿ, ವಧುವರ ಹಾಗೂ ವೈಚಾರಿಕ ಮದುವೆ ಮಾಡಿಸಲು ಗಣ್ಯರಾಗಿ ಬಂದಂತಹ ಮಾಜಿ ಸಚಿವರು, ಶಾಸಕರು,ಸಾಹಿತಿ, ಲೇಖಕರಾದ ಬಿ ಟಿ ಲಲಿತಾ ನಾಯಕ್ ಮತ್ತು ನಿಜಗುಣಾನಂದ ಸ್ವಾಮೀಜಿಯವರನ್ನು ವೇದಿಕೆಗೆ ಆಹ್ವಾನಿಸಲಾಯಿತು.
ವೈಚಾರಿಕವಾಗಿ ಮದುವೆ ಮಾಡುವ ಮೂಲಕ, ಆಡಂಬರ, ಮೂಢ ನಂಬಿಕೆ, ಬ್ರಹ್ಮಾಣ ಶಾಹಿಗಳ ಆಚರಣೆಗಳು ಕಡಿವಾಣವನ್ನು ಹಾಕಬೇಕಾಗಿದೆ. ಸಂವಿಧಾನ ಪೀಠಿಕೆ ಮೂಲಕ ಆರಂಭಿಸಿ, ಸಂವಿಧಾನ ಪ್ರಕಾರ ನಾವು ಮುನ್ನಡೆಯಬೇಕು, ನವ ದಂಪತಿಗಳು ಒಳ್ಳೆಯ ಆಶಯದಿಂದ ಬದುಕುವುದನ್ನು ನೋಡಿ ಮುಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು. ನೀವು ಯಾವುದೇ ದೇವರ ಅಡಿಯಾಳಾಗಿ ಬದುಕಬೇಕಾಗಿಲ್ಲ. ಮನುಷ್ಯ ಸಮಾಜದ ಮಾನವೀಯ ಮೌಲ್ಯಗಳೇ ಮನುಷ್ಯನ ಮೊದಲನೆಯ ಹಾಗೂ ಕೊನೆಯ ದೇವರು. ಮಾನವರೆಲ್ಲರೂ ಸಮಾನರು. ಪುರುಷನು ಸ್ತ್ರೀಗಿಂತ ಮೇಲು ಎಂದು ಹೇಳುವ ಎಲ್ಲ ಧರ್ಮಗಳನ್ನೂ, ಎಲ್ಲ ಸಂಪ್ರದಾಯಗಳನ್ನೂ ನೀವು ಇಂದು ತಿರಸ್ಕರಿಸಿದ್ದೀರಿ, ಕುವೆಂಪು ಆಶಯದಂತೆ ಬದುಕಿ ಬಾಳಿ ತೋರಿಸಬೇಕು ಎಂದು “ಬಿ ಟಿ ಲಲಿತಾ ನಾಯಕ್” ಅವರು ಇಬ್ಬರಿಗೆ ಅರ್ಶಿವಾದಿಸಿದರು.

ಜನರ ಮೌಢ್ಯವನ್ನು ದೂರ ಮಾಡಬೇಕು ಎನ್ನುವ ದೃಷ್ಟಿಯಿಂದಲೇ ಕುವೆಂಪು ಇಪ್ಪತ್ತು ಅಂಶಗಳ ಸೂತ್ರವನ್ನೇ ಬರೆದಿದ್ದಾರೆ. ಅದು “ಮಂತ್ರಮಾಂಗಲ್ಯ ವಿವಾಹ ಸಂಹಿತೆ ಎಂದು ಜನಪ್ರಿಯವಾಗಿದೆ”. ದಾಂಪತ್ಯದ ವೇದಿಕೆ ಏರಿದ ತರುಣ–ತರುಣಿಯರಿಗೆ ತಮ್ಮ ಬದುಕು ಹೇಗಿರಬೇಕೆಂದು ಹೇಳುತ್ತದೆ. ಈ ವಿಚಾರವನ್ನು ತೆಗೆದುಕೊಂಡು ಮದುವೆ ಮಾಡಿಸುವಾಗ ನಿಜಗುಣಾನಂದ ಸ್ವಾಮೀಜಿಯವರು ನವ ದಂಪತಿಗೆ ಬೋಧಿಸುತ್ತಾ, ಬೋಧನೆಯ ಸ್ವರೂಪ ‘ಈ ದಿನ ಇಲ್ಲಿ ಈ ರೀತಿ ಮದುವೆಯಾಗುವುದರ ಮೂಲಕ ನೀವು ನಿಮ್ಮ ಎಲ್ಲ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಕೋಲೆ ಮತ್ತು ದಾಸ್ಯಗಳಿಂದ ವಿಮುಕ್ತರಾಗಿ ಸ್ವತಂತ್ರರಾಗುತ್ತಿದ್ದೀರಿ. ನೀವು ಇನ್ನು ಮುಂದೆ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಮೇಲಾದವರಲ್ಲ. ಯಾವ ಜಾತಿ ಮತ್ತು ಜನಾಂಗಗಳಿಗಿಂತ ಕೀಳಾದವರೂ ಅಲ್ಲ. ನಿಮ್ಮನ್ನು ಇಂದು ಮನುಷ್ಯ ಸಮಾಜದ ಎಲ್ಲ ಕೃತಕ ಜಾತಿಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ. ನಿಮ್ಮನ್ನು ಇಂದು ಎಲ್ಲಾ ಸಂಕಚಿತ ಮತಧರ್ಮಗಳಿಂದ, ನಿಮ್ಮನ್ನು ಅಸತ್ಯ ಮತ್ತು ಮೂಢನಂಬಿಕೆಗಳಿಂದ, ಮನುಷ್ಯನ ಜೀವಿತ ಕಾಲವೇ ಒಂದು ಸುಮುಹೂರ್ತ. ಇದರೊಳಗೆ ಮುಹೂರ್ತ, ರಾಹುಕಾಲ, ಗುಳಿಕಕಾಲಗಳನ್ನೂ ನೋಡುವ ಅಗತ್ಯವಿಲ್ಲ. ಕಾಲವು ನಿರ್ಗುಣ. ಎಂದೂ ಸಂಪಾದಿಸಲು, ಸೃಷ್ಟಿಸಲು, ಕೂಡಿಡಲು ಸಾಧ್ಯವೇ ಇಲ್ಲದ, ಮನುಷ್ಯನ ಜೀವಿತ ಕಾಲದ ಪ್ರತಿ ಕ್ಷಣವೂ ಅತ್ಯಮೂಲ್ಯ. ಯಾರು ಈ ಸತ್ಯವನ್ನು ಅರಿಯುತ್ತಾರೋ ಅವರು ತಮ್ಮ ಕರ್ತವ್ಯ ಮತ್ತು ನಡವಳಿಕೆಗಳಿಂದ ಕಾಲವನ್ನು ಒಳ್ಳೆಯ ಅಥವಾ ಕೆಟ್ಟ ಕಾಲವನ್ನಾಗಿ ಪರಿವರ್ತಿಸಬಲ್ಲರು ಎಂದು ವೈಚಾರಿಕವಾಗಿ ತಾಳಿ ಧಾರಣೆ ಮಾಡಿಸಿ, ಹೂವಿನ ಮಾಲೆ ಹಾಕಿಸಿ, ಎಲ್ಲರ ಸಮ್ಮುಖದಲ್ಲಿ ವೈಚಾರಿಕವಾಗಿ ಮದುವೆಯನ್ನು ಮಾಡಿಸಿದರು.

ಹೆಂಡತಿಯಾಗಲೀ ಗಂಡನಾಗಲೀ ಪರಸ್ಪರ ಅಧೀನರೂ ಅಲ್ಲ, ಆಜ್ಞಾನುವರ್ತಿಯೂ ಅಲ್ಲ. ಹೆಂಡತಿಯೂ ಗಂಡನಷ್ಟೇ ಸ್ವತಂತ್ರಳೂ ಸಮಾನತೆಯುಳ್ಳವಳೂ ಆಗಿರುತ್ತಾಳೆ. ಗಂಡ–ಹೆಂಡತಿಯನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಪ್ರೀತಿ ಒಂದೇ. ಒಬ್ಬರನ್ನೊಬ್ಬರು ಪ್ರೀತಿಸದವರು ತಾಳಿ ಕಟ್ಟಿಕೊಂಡರೂ ವ್ಯರ್ಥ, ಅಗ್ನಿಯನ್ನು ಸುತ್ತಿದರೂ ವ್ಯರ್ಥ, ಯಾವ ಯಾವ ಶಾಸ್ತ್ರ ಆಚಾರದ ಪ್ರಕಾರ ಮದುವೆಯಾದರೂ ವ್ಯರ್ಥ. ದೇವರ ಬಗ್ಗೆ ಎಂದೂ ಸುಳ್ಳು ಹೇಳಕೂಡದು. ನಿಮ್ಮ ಅನುಭವ, ನಿಮಗೆ ದೇವರು ಇಲ್ಲವೆಂದು ತಿಳಿಸಿದರೆ ದೇವರು ಇಲ್ಲವೆಂದು ಹೇಳಿ. ನಿಮ್ಮ ಅನುಭವ, ನಿಮಗೆ ದೇವರು ಇದ್ದಾನೆಂದು ತಿಳಿಸಿದರೆ ದೇವರು ಇದ್ದಾನೆಂದು ಹೇಳಿ. ನಿಮ್ಮ ಅನುಭವ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ತಿಳಿಸಿದರೆ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ಹೇಳಿ ಎಂದು ನಿಜಗುಣಾನಂದ ಸ್ವಾಮೀಜಿ ತುಂಬಿದ ಮದುವೆ ಮಂಟಪದಲ್ಲಿ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹಣ ಕೊಟ್ಟವರಿಗೆ ಮಾತ್ರ ಆದ್ಯತೆ; ಬಡವರ ಗೋಳಿಗೆ ಕಿವಿಗೊಡದ ತಾಲೂಕು ಆಡಳಿತ
ದೇವರ ಹೆಸರಿನಲ್ಲಿ ಧನಾರ್ಜನೆ ಮಾಡುವ ತೀರ್ಥಕ್ಷೇತ್ರಗಳನ್ನೂ, ದೇವಸ್ಥಾನಗಳನ್ನೂ ತಿರಸ್ಕರಿಸಿ, ದೇವರ ಹೆಸರಿನಲ್ಲಿ ದರೋಡೆ ಮಾಡುವ ಯಾತ್ರಾಸ್ಥಳಗಳನ್ನು ತಿರಸ್ಕರಿಸಿ. ವರದಕ್ಷಿಣೆ ಅಥವಾ ವಧುದಕ್ಷಿಣೆ ವ್ಯವಹಾರಗಳಿಗೆ ಒಳಗಾಗದೆ, ನೀವು ನಿಮ್ಮ ಸ್ವಂತ ಪ್ರಯತ್ನದಿಂದ ನಿಮ್ಮ ತಂದೆ ತಾಯಿಗಳಿಗೆ ಯಾವ ರೀತಿಯ ಆರ್ಥಿಕ ಹೊರೆಯಾಗದಂತೆ ವಿವಾಹ ಮಾಡಿಕೊಂಡಿದ್ದೀರಿ ಎಂದು ಪ್ರದೀಪ್ ಟಿ ಎಂ ಮತ್ತು ಉಮಾ ಅವರಿಗೆ ಅಭಿನಂದಿಸಿದರು. ಮಂಟಪದಲ್ಲಿ ಜನರು ಕಿಕ್ಕಿರಿದು ಅಶ್ಚರ್ಯದಂತೆ ಕ್ಷೀಣಿಸುತ್ತಾ, ಇಂತಹ ಒಂದು ಮದುವೆ ಮಾಡಿಕೊಳ್ಳಬಹುದ ಎಂದು ಸುತ್ತಮುತ್ತಲಿನ ಹಳ್ಳಿಯ ಜನರು ಪಿಸುಗೂಡುತ್ತ ದಿಟ್ಟಿಸಿ, ದಂಪತಿಗಳಿಗೆ ಆಶೀರ್ವದಿಸಿದರು.