ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೆಷನ್ ಆಫ್ ಇಂಡಿಯಾ (ಎಸ್ಐಒ) ಸಂಸ್ಥಾಪನಾ ದಿನ (ಅ.19)ದ ಅಂಗವಾಗಿ, “HUDA – Guided by Principles, Driven by Purposes” ಎಂಬ ಅಭಿಯಾನದ ಭಾಗವಾಗಿ ಎಸ್ಐಒ ಪಾಣೆಮಂಗಳೂರು ಘಟಕದ ವತಿಯಿಂದ ಆ್ಯಂಬುಲೆನ್ಸ್ ಚಾಲಕ ಮಹೇಶ್ ಕುಲಾಲ್ಗೆ ಸನ್ಮಾನ ಮಾಡಲಾಯಿತು.
ತುರ್ತು ಸಂದರ್ಭಗಳಲ್ಲಿ ಬಡಜನರಿಗೆ ನೆರವಾಗುವ ಸದುದ್ದೇಶದೊಂದಿಗೆ ತಾವು ಆರಂಭಿಸಿದ್ದ ಆ್ಯಂಬುಲೆನ್ಸ್ ಸೇವೆ ಮೂಲಕ ಸಾವಿರಾರು ಜನರಿಗೆ ಆಶಾಕಿರಣವಾಗಿರುವ ಮಹೇಶ್ ಕುಲಾಲ್ ಅವರನ್ನು ಎಸ್ಐಒ ತಂಡ ಭೇಟಿಯಾಗಿ ಅಭಿನಂದಿಸಿ, ಗೌರವಿಸಿತು.
ಮಹೇಶ್ ಕುಲಾಲ್ ಅವರು ಕಲ್ಲಡ್ಕ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅಪಘಾತಗಳು, ಅನಾರೋಗ್ಯದ ತುರ್ತು ಸನ್ನಿವೇಶಗಳು ಉದ್ಭವಿಸಿದಾಗ ಅಶಕ್ತರಿಗೆ ತಕ್ಷಣ ನೆರವಾಗುವ ಉದ್ದೇಶದಿಂದ, ಸ್ಥಳೀಯ ಸಮಾಜಸೇವಾ ಮನೋಭಾವದ ಯುವಕರ ಸಹಕಾರದೊಂದಿಗೆ ಐದು ವರ್ಷಗಳ ಹಿಂದೆ ಆಂಬುಲೆನ್ಸ್ ಸೇವೆಯನ್ನು ಆರಂಭಿಸಿದ್ದರು. ಅವರು ತಮ್ಮ ಸೇವಾ ಮನೋಭಾವದಿಂದ ಬಡಜನರ ಪಾಲಿಗೆ ನಿಜವಾದ ಆಪತ್ಭಾಂಧವರಾಗಿ ಪರಿಣಮಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು | ಕಾರ್ ಸ್ಟ್ರೀಟ್ ಚಿನ್ನದ ಗಟ್ಟಿ ದರೋಡೆ ಪ್ರಕರಣ; ಆರೋಪಿಗಳ ಬಂಧನ
ಸಮಾಜದ ಹಿತದೃಷ್ಟಿಯಿಂದ ನಿರಂತರವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಕಾರ್ಯವು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಈ ಅಮೂಲ್ಯ ಸೇವೆಯನ್ನು ಗುರುತಿಸಿ ಎಸ್ಐಒ ತಂಡ ಅಭಿನಂದಿಸಿ, ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲು ಶುಭ ಹಾರೈಸಿತು.
ಕಾರ್ಯಕ್ರಮದಲ್ಲಿ ಎಸ್ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬ್ರ. ಆಸಿಫ್ ಡಿ.ಕೆ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬ್ರ. ರಿಝ್ವಾನ್ ಅಝ್ಹರಿ, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಪಾಣೆಮಂಗಳೂರು ಘಟಕಾಧ್ಯಕ್ಷ ಬ್ರ. ಮುಝಮ್ಮಿಲ್ ಮೆಲ್ಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.