ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಸ್ಮಶಾನದಿಂದ ಆರಂಭಿಸುವುದಾಗಿ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
2018ರಲ್ಲಿ, ಜ್ಯೋತಿಷ್ಯದಲ್ಲಿ ಅಶುಭವೆಂದು ಹೇಳಲಾಗಿರುವ ರಾಹುಕಾಲದ ಸಮಯದಲ್ಲಿ ಜಾರಕಿಹೊಳಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಆ ಚುನಾವಣೆಯಲ್ಲಿ ಅವರು ಗೆದ್ದಿದ್ದರು. ಕಡಿಮೆ ಅಂತದದಲ್ಲಿ ಗೆದ್ದಿದ್ದಕ್ಕೂ ಇದೇ ಕಾರಣವೆಂದು ಕೆಲವರು ಹೇಳಿದ್ದರು. ಆದರೆ, ‘ಜ್ಯೋತಿಷ್ಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡದಿರುವುದೇ ಕಡಿಮೆ ಅಂತರದ ಗೆಲುವುಗೆ ಕಾರಣ’ ಎಂದು ಮೌಢ್ಯದ ಮಾತುಗಳನ್ನು ಜಾರಕಿಹೊಳಿ ತಳ್ಳಿಹಾಕಿದ್ದರು.
“ಚುನಾವಣೆ ಘೋಷಣೆಯಾದ ನಂತರ ನಾನು ಕ್ಷೇತ್ರಕ್ಕೆ ನಾನು ಭೇಟಿ ನೀಡಿರಲಿಲ್ಲ. ಎಲ್ಲವನ್ನೂ ನನ್ನ ಬೆಂಬಲಿಗರಿಗೆ ಬಿಟ್ಟಿದ್ದೆ. ಪ್ರಚಾರ ಮಾಡದೇ ಗೆಲ್ಲಬಹುದೇ ಎಂಬ ಪ್ರಯೋಗ ಇದಾಗಿತ್ತು” ಎಂದು ಜಾರಕಿಹೊಳಿ ಹೇಳಿದ್ದರು.
ಆದರೆ, ಈ ಬಾರಿ ಅವರು ಅಂತಹ ಪ್ರಯೋಗಕ್ಕೆ ಮುಂದಾಗಿಲ್ಲ. ಹೀಗಾಗಿ, ಅವರೇ ಖದ್ದು ಪ್ರಚಾರಕ್ಕೆ ಇಳಿಯಲಿದ್ದು, ಸ್ಮಶಾನದಲ್ಲಿ ಚುನಾವಣಾ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಲಿದ್ದಾರೆ.
“ಇದು ಸಂಪ್ರದಾಯಕ್ಕೆ ವಿರುದ್ಧವಲ್ಲ. ಕಳೆದ 30 ವರ್ಷಗಳಿಂದ ನಾವು ನಡೆಸುತ್ತಿರುವ ಮೂಢನಂಬಿಕೆ ವಿರೋಧಿ ಅಭಿಯಾನಗಳು ಮುಂದುವರಿಯಲಿವೆ. ಬುದ್ಧ, ಬಸವ, ಅಂಬೇಡ್ಕರ್ ತೋರಿದ ಹಾದಿಯಲ್ಲಿ ಸಾಗುತ್ತಿದ್ದೇವೆ” ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
“ತಾವು ಪ್ರಚಾರದಲ್ಲಿ ಭಾಗಿಯಾಗದಿದ್ದರೆ ಅಥವಾ ಪ್ರಚಾರ ಮಾಡದಿದ್ದರೆ, ಪ್ರತಿಸ್ಪರ್ಧಿಗಳು ತಮ್ಮ ಅನುಪಸ್ಥಿತಿಯನ್ನು ‘ಸುಳ್ಳು ಪ್ರಚಾರ’ ಮಾಡಲು ಬಳಸಿಕೊಳ್ಳಬಹುದು. ನನ್ನ ಎದುರಾಳಿಗಳಿಗೆ ಅವಕಾಶ ನೀಡಲು ನಾನು ಬಯಸುವುದಿಲ್ಲ. ನಮ್ಮ ಘೋಷವಾಕ್ಯವು ‘ಹೆಚ್ಚು ಮತಗಳ ಅಂತರದಿಂದ ನಮ್ಮನ್ನು ಗೆಲ್ಲಿಸಿ’ ಎಂದಾಗಿರುತ್ತದೆ” ಎಂದು ಅವರು ಹೇಳಿದ್ದಾರೆ.