ಊಳಿಗಮಾನ್ಯ ಆಳ್ವಿಕೆಯಡಿ ಬಹುಕಾಲದವರೆಗೆ ಅಜ್ಞಾನ ಹಾಗೂ ಮೌಢ್ಯದ ಅಂಧಕಾರದಲ್ಲಿ ಮುಳುಗಿ ಬಳಲುತ್ತಿದ್ದ ಭಾರತದ ನೆಲಕ್ಕೆ ಆಧುನಿಕ ಜ್ಞಾನದ ಬೆಳಕನ್ನು ತಂದ ಮಹಾನ್ ಧರ್ಮನಿರಪೇಕ್ಷ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ಅವರ 134ನೇ ಸ್ಮರಣ ದಿನವನ್ನು ಎಐಡಿಎಸ್ಒ ಬಳ್ಳಾರಿ ಜಿಲ್ಲಾ ಘಟಕ ಆಚರಿಸಿತು.
ನಗರದ ವಿಮ್ಸ್ ಗ್ರೌಂಡ್ನಲ್ಲಿ ನಡೆದ ಸ್ಮರಣ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಐಡಿಎಸ್ಒ ಜಿಲ್ಲಾಧ್ಯಕ್ಷ ಕೆ ಈರಣ್ಣ, “ಶತಮಾನಗಳವರೆಗೂ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು ಕೆಳವರ್ಗದ ಸಮುದಾಯಗಳಿಗೆ ವಿದ್ಯೆ ನೀಡಲು ಹಾಗೂ ಬಾಲ್ಯದಲ್ಲೇ ವಿಧವೆಯರಾಗಿ ನರಕದ ಬದುಕು ಸವೆಸುತ್ತಿದ್ದ ಹೆಣ್ಣುಮಕ್ಕಳ ಮರುವಿವಾಹಕ್ಕಾಗಿ ಈಶ್ವರಚಂದ್ರ ಅವರು ಅವಿರತ ಶ್ರಮಿಸಿದರು. ಜೊತೆಗೆ, ಹಳೆಯ ಗೊಡ್ಡು ಸಂಪ್ರದಾಯಗಳ ಸಂಕುಚಿತ ಚಿಂತನೆಗಳ ವಿರುದ್ಧ ಹೋರಾಡಿದ ವಿದ್ಯಾಸಾಗರರು, ನವೋದಯ ಚಳುವಳಿಯ ಪತಾಕೆಯನ್ನು ಭಾರತದ ಆಗಸದಲ್ಲಿ ಹಾರಿಸಿದರು” ಎಂದರು.
“ನಿರುದ್ಯೋಗ, ಬಡತನ, ಹಸಿವು ದೇಶದಾದ್ಯಂತ ತಾಂಡವವಾಡುತ್ತಿದೆ. ಬಡ ರೈತ ಕಾರ್ಮಿಕರು, ಮಧ್ಯಮವರ್ಗದ ಜನತೆ ತುಳಿತಕ್ಕೊಳಪಡುತ್ತಿದ್ದಾರೆ. ಕುಸಂಸ್ಕೃತಿ ತೀವ್ರವಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಎಂಥದ್ದೇ ಅನ್ಯಾಯವನ್ನೂ ಪ್ರಶ್ನಿಸುತ್ತಿದ್ದ ವಿದ್ಯಾಸಾಗರರ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದಿನ ಸಾಮಾಜಿಕ ಪಿಡುಗುಗಳ ವಿರುದ್ಧ ಬಲಿಷ್ಠ ಚಳವಳಿ ಕಟ್ಟಲು ಮುನ್ನುಗ್ಗಬೇಕಿದೆ. ಆಗ ಮಾತ್ರ ನಾವು ವಿದ್ಯಾಸಾಗರರಿಗೆ ನೈಜ ಗೌರವವನ್ನು ಸಲ್ಲಿಸಿದಂತಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಬಳ್ಳಾರಿ | ಸಂಜೀವನ ಕೋಟೆಯಲ್ಲಿ ಕರಡಿ ದಾಳಿ; ರೈತನಿಗೆ ಮಾರಣಾಂತಿಕ ಗಾಯ
ಜಿಲ್ಲಾ ಪದಾಧಿಕಾರಿ ಕಾಂತೇಶ್, ತಿಪ್ಪೇಸ್ವಾಮಿ ಸೇರಿದಂತೆ ಹಲವಾರು ಜನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.