ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ ಒಣಮೆಣಸಿನಕಾಯಿ ಮಾರಾಟ ಮಾಡಲು ಜಿಲ್ಲೆಯ ರೈತರಿಂದ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
2024-25ನೇ ಸಾಲಿನಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ ಒಣಮೆಣಸಿನಕಾಯಿ ಮಾರುಕಟ್ಟೆ ಮಧ್ಯಪ್ರವೇಶ ದರ ₹10,589.20 ಪ್ರತಿ ಕ್ವಿಂಟಲ್ಗೆ ನಿಗದಿಪಡಿಸಿದೆ. ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಕಾರ್ಯಾಲಯವು ನೋಂದಣಿ ಸ್ಥಳವಾಗಿದೆ. ರೈತರು ಒಣಮೆಣಸಿನಕಾಯಿ ಉತ್ಪನ್ನವನ್ನು ಕಡ್ಡಾಯವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇ-ಟೆಂಡರ್ ಮೂಲಕ ಮಾರಾಟ ಮಾಡಿದಾಗ ಮಾತ್ರ ಈ ಯೋಜನೆ ಅನ್ವಯವಾಗಲಿದೆ ಎಂದು ತಿಳಿಸಿದರು.
ನೋಂದಣಿ ಮಾಡಿಕೊಳ್ಳಲು ಪ್ರಕಟಗೊಂಡ ದಿನದಿಂದ 15 ದಿನಗಳವರೆಗೆ ಕಾಲಾವಕಾಶ ಇರುತ್ತದೆ. ಇ-ಆಡಳಿತ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೀಡಿರುವ ವಿವರಗಳನ್ನು ಭೂಮಿ, ಯುಐಡಿಎಐ ಹಾಗೂ ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ಹೊಂದಾಣಿಕೆ ಮಾಡಿ, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಯುಎಂಪಿ ತಂತ್ರಾಂಶದ ಇ-ಟೆಂಡರ್ ಮೂಲಕ ಮಾರಾಟ ಪ್ರಕ್ರಿಯೆ ಕೈಗೊಳ್ಳಲಾಗುವುದು. ಈ ಯೋಜನೆಯಡಿ ಪ್ರತಿ ಎಕರೆಗೆ 15 ಕ್ವಿಂಟಲ್ ಇಳುವರಿಯಂತೆ ಪ್ರತಿ ರೈತರಿಂದ ಗರಿಷ್ಠ 30 ಕ್ವಿಂಟಲ್ಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತ ನೀಡಲಾಗುವುದು.
ಬಳ್ಳಾರಿ ಜಿಲ್ಲೆಯಲ್ಲಿ ಯಾವ ಮಾರುಕಟ್ಟೆಯಲ್ಲಿಯೂ ಒಣಮೆಣಸಿನಕಾಯಿ ಹುಟ್ಟುವಳಿಗೆ ಇ-ಟೆಂಡರ್ ಪದ್ಧತಿ ಜಾರಿಯಲ್ಲಿಲ್ಲದಿರುವುದರಿಂದ ಜಿಲ್ಲೆಯ ರೈತರು ಎನ್ಇಎಂಎಲ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದ ಯಾವುದೇ ಇ-ಟೆಂಡರ್ ಪದ್ಧತಿ ಜಾರಿಯಲ್ಲಿರುವ ವಿವಿಧ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಒಣಮೆಣಸಿನಕಾಯಿ ಮಾರಾಟ ಮಾಡುವ ಸಂದರ್ಭದಲ್ಲಿ ಆನ್ ಲೈನ್ನಲ್ಲಿ ನೋಂದಣಿ ಮಾಡಿದ ರಶೀದಿ ಪಡೆದಿದ್ದಲ್ಲಿ ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ. ಹಾಗಾಗಿ ರೈತರು ಫ್ರೂಟ್ಸ್ ಐಡಿ, ಆಧಾರ್ ಕಾರ್ಡ್, ಪಹಣಿಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡು ಒಣಮೆಣಸಿನಕಾಯಿ ಮಾರಾಟ ಮಾಡಿ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು.
ಈ ಸುದ್ದಿ ಓದಿದ್ದೀರಾ? ಬೀದರ್ | ದಲಿತರ ಭೂಮಿ-ವಸತಿ ಹಕ್ಕಿಗಾಗಿ ದಲಿತ ಸಂಘರ್ಷ ಸಮಿತಿ ಧರಣಿ
ಹೆಚ್ಚಿನ ಮಾಹಿತಿಗಾಗಿ ದೂ.08392-250435ಕ್ಕೆ ಸಂಪರ್ಕಿಸಬಹುದು ಎಂದು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.