ಶರಣರ ವಿಚಾರ, ಶರಣ ಸಂಸ್ಕೃತಿಯಿಂದ ಈ ನಾಡು ಸಮೃದ್ಧವಾಗಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ ವಿ ನಾಗರಾಜ ಮೂರ್ತಿ ಹೇಳಿದರು.
ಬಳ್ಳಾರಿ ನಗರದ ಹೀರದ ಸೂಗಮ್ಮ ಶಾಲೆಯ ಆವರಣದ ಶರಣ ಸಕ್ಕರೆ ಕರಡೀಶ ಸಭಾಂಗಣದಲ್ಲಿ ಪ್ರಜ್ಞೆ ಪ್ರಕಾಶನವು ಆಯೋಜಿಸಿದ್ದ ಲೇಖಕ ಸಿದ್ದರಾಮ ಕಲ್ಮಠ ಅವರ ‘ಕರ್ಪೂರದ ಬೆಳಗು’ ನಾಟಕ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, “ನಾಟಕ ಕೇವಲ ಕೃತಿಯಾಗದೆ ಅದು ರಂಗದ ಮೇಲೆ ಬಂದಾಗ ನಾಟಕದ ಮಹತ್ವ ಹೆಚ್ಚಾಗುತ್ತದೆ. ಕರ್ಪೂರದ ಬೆಳಗು ನಾಟಕ ಕೃತಿಯು ಸುಲಲಿತ ಭಾಷೆ, ಸುಂದರ ಕಥಾ ಹಂದರವನ್ನು ಒಳಗೊಂಡಿರುವುದರಿಂದ ಇದು ಹೆಚ್ಚು ರಂಗ ಪ್ರಯೋಗಗಳನ್ನು ಕಾಣುವ ಸಾಧ್ಯತೆ ಇದ್ದು ಈ ನಾಟಕವನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಬೇರೆ ಬೇರೆ ಭಾಗಗಳ ಕಲಾಭಿಮಾನಿಗಳು ಪ್ರದರ್ಶಿಸಿ ನಮ್ಮ ಶರಣ ಸಂಸ್ಕೃತಿಯನ್ನು ರಂಗದ ಮೇಲೆ ಅನಾವರಣಗೊಳಿಸಬೇಕು” ಎಂದರು.
“ಕೇವಲ ಸುಂದರ ಕಟ್ಟಡಗಳು ಮತ್ತು ಭವ್ಯ ಬಂಗಲೆಗಳಿಂದ ಮಾತ್ರ ನಗರದ ಸುಸ್ಥಿರತೆಯನ್ನು ಅಳೆಯಲು ಸಾಧ್ಯವಿಲ್ಲ. ಬದಲಾಗಿ ನಾಡನ್ನು ಕಟ್ಟುವುದೆಂದರೆ ಆ ನಾಡಿನ ಸಂಸ್ಕೃತಿಯನ್ನು ಕಟ್ಟಿದಾಗ ಮಾತ್ರ ನಾಡನ್ನು ನಿಜವಾಗಿ ಕಟ್ಟಿದಂತೆ. ಶಿವಯೋಗಿ ಮರಿಸ್ವಾಮಿಗಳು ಹಾಗೂ ಸಕ್ಕರೆ ಕರಡೀಶರು ಕೇವಲ ಕಟ್ಟಡಗಳು, ಭವನಗಳನ್ನು ಮಾತ್ರ ಕಟ್ಟುವುದಕ್ಕೆ ಅವರ ಬದುಕು ಸೀಮಿತವಾಗದೆ ಎಲ್ಲರ ಮನಸ್ಸುಗಳಲ್ಲಿ ಸಂಸ್ಕೃತಿಯ ಬೀಜವನ್ನು ಬಿತ್ತಿ ಈ ನಾಡನ್ನು ಸಾಂಸ್ಕೃತಿಕವಾಗಿ ಸದೃಢಗೊಳಿಸಿದರು. ಹಿಂದಿನವರ ಕಾರಣಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣ ಸಂಸ್ಕೃತಿಯ ನಡೆನುಡಿ ದಟ್ಟವಾಗಿದೆ” ಎಂದು ಅಭಿಪ್ರಾಯಪಟ್ಟರು.
“ಗುರು ಹಾಗೂ ಶಿಷ್ಯರ ಜೀವನ ದರ್ಶನವನ್ನು ನಾಟಕ ಕಟ್ಟಿಕೊಡುತ್ತದೆ. ಈ ನೆಲದಲ್ಲಿ ನಡೆದಂತಹ ಅನೇಕ ಚಾರಿತ್ರಿಕ ಘಟನೆಗಳನ್ನು ಹೇಳುವುದರ ಜೊತೆಗೆ ಇಲ್ಲಿನ ಜನರ ಮನಸ್ಸಿನಲ್ಲಿ ಭಕ್ತಿಯ ಭಾವ ಸೃಷ್ಟಿಸುವ ಅನೇಕ ವಿಷಯಗಳು ಈ ನಾಟಕದಲ್ಲಿ ಇವೆ. ಬಳ್ಳಾರಿಯನ್ನು ಮರಿ ಶಿವಯೋಗಿಗಳು ‘ಮರಿ ಕಲ್ಯಾಣ’ವೆಂದು ಕರೆದರು. ಈ ನಾಟಕವು ಹೆಚ್ಚು ರಂಗ ಪ್ರಯೋಗವನ್ನು ಹೊಂದಿ ಇಲ್ಲಿನ ಸಾಂಸ್ಕೃತಿಕ ಅನನ್ಯತೆಯನ್ನು ಬಿಂಬಿಸಲಿ. ಬಳ್ಳಾರಿಯು ಕಲೆಯ ತವರು ಮನೆಯಾಗಿದ್ದು ಇಲ್ಲಿನ ಅನೇಕ ಧೀಮಂತ ರಂಗ ಕಲಾವಿದರು ರಂಗಭೂಮಿಗೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ.ಬಳ್ಳಾರಿಯು ವಿಭಿನ್ನವಾದ ಬಹುಮುಖ ಸಾಂಸ್ಕೃತಿಕ ಗಟ್ಟಿತನವನ್ನು ಹೊಂದಿದೆ” ಎಂದವರು ಹೇಳಿದರು.
ಇದನ್ನೂ ಓದಿ: ಬಳ್ಳಾರಿ | ಬಂಡಿಹಟ್ಟಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ; ಸಾರ್ವಜನಿಕರಿಂದ ತಕರಾರು
ಕೃತಿಯ ಕುರಿತು ಡಾ. ಪಿ. ದಿವಾಕರನಾರಾಯಣ ಮಾತನಾಡಿ, “ಈ ಕೃತಿಯು ಶರಣರ ಜೀವನಗಾಥೆಯಾಗಿದ್ದು, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ವಿಚಾರಗಳ ಕೈಪಿಡಿಯಂತಿದೆ. ಬಳ್ಳಾರಿಯು ಭಾಷೆ, ಸಂಸ್ಕೃತಿ ,ಪಂಥ, ರಾಜಮನೆತನಗಳು ಅನೇಕ ಪ್ರಮುಖ ವಿಚಾರಗಳಿಗೆ ಪ್ರಥಮ ಸ್ಥಾನ ಪಡೆದಿದೆ ಎಂದರು.ಹದಿನೆಂಟನೇ ಶತಮಾನದ ಕೊನೆಯ ಕಾಲಘಟ್ಟದ ಕಥೆಯನ್ನು ಈ ನಾಟಕವು ಹೊಂದಿದ್ದು ಗತಿಸಿದ ಗುರು ಹಾಗೂ ಶಿಷ್ಯರ ಸಂಬಂಧದ ಬಗೆಗಿನ ಸೂಕ್ಷ್ಮತೆಯನ್ನು ಇಂದಿನ ಆಧ್ಯಾತ್ಮಿಕ ಸಾಧಕರು ತಿಳಿದುಕೊಳ್ಳಬೇಕಿದೆ” ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವೈ ಎಂ ಸತೀಶ್, ಡಾ.ಕೆ ಎಸ್ ಮಹಾಂತೇಶ್, ಪಲ್ಲೇದ ಪಂಪಾಪತೆಪ್ಪ ಮೇಟಿ ಪಂಪನಗೌಡ, ಕೇಣಿ ಬಸಪ್ಪ, ಕಲ್ಗುಡಿ ಮಂಜುನಾಥ್, ನಂದೀಶ್ ಮಠಂ, ಕಪ್ಪಗಲ್ ಪ್ರಭುದೇವ ಹಾಗೂ ಇತರರು ಇದ್ದರು.