ʼಉದ್ಯೋಗ ಸೃಷ್ಟಿಸಿʼ, ʼಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿʼ ಸೇರಿದಂತೆ ಹಲವು ಘೋಷಣೆಗಳೊಂದಿಗೆ ಡಿವೈಎಫ್ಐ ನೇತೃತ್ವದ ಯುವಜನ ಜಾಥಾಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ ಅವರು ನೆರವೇರಿಸಿ ಮಾತನಾಡುತ್ತಾ, “ನಮ್ಮ ಜಿಲ್ಲೆಗೆ ಬಂದಿರುವ ಕೈಗಾರಿಕೆಗಳಿಂದಾಗಿ ನೆಲ, ಜಲ, ವಾಯು ಹಾಳಾಗುತ್ತಿದೆ. ಆದರೆ, ನಮ್ಮ ಯುವಕರಿಗೆ ಉದ್ಯೋಗಾವಕಾಶಗಳು ಮರೀಚಿಕೆಯಾಗಿಯೇ ಉಳಿದಿದೆ ಎಂಬುದು ದುರಂತ. ಅವಕಾಶಗಳ ಕೊರತೆಯಿಂದಾಗಿ ಯುವ ಸಮುದಾಯ ಅಭದ್ರತೆಯಲ್ಲಿ ಬದುಕುವಂತಾಗಿದೆ. ಡಿವೈಎಫ್ಐ ಹಮ್ಮಿಕೊಂಡಿರುವ ಈ ಜಾಥಾ ಯುವಜನರನ್ನು ಎಚ್ಚರಗೊಳಿಸುವ ಕಾರ್ಯ ಮಾಡಲಿ” ಎಂದರು.

ಡಿವೈಎಫ್ಐ ದಕ್ಷಿಣ ಕ್ನ್ನಡ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ, “ದ.ಕ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಕ್ಷುಬ್ದ ವಾತಾವರಣ ಯುವಜನರ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದೆ. ಜಿಲ್ಲೆಯಲ್ಲಿನ ಅಶಾಂತಿಯ ವಾತಾವರಣ ಜಿಲ್ಲೆಯನ್ನು ಅಭಿವೃದ್ದಿಯಿಂದ ಹಿಂದಕ್ಕೆ ಸರಿಸುತ್ತಿದೆ. ಉದ್ಯೋಗಗಳು ನಾಶವಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ಆಗಬೇಕಾದರೆ ಉದ್ಯೋಗಗಳು ಸೃಷ್ಟಿಯಾಗಬೇಕಾದರೆ ಮೊದಲು ಶಾಂತಿ ಸೌಹಾರ್ದತೆ ನೆಲೆಸುವಂತೆ ನೋಡಿಕೊಳ್ಳಬೇಕು” ಎಂದರು.
ಯುವಜನ ಜಾಥಾದ ನೇತೃತ್ವ ವಹಿಸಿದ್ದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಾಥಾದ ಉದ್ದೇಶ ಮತ್ತು ಸರಕಾರದ ಮುಂದಿಟ್ಟಿರುವ ಬೇಡಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಬೆಳ್ತಂಗಡಿಯಲ್ಲಿರುವ ತಾಲೂಕು ಕಚೇರಿ ಸಹಿತ ಸರಕಾರದ ವಿವಿಧ ಇಲಾಖೆಗಳಲ್ಲಿ ನೂರಾರು ಹುದ್ದೆಗಳು ಖಾಲಿ ಬಿದ್ದಿದೆ. ಇಲ್ಲಿನ ಪ್ರವಾಸೋದ್ಯಮಕ್ಕೆ ಯಾವ ಆಧ್ಯತೆಯೂ ನೀಡಿಲ್ಲ. ಜಮಲಾಬಾದ್ ನಂತಹ ಕೋಟೆಗಳು, ಪ್ರಾಕೃತಿಕ ಸೌಂದರ್ಯ ಹೊಂದಿರುವ ಹಲವಾರು ಜಲಪಾತಗಳು ಹಾಗೂ ಪಶ್ಚಿಮ ಘಟ್ಟಗಳನ್ನು ಪರಿಸರಕ್ಕೆ ಯಾವುದೇ ಅಡ್ಡಿಯಾಗದಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಅಭಿವೃದ್ಧಿಗೊಳಿಸಲು ಸಾಧ್ಯವಾದರೇ ಬೆಳ್ತಂಗಡಿ ಭಾಗದ ಯುವಜನರಿಗೆ ಹಲವು ಉದ್ಯೋಗಗಳು ಸೃಷ್ಡಿಯಾಗಲು ಸಾಧ್ಯವಾಗಲಿವೆ” ಎಂದರು.



ಇದನ್ನೂ ಓದಿ: ಬೆಳ್ತಂಗಡಿ | ಸಮಾವೇಶಗಳ ಮೂಲಕ ಹೃದಯಗಳ ಒಗ್ಗೂಡುವ ಕೆಲಸವಾಗಲಿ: ಚಾರುಕೀರ್ತಿ ಸ್ವಾಮೀಜಿ
ವೇದಿಕೆಯಲ್ಲಿ ಕೋಶಾಧಿಕಾರಿ ಮನೋಜ್ ವಾಮಂಜೂರು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷಕಿರಣ ಪ್ರಭ, ಭಾರತ ವಿದ್ಯಾರ್ಥಿ ಸಂಘಟನೆಯ ವಿನುಶ ರಮಣ, ಇನಾಸ್ ಬಿ ಕೆ, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ಅದಿತಿ, ಕಾರ್ಯದರ್ಶಿ ಅಭಿಷೇಕ್ ಬೆಳ್ತಂಗಡಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ರೈತ ಸಂಘದ ಮುಖಂಡ ಸುರೇಶ್ ಭಟ್ ಉಪಸ್ಥಿತರಿದ್ದರು.
ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಿ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತನ್ನಿ ಎಂಬ ಬೇಡಿಕೆಯೊಂದಿಗೆ ಬೆಳ್ತಂಗಡಿಯಿಂದ ಆರಂಭವಾಗಿರುವ ಯುವಜನ ಜಾಥಾ ಜಿಲ್ಲೆಯಾದ್ಯಂತ ಸಂಚರಿಸಿ ಸೆ.9 ರಂದು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಸಮಾರೋಪಗೊಳ್ಳಲಿದೆ ಎಂದು ಡಿವೈಎಫ್ಐ ನ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.