ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಬೇಕೆಂಬ ಮಹತ್ವದ ಉದ್ದೇಶದಿಂದ ಬಹುಜನ ಜನಸಂಪರ್ಕ ಕಾರ್ಯಾಲಯ ತೆರೆದಿರುವುದು ಶ್ಲಾಘನೀಯವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಹೇಳಿದರು.
ಔರಾದ್ ಪಟ್ಟಣದಲ್ಲಿ ಶುಕ್ರವಾರ ಬಹುಜನ ಜನಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ʼಸಮಾಜದಲ್ಲಿ ಬಡವರು, ದಲಿತರು, ಕಾರ್ಮಿಕರು, ಶೋಷಿತರು ಅನೇಕ ಸಮಸ್ಯೆಗಳು ಅನುಭವಿಸುತ್ತ ನಿತ್ಯ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಅಂತಹ ಜನರನ್ನು ಗುರುತಿಸಿ ನ್ಯಾಯ ಸಿಗುವಂತೆ ಮಾಡಬೇಕಿದೆ. ಇಂದಿನ ಯುವಸಮೂಹ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಬಹುಜನ ಜನಸಂಪರ್ಕ ಕೇಂದ್ರದ ಪದಾಧಿಕಾರಿಗಳು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಪಕ್ಷಾತೀತವಾಗಿ ಕೆಲಸ ಮಾಡಿದರೆ ಮಾತ್ರ ಸಂಘಟನೆ ದೀರ್ಘಕಾಲ ಉಳಿಯುತ್ತದೆʼ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಟಿಪ್ಪು ಕ್ರಾಂತಿ ಸೇನೆ ಸಂಸ್ಥಾಪಕ ದಸ್ತಗಿರ ಮುಲ್ಲಾ ವಿಜಯಪುರ ಅವರು ಮಾತನಾಡಿ, ʼ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಶ್ರೇಷ್ಠ ಸಂವಿಧಾನ ತಿರುಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಇದರ ಬಗ್ಗೆ ಎಚ್ಚೆತ್ತುಕೊಂಡು ಸಂವಿಧಾನ ಜಾಗೃತಿ ನಡೆಸಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಭಾರಿ ಅಪಾಯ ಎದುರಿಸಬೇಕಾಗುತ್ತದೆʼ ಎಂದರು.

ʼಸ್ವಾಭಿಮಾನ ಹೋರಾಟದಿಂದ ಮಾತ್ರ ಸಾಮಾಜಿಕ ಸಮಸ್ಯೆಗಳು ಬದಲಿಸಲು ಸಾಧ್ಯವಿದೆ. ಕೆಲವರು ಸಂವಿಧಾನ ತಿರುಚುವ ಹುನ್ನಾರ ನಡೆಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ, ಆದರೆ ಅದು ಎಂದಿಗೂ ಅಸಾಧ್ಯವಾದದ್ದು. ಅಲ್ಪಸಂಖ್ಯಾತರ, ದಲಿತರ ಮೇಲೆ ನಿರಂತರ ದೌರ್ಜನ್ಯ, ಮಹಾತ್ಮರನ್ನು ಅನುಮಾನಿಸುವಂತಹ ಸಂವಿಧಾನ ವಿರೋಧಿ ಕೃತ್ಯಗಳ ವಿರುದ್ಧ ನಾವೆಲ್ಲರೂ ಧ್ವನಿಯೆತ್ತುವ ಮುಖಾಂತರ ಅವರನ್ನು ತಕ್ಕ ಪಾಠ ಕಲಿಸಬೇಕಾಗಿದೆʼ ಎಂದು ಕರೆ ನೀಡಿದರು.
ಚಿಂತಕ ಸೈಯದ್ ಮುಜೀಬ್ ಮಾತನಾಡಿ, ʼಕೆಲವರಿಗೆ ಈ ದೇಶದ ಸಂವಿಧಾನ ಮಗ್ಗಲು ಮುಳ್ಳಾಗಿದೆ. ಅದಕ್ಕಾಗಿಯೇ ಪದೇ ಪದೇ ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡುತ್ತಾರೆ. ಮನುಷ್ಯ, ಮನುಷ್ಯರ ನಡುವೆ ಕಂದಕವೇರ್ಪಡಿಸುವ ಕೆಲಸವನ್ನು ನಿರಂತರ ನಡೆಯುತ್ತಿದೆ. ಇದರ ವಿರುದ್ಧ ಶೋಷಿತರು ಒಂದಾಗಿ ನಿಂತು ಸಂವಿಧಾನದ ಉಳಿವಿಗಾಗಿ ಚಳವಳಿ ರೂಪಿಸಬೇಕಿದೆʼ ಎಂದರು.
ಹೋರಾಟಗಾರ ರಾಹುಲ್ ಖಂದಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಔರಾದ್ ಮೀಸಲು ಕ್ಷೇತ್ರವಾದರೂ ಇಲ್ಲಿಯ ಬಹುಜನರು ಮೂಲ ಸೌಲಭ್ಯಕ್ಕಾಗಿ ನಿತ್ಯ ಹೋರಾಡಬೇಕಾದ ಪರಿಸ್ಥಿತಿ ಇದೆ. ಜನರಲ್ಲಿ ಸಂವಿಧಾನ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಬಹುಜನ ಜನಸಂಪರ್ಕ ಕಚೇರಿ ಮಾಡಲಿದೆʼ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಔರಾದ್ ತಹಸೀಲ್ದಾರ್ ಕಚೇರಿ ಎದುರಗಡೆ ಬಹುಜನ ಸಂಪರ್ಕ ಕಾರ್ಯಾಲಯವನ್ನು ಹಿರಿಯ ಮುಖಂಡ ವಿಜಯಕುಮಾರ್ ಕೌಡಾಳ, ನ್ಯಾಯವಾದಿ ಸೂರ್ಯಕಾಂತ ನಿಂಬಾಳಕರ್, ಸೋಪನರಾವ್ ಡೊಂಗರೆ ಮತ್ತಿತರರು ಚಾಲನೆ ನೀಡಿದರು.

ಸಮಾರಂಭದಲ್ಲಿ ಪ್ರಾಂಶುಪಾಲ ಮನ್ಮಥ್ ಡೋಳೆ, ಮುಖಂಡ ಶಿವಮೂರ್ತಿ ಸುಬಾನೆ, ಬಿಎಸ್ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೋಲೆ, ಬೀದರ್ ನಗರಸಭೆ ಸದಸ್ಯ ಸೂರ್ಯಕಾಂತ ಸಾದುರೆ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಅಂಬ್ರೀಶ್ ಕುದುರೆ, ರಾಜಕುಮಾರ ಸಿಂಧೆ ಪ್ರಮುಖರಾದ ಫಿರ್ದೋಸ್ ಪಟೇಲ್, ಗಣಪತರಾವ ವಾಸುದೇವ, ಸುಭಾಷ ಲಾಧಾ, ಸಚಿನ ಗಿರಿ, ಪ್ರವೀಣ ಕಾರಂಜೆ, ಯಶವಂತ ಕಾಂಬಳೆ, ಸಿದ್ಧಾರ್ಥ ಭೋಸ್ಲೆ, ಸುಂದರ ಮೇತ್ರೆ, ಅನೀಲ ಭುಜಂಗೆ, ಅಖಿಲೇಶ ಸಾಗರ್, ಸಂತೋಷ ಸಿಂಧೆ, ಉತ್ತಮ ಗಾಯಕವಾಡ, ಪಂಡರಿ ಕಸ್ತೂರೆ, ಸಿದ್ದಾರ್ಥ ಕಾಂಬಳೆ, ಸುಂದರ ಮೇತ್ರೆ, ಪ್ರಕಾಶ ಅಲ್ಲಾಪುರೆ, ಬಸವರಾಜ ಕಾಂಬಳೆ, ತುಕಾರಾಮ ಹಸನ್ಮುಖಿ, ನವನಾಥ ಮಸೂರೆ, ನಜೀರ್ ಮೇಸ್ತ್ರಿ, ದಿನೇಶ ಸಿಂಧೆ ಸೇರಿದಂತೆ ವಿವಿಧ ಸಂಘಟನೆ, ಸಾಮಾಜಿಕ ಚಿಂತಕರು ಭಾಗವಹಿಸಿದ್ದರು.