ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಝೇಷನ್ ದೇಶದಲ್ಲಿ ಶೇ 24 ರಷ್ಟು ಇರುವ ಅರಣ್ಯ ಪ್ರದೇಶವನ್ನು ಶೇ 33 ಕ್ಕೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ. ಸಂಘಟನೆಯಿಂದ ಜೂನ್ 25 ರಿಂದ ಆರಂಭಿಸಲಾದ ದೇಶದಾದ್ಯಂತ 10 ಲಕ್ಷ ಸಸಿ ನೆಡುವ ಅಭಿಯಾನ ಜುಲೈ 25ಕ್ಕೆ ಮುಕ್ತಾಯಗೊಳ್ಳಲಿದೆʼ ಎಂದು ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಝೇಷನ್ ಸಂಚಾಲಕಿ ಅನ್ವರಿ ಬೇಗಂ ಹೇಳಿದರು.
ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ಘಟಕ ಹಾಗೂ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಝೇಷನ್ ವತಿಯಿಂದ ನಗರದ ಡೀಸೆಂಟ್ ಫಂಕ್ಷನ್ ಹಾಲ್ನಲ್ಲಿ ಈಚೆಗೆ ಆಯೋಜಿಸಿದ್ದ ಸಸಿ ನೆಡುವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ʼಮಣ್ಣಿನಲ್ಲಿ ಕೈಗಳು- ತಾಯ್ನಾಡಿನೊಂದಿಗೆ ಹೃದಯ’ ಅಭಿಯಾನದ ಘೋಷವಾಕ್ಯವಾಗಿದೆ. ಹೊಸ ಪೀಳಿಗೆಗೆ ತಾಯ್ನಾಡು ಹಾಗೂ ಮಣ್ಣಿನ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಲು ಪ್ರೇರಣೆ ನೀಡುವುದು ಈ ಘೋಷವಾಕ್ಯದ ಉದ್ದೇಶವಾಗಿದೆ ಎಂದು ಸಂಚಾಲಕ ಡಾ. ಇರ್ಷಾದ್ ನವೀದ್ ಹೇಳಿದರು.
ಮಕ್ಕಳಾದ ಶೇಕ್ ರಾಯನ್ ಅಹಮ್ಮದ್, ಸೈಯದ್ ಆರೀಬ್ ರೆಜಾ, ಸೈಯದ್ ಮುಂಜಾ ಅನಮ್, ಮೆಹ್ರೂಜ್ ಅಫಿಯಾ ಅರುಷ್, ಅರೀಬಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ವತಿಯಿಂದ 200 ಮಾವು, ಪೇರಲ್, ನೇರಳೆ ಹಾಗೂ ಕರಿಬೇವು ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಇದಕ್ಕೂ ಮುನ್ನ ಮಕ್ಕಳಿಂದ ನೂರ್ಖಾನ್ ತಾಲೀಂನಿಂದ ಚೌಬಾರಾ, ಮಹಮೂದ್ ಗವಾನ್ ಮದರಸಾ, ಕೋಟೆ ಮಾರ್ಗವಾಗಿ ಫಂಕ್ಷನ್ ಹಾಲ್ವರೆಗೆ ಪರಿಸರ ಜಾಗೃತಿ ಮೆರವಣಿಗೆ ನಡೆಯಿತು.
ಇದನ್ನೂ ಓದಿ : ಬೀದರ್ | ಮನೆ ಮಹಡಿ ಮೇಲೆ ‘ಡ್ರ್ಯಾಗನ್ ಫ್ರೂಟ್’ ಬೆಳೆದ ಉಪನ್ಯಾಸಕ!
ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ಅಧ್ಯಕ್ಷ ಮಹಮ್ಮದ್ ಮೊಅಜಂ, ಉಪಾಧ್ಯಕ್ಷ ಮಹಮ್ಮದ್ ಆರಿಫುದ್ದೀನ್, ಮಹಿಳಾ ವಿಭಾಗದ ಸಂಚಾಲಕಿ ಆಸ್ಮಾ ಸುಲ್ತಾನಾ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ವಿಜ್ಡಂ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಮಹ್ಮದ್ ಆಸಿಫುದ್ದೀನ್, ಮೌಲಾನಾ ಮೋನಿಸ್ ಕಿರ್ಮಾನಿ, ಮುಹಮ್ಮದ್ ಸಿರಾಜ್ ನೆಲವಾಡ, ಜಮಾ ಅತೆ ಇಸ್ಲಾಮಿ ಹಿಂದ್ ಸಹಾಯಕ ಮಾಧ್ಯಮ ಉಸ್ತುವಾರಿ ಸೈಯದ್ ಅತಿಕುಲ್ಲಾ ಇದ್ದರು. ವಿದ್ಯಾರ್ಥಿನಿ ಎ. ರೆಹಾನ್ ಕುರಾನ್ ಪಠಣ ಮಾಡಿದರು. ಅನ್ವರಿ ಬೇಗಂ ವಂದಿಸಿದರು.