ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕಮಲನಗರದಲ್ಲಿ ಇರುವ ಸರ್ಕಾರಿ ಮಾಧ್ಯಮಿಕ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯನ್ನಾಗಿ ಉನ್ನತೀಕರಿಸಿದ್ದು, ಪ್ರಸಕ್ತ ವರ್ಷದಿಂದಲೇ ಕಾರ್ಯಾರಂಭವಾಗಲಿದೆ ಎಂದು ಮಾಜಿ ಸಚಿವ, ಔರಾದ(ಬಿ) ಶಾಸಕ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ
ʼಹೊಸ ತಾಲ್ಲೂಕು ಕೇಂದ್ರವಾಗಿರುವ ಕಮಲನಗರದಲ್ಲಿ ಪ್ರೌಢ ಶಾಲೆಯ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ವಿದ್ಯಭ್ಯಾಸಕ್ಕಾಗಿ ಖಾಸಗಿ ಶಾಲೆಗಳು ಅಥವಾ ಅನ್ಯ ಪ್ರದೇಶಗಳಿಗೆ ಹೋಗಬೇಕಾದ ಪರಿಸ್ಥಿತಿಯಿತ್ತು. ಈ ಬಗ್ಗೆ ಸರ್ಕಾರಕ್ಕೆ ಹತ್ತಾರು ಪತ್ರಗಳನ್ನು ಬರೆದಿದ್ದೆ. ಶಿಕ್ಷಣ ಸಚಿವರನ್ನು, ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರನ್ನು ಕೂಡ ಸಾಕಷ್ಟು ಸಲ ಭೇಟಿ ಮಾಡಿ ಕಮಲನಗರದಲ್ಲಿ ಪ್ರೌಢ ಶಾಲೆ ಆರಂಭಿಸುವ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ. ನನ್ನ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಮಾಧ್ಯಮಿಕ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಸರ್ಕಾರ ಆದೇಶ ಹೊರಡಿಸಿದೆʼ ಎಂದು ಹೇಳಿದ್ದಾರೆ.
ʼಖಾಸಗಿ ಶಾಲೆಯನ್ನು ಅವಲಂಬಿಸಿದ್ದ ಇಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯಲ್ಲಿ ಓದುವ ಅವಕಾಶ ಸಿಗಲಿದೆ. ಇನ್ಮುಂದೆ ಬಡ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣಕ್ಕಾಗಿ ಅನ್ಯ ಪ್ರದೇಶಗಳಿಗೆ ಅಲೆದಾಡುವುದು ತಪ್ಪಲಿದೆ. ಪ್ರಸಕ್ತ ಜೂನ್ನಿಂದಲೇ ಪ್ರೌಢ ಶಾಲೆಗೆ ಚಾಲನೆ ನೀಡಲಾಗುತ್ತದೆ. ತಾಲ್ಲೂಕಿನ ಜನರು ತಮ್ಮ ಮಕ್ಕಳನ್ನು ಸರ್ಕಾರಿ ಪ್ರೌಢ ಶಾಲೆಗೆ ದಾಖಲಿಸಬೇಕುʼ ಎಂದು ಶಾಸಕರು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಗಡಿ ಭಾಗದ ಕಮಲನಗರ ತಾಲೂಕು ಕೆಂದ್ರದಲ್ಲೇ ಇಲ್ಲ ʼಸರ್ಕಾರಿ ಪ್ರೌಢ ಶಾಲೆʼ
ಕಮಲನಗರದಲ್ಲಿ ಸರ್ಕಾರಿ ಪ್ರೌಢ ಶಾಲೆ ಅವಶ್ಯಕತೆ ಕುರಿತು 2023ರ ನವೆಂಬರ್ 23ರಂದು ʼಈದಿನ.ಕಾಮ್ʼ ನಲ್ಲಿ ವಿಶೇಷ ವರದಿ ಪ್ರಕಟಿಸಿ ಬೆಳಕು ಚೆಲ್ಲಿತು.