ಯುವ ಸಮೂಹದಲ್ಲಿ ಜಡ ಮನಸ್ಥಿತಿ ಬದಲಾಗಿ ನಮ್ಮ ಅಭಿವೃದ್ಧಿ ನಮ್ಮ ಕೈಯಲ್ಲಿ ಎಂಬ ಧ್ಯೇಯ ಉಸಿರಾಗಿಸಿಕೊಂಡಾಗ ಮಾತ್ರ ಕಲ್ಯಾಣ ಕರ್ನಾಟಕ ಪ್ರಗತಿಯತ್ತ ಸಾಗಲಿದೆ ಎಂದು ನಿವೃತ್ತ ಶಿಕ್ಷಕ ನಾಗನಾಥ ಚಿಟಮೆ ನುಡಿದರು.
ಔರಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಚಿಂತನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼಪ್ರಪಂಚದಲ್ಲಿ ಉತ್ಕೃಷ್ಟವಾದ ಸಂಪತ್ತೆಂದರೆ ಅದು ಮಾನವ ಸಂಪತ್ತು. ಬಸವಾದಿ ಶರಣರು, ಪಂಪ, ಪೊನ್ನ, ರನ್ನ, ನೃಪತುಂಗ ಆದಿಯಾಗಿ ಬಾಳಿ ಬೆಳಗಿದ ಭವ್ಯ ನಾಡು ಕಲ್ಯಾಣ ನಾಡಾಗಿದೆ. ಗುಣಾತ್ಮಕ ಶಿಕ್ಷಣದ ಜೊತೆ ಜೊತೆಗೆ ಮಾನವ ಸಂಪನ್ಮೂಲ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. ಪ್ರಜ್ಞಾವಂತಿಕೆಯ ಮುತ್ಸದ್ದಿ ಕೊರತೆಯಿಂದ ಹಲವು ವರ್ಷಗಳವರೆಗೆ ಕಲ್ಯಾಣ ಕರ್ನಾಟಕ ಭಾಗ ನಿರ್ಲಕ್ಷ್ಯಕ್ಕೆ ಒಳಪಟ್ಟಿತ್ತುʼ ಎಂದರು.
ʼಮಾಜಿ ಮುಖ್ಯಮಂತ್ರಿಗಳಾದ ವಿರೇಂದ್ರ ಪಾಟೀಲ್, ಧರಂ ಸಿಂಗ್, ಬಿ.ಎಸ್.ಯಡಿಯೂರಪ್ಪ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೋರಾಟಗಾರ ಡಾ.ವೈಜಿನಾಥ ಪಾಟೀಲ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಈ ಭಾಗದ ಏಳಿಗಾಗಿ ಶ್ರಮಿಸಿರುವ ಬಗ್ಗೆ ಸ್ಮರಿಸಿದ ಅವರು, 371 (ಜೆ) ಮೀಸಲಾತಿ ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆʼ ಎಂದರು.
ಎನ್ಪಿಎಸ್ ನೌಕರ ಸಂಘದ ಅಧ್ಯಕ್ಷ ಮಹಾದೇವ ಚಿಟಗೀರೆ ಮಾತನಾಡಿ, ʼಹೈದ್ರಾಬಾದ್ ಕರ್ನಾಟಕ ವಿಮೋಚನೆಯ ಚರಿತ್ರೆ ಮೇಲೆ ಬೆಳಕು ಚೆಲ್ಲಿದ ಅವರು, ಸರ್ದಾರ ವಲ್ಲಭಭಾಯಿ ಪಟೇಲ್, ಡಾ.ಅಂಬೇಡ್ಕರ್, ಸ್ವಾಮಿ ರಾಮಾನಂದ ತೀರ್ಥ, ರಾಮಚಂದ್ರ ವೀರಪ್ಪ ಅವರ ಕೊಡುಗೆಗಳು ಸ್ಮರಿಸಿದರು. ರಾಜಕೀಯ ಇಚ್ಛಾಶಕ್ತಿ ಹಾಗೂ ಪ್ರಾಕೃತಿಕ ಅವಕಾಶಗಳ ಸದ್ಬಳಕೆಯಿಂದ ಮಾತ್ರ ಪ್ರಗತಿ ಸಾಧಿಸಲು ಸಾಧ್ಯʼ ಎಂದು ನುಡಿದರು.
ಪ್ರಾಚಾರ್ಯೆ ಅಂಬಿಕಾ ಕೊತ್ಮಿರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಬಾದಾಸ ನಳಗೆ ಮಾತನಾಡಿದರು. ಕಸಾಪ ಅಧ್ಯಕ್ಷ ಬಿ.ಎಂ.ಅಮರವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಜಗನ್ನಾಥ ದೇಶಮುಖ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಇದನ್ನೂ ಓದಿ : Breaking News | ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು!
ಕಾರ್ಯಕ್ರಮದಲ್ಲಿ ಕಸಾಪ ಹಿರಿಯ ಸದಸ್ಯ ಧನರಾಜ ಮಾನೆ, ಮಾಧ್ಯಮ ಪ್ರತಿನಿಧಿ ಅಮರಸ್ವಾಮಿ ಸ್ಥಾವರಮಠ, ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ್, ಪ್ರಾಧ್ಯಾಪಕ ವಿನಾಯಕ ಕೊತ್ಮಿರ್, ಗುಡದಮ್ಮ, ಪದ್ಮಾಂಜಲಿ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು