ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಹಿರಿತನ ಹಾಗೂ ಮಾನವೀಯತೆ ದೃಷ್ಟಿಯಿಂದ ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಜಿಲ್ಲಾ ಘಟಕದಿಂದ ಸೋಮವಾರ ಅಂಬೇಡ್ಕರ್ ವೃತ್ತ ಸಮೀಪದ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಈ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರಿಗೆ ಸಲ್ಲಿಸಿದರು.
ರಾಜ್ಯದ 432 ಸರ್ಕಾರಿ ಪದವಿ ಕಾಲೇಜುಗಳಲ್ಲಿ 11 ಸಾವಿರ ಅತಿಥಿ ಉಪನ್ಯಾಸಕರು ಕಳೆದ ಒಂದು ದಶಕದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ 5,623 ಉಪನ್ಯಾಸಕರು ಯುಜಿಸಿ ಅರ್ಹತೆ ಹೊಂದಿದ್ದರೆ, 5,353 ಉಪನ್ಯಾಸಕರ ಯುಜಿಸಿ ಅರ್ಹತೆ ಇಲ್ಲ. ಯುಜಿಸಿ ಅರ್ಹತೆ ಇಲ್ಲದ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ತೆಗೆಯಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ ತೆಗೆದುಕೊಂಡರೆ ಉಪನ್ಯಾಸಕರ ಬದುಕು ಬೀದಿಗೆ ಬರುತ್ತದೆ ಎಂದು ಪ್ರತಿಭಟನಾ ನಿರತರು ಹೇಳಿದರು.
ಹತ್ತಾರು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಸದ್ಯ ಅನ್ಯಾಯವಾಗಿದ್ದು. ಯುಜಿಸಿ ವಿದ್ಯಾರ್ಹತೆ, ಸೇವಾ ಹಿರಿತನ, ಮಾನವೀಯತೆಯಿಂದ ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕುʼ ಎಂದು ಉಪನ್ಯಾಸಕರು ಆಗ್ರಹಿಸಿದರು.

ʼಯುಜಿಸಿ ಅರ್ಹತೆ ಪಡೆದಿಲ್ಲಎಂಬ ಕಾರಣಕ್ಕೆ ಯಾವುದೆ ಸವಲತ್ತುಗಳನ್ನು ಪಡೆಯದೆ ಅತಿಥಿ ಉಪನ್ಯಾಸಕರು ತಾತ್ಕಾಲಿಕ ನೌಕರರಾಗಿ ಮುಂದುವರಿದಿದ್ದಾರೆ. ಶೈಕ್ಷಣಿಕ ವರ್ಷಗಳಲ್ಲಿ ಕೇವಲ 10 ತಿಂಗಳಿಗೆ ಮಾತ್ರ ಕನಿಷ್ಠ ಗೌರವಧನ ನೀಡಲಾಗುತ್ತಿದೆ. ನ್ಯಾಯಾಲಯ ಒಬ್ಬ ತಾತ್ಕಾಲಿಕ ನೌಕರನ ಸ್ಥಾನಕ್ಕೆ ಮತ್ತೊಬ್ಬ ತಾತ್ಕಾಲಿಕ ನೌಕರನನ್ನು ಸ್ಥಳಾಂತರಿಸಲು ಅವಕಾಶ ಇಲ್ಲಎಂದು ತೀರ್ಪು ನೀಡಿದೆ. ಅತಿಥಿ ಉಪನ್ಯಾಸಕರು ತಮ್ಮನ್ನು ಸೇವೆಯಿಂದ ತೆರವು ಮಾಡದಂತೆ ತಡೆಯಾಜ್ಞೆ ತಂದಿದ್ದಾರೆʼ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸರಕಾರಿ ಪದವಿ ಕಾಲೇಜುಗಳು ಶೇ 70 ರಷ್ಟು ಅತಿಥಿ ಉಪನ್ಯಾಸಕರ ಸೇವೆ ಅವಲಂಬಿಸಿವೆ. ಹೀಗಾಗಿ ಕಳೆದ ಒಂದು ತಿಂಗಳಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಯದೆ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಇನ್ನು ವೃತ್ತಿ ಮೇಲೆ ಅವಲಂಬಿತರಾದ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಸರಕಾರ 2025-26ನೇ ಸಾಲಿನ ನೇಮಕಾತಿ ಬಿಕ್ಕಟ್ಟನ್ನು ತಾರತಮ್ಯ ಮಾಡದೆ ಪರಿಹರಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ : ಮಾಜಿ ಶಾಸಕ ಗುಂಡಪ್ಪ ವಕೀಲ್ ಡಿಜಿಟಲ್ ಅರೆಸ್ಟ್, 30 ಲಕ್ಷ ರೂ. ದೋಚಿದ ಆನ್ಲೈನ್ ವಂಚಕರು
ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಕಾಂತ ನಾರಾಯಣಪುರೆ ಸೇರಿದಂತೆ ಸಂಘಟನೆಯ ಪ್ರಮುಖರಾದ ಬಂಡೆಪಾ ಬಾಲಕುಂದೆ, ಏಕನಾಥ, ಮಲ್ಲಿಕಾರ್ಜುನ ತಿರಲಾಪುರೆ, ಜಾವೀದ್, ಶಾಮಸುಂದರ, ಬಾಬು, ಅರುಣ್, ಗಂಗಾಧರ, ಪ್ರಾಣೇಶ್, ಲಕ್ಷ್ಮಣ ಸಾವಳೆ, ದೇವರಾಜ , ಲಕ್ಷ್ಮಣ ಟೋಕರೆ, ಮಲ್ಲಿಕಾರ್ಜುನ ಬಿರಾದರ, ವಿಶ್ವನಾಥ, ಮಿಲಿಂದ್, ಕೀರ್ತಿ, ಅಂಬಿಕಾ, ಪ್ರಮೀಳಾ, ಈಶ್ವರಿ, ಅಶ್ವಿನಿ ಮತ್ತಿತರರು ಇದ್ದರು.