ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮನೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ನಮ್ಮ ಹಳ್ಳಿಕಾರ ಬಂಧುಗಳು ತಪ್ಪದೇ “ಹಳ್ಳಿಕಾರ” ಎಂದು ಮಾತ್ರ ನಮೂದಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಹಳ್ಳಿಕಾರ ಯುವಕರ ಸಂಘದ ಅಧ್ಯಕ್ಷರಾದ ಕೋಟೆ ಸೋಮಣ್ಣ ಮನವಿ ಮಾಡಿದರು.
ಭವಿಷ್ಯದಲ್ಲಿ ಸಮುದಾಯವು ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀವಾಗಿ ಮತ್ತು ಆರ್ಥಿಕವಾಗಿ ಸಮಾನ ಅವಕಾಶವನ್ನು ಗಳಿಸಿಕೊಳ್ಳುವ ಹಾದಿಯಲ್ಲಿ ಒದಗಿ ಬಂದಿರುವ ಮಹತ್ವದ ಅವಕಾಶವಾಗಿದೆ. ನಮ್ಮ ಹಕ್ಕುಗಳು ಅರ್ಹತೆಗಳು ಕಲ್ಯಾಣ ಯೋಜನೆಗಳು ನಮ್ಮ ಸಮುದಾಯಕ್ಕೆ ನ್ಯಾಯಯುತವಾಗಿ ಸಲ್ಲ ಬೇಕಾಗಿರುವ ಸಂವಿಧಾನದತ್ತ ಅನುಕೂಲತೆಗಳು ಹಾಗೂ ನೈಜ ಪ್ರಾತಿನಿಧಿತ್ವ ನಿರ್ಧಾರವಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಈ ಜಾತಿ ಜನಗಣತಿಯಲ್ಲಿ ತಪ್ಪದೆ ಭಾಗವಹಿಸಬೇಕಾಗಿದೆ.
ನಾವು ಯದುವಂಶದವರು, ಕುಲಪುರುಷ ಶ್ರೀ ಕೃಷ್ಣ ಪರಮಾತ್ಮನ ಆರಾಧಕರು. ನಮ್ಮ ಕುಲಕಸುಬು ಪಶುಸಂಗೋಪನೆ, ಹಳ್ಳಿಕಾರ್ ತಳಿ ರಾಸುಗಳ ಅಭಿವೃದ್ಧಿ, ಸಂರಕ್ಷಣೆ ಮತ್ತು ಅವುಗಳ ಸಾಕಾಣಿಕೆಯಲ್ಲಿ ಪರಿಣಿತಿ ಪಡೆದಿರುವುದು ಹಳ್ಳಿಕಾರ ಸಮುದಾಯದ ಹೆಮ್ಮೆ. ಹಳ್ಳಿಕಾರರು ಗೋವಳರು, ಗೋಪಾಲರು, ಇದು ನಮ್ಮ ಗುರುತು. ನಮ್ಮ ಹಕ್ಕು, ಮೀಸಲಾತಿ, ಸರ್ಕಾರದ ಸೌಲಭ್ಯಗಳು ಎಲ್ಲವೂ ಜನಗಣತಿಯಲ್ಲೇ ನಿರ್ಧಾರವಾಗಲಿದೆ. ಇದ್ದ ಜಮೀನುಗಳು ಹಂಚಿ ಹೋಗಿ ಸಮುದಾಯದ ಯುವ ಪೀಳಿಗೆ ಹಲವು ದಶಕಗಳಿಂದ ಅರೆನಗರ, ನಗರ ಪ್ರದೇಶಗಳಲ್ಲಿ ವಲಸೆ ಹೋಗಿ ಕೈಗೆ ಸಿಕ್ಕ ಕೆಲಸಗಳನ್ನು ನಿರ್ವಹಿಸಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದು ಅರ್ಹತೆ ಇದ್ದರೂ ಈವರಿಗೆ ನಾನಾ ಕಾರಣಗಳಿಂದ ಮೀಸಲಾತಿಯ ಸೌಲಭ್ಯ ಹಾಗೂ ಸರ್ಕಾರದ ಸೌಲತ್ತುಗಳನ್ನು ಪಡೆಯಲಾಗಲಿಲ್ಲ.
ನಮ್ಮ ಸಮುದಾಯದ ನಿಕರಾ ಜನಸಂಖ್ಯೆ ಸರ್ಕಾರದ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಾಗುತ್ತದೆ. ನಮ್ಮ ಸಮುದಾಯದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸರ್ಕಾರದ ಗಮನಕ್ಕೆ ಬರುತ್ತದೆ. ನಮಗೆ ಸಿಗಬೇಕಾದ ಹಕ್ಕುಗಳು, ರಾಜಕೀಯ ಪ್ರಾತಿನಿಧ್ಯ, ಸರ್ಕಾರಿ ಸೌಲಭ್ಯ ಮತ್ತು ಸಮುದಾಯಪರ ಯೋಜನೆಗಳ ಅನುಷ್ಠಾನಗಳಲ್ಲಿ ಹಳ್ಳಿಕಾರ ಸಮುದಾಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಿರುವ ಪಾಲು ನಾವು ನೀಡುವ ನಿಖರ ಮಾಹಿತಿಯನ್ನೇ ಅವಲಂಬಿಸಿರುತ್ತದೆ. ಹಳ್ಳಿಕಾರರ ಆಚಾರ ವಿಚಾರ, ಸಂಸ್ಕೃತಿ ಮತ್ತು ಪರಂಪರೆಯು ಸಮಾಜದ ಎಲ್ಲ ಸ್ತರಗಳಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ ಎಂಬುದನ್ನು ಸರ್ಕಾರಕ್ಕೆ ಮನದಟ್ಟಾಗುವಂತೆ ಕಾತರಿಪಡಿಸಬೇಕಿದೆ ಎಂದು ಹಳ್ಳಿಕಾರ ಗ್ರಾಮದ ಮುಖಂಡರು ಮಾತಾಡಿದರು.