ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಯರಕೋಟೆ ಗ್ರಾಮದ ಅಭಿವೃದ್ಧಿಗೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಿಂದ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಯರಕೋಟೆ ಗ್ರಾಮದಿಂದ ಬೆಂಗಳೂರು ಫ್ರೀಡಂ ಪಾರ್ಕ್ವರೆಗೆ ಪಾದಯಾತ್ರೆ ಆರಂಭಿಸಲಾಗಿದೆ.
ಯರಕೋಟೆ ಗ್ರಾಮದ ಮಂಜುನಾಥ್ ವೈ ಎನ್ ಎಂಬುವರು ತಮ್ಮ ಗ್ರಾಮದಿಂದ ಬೆಂಗಳೂರಿಗೆ ಪಾದಯಾತ್ರೆ ಬೆಳೆಸಿದ್ದಾರೆ. ಇಂದು ಗ್ರಾಮದ ಶ್ರೀ ಗಂಗಮ್ಮ ದೇವಸ್ಥಾನದಿಂದ ನಾಲ್ಕು ದಿನಗಳ ಕಾಲ್ನಡಿಗೆ ಜನಜಾಥಾ ಮತ್ತು ರಥಯಾತ್ರೆ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಯರಕೋಟೆ ಗ್ರಾಮದ ಬಗ್ಗೆ ಹಿರಿಯರಾದ ನೀರಗಂಟಿ ಚಿಂತಪ್ಪನವರು ಹೇಳಿದ ಕಥೆಗಳಿಂದ ಪ್ರೇರಿತಗೊಂಡು 32 ವರ್ಷಗಳ ಕಾಲ ಒಂದು ಗ್ರಾಮದ ಅಭಿವೃದ್ಧಿಯ ಬಗ್ಗೆ ಅಧ್ಯಯನ ಮಾಡಿ 156 ಗ್ರಾಮಗಳಿಗೆ ಸಂಚಾರ ಮಾಡಿದ್ದೇನೆ. ಯಾವುದೇ ರಾಜಕೀಯ ಅಧಿಕಾರವಿಲ್ಲದೇ ಸತತವಾಗಿ 32 ವರ್ಷಗಳಿಂದ ಯರಕೋಟೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಇದನ್ನು ಮುಂದುವರೆಸಲು ಸರ್ಕಾರಗಳು ಸಹಕಾರ ನೀಡಬೇಕು”
ಸಾಕಷ್ಟು ಕಾರ್ಯಕ್ರಮಗಳ ಅನುಭವದಿಂದ 50 ವರ್ಷಗಳಲ್ಲಿ ಕಾಣದೇ ಇರುವ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ಕೇವಲ 5 ವರ್ಷಗಳಲ್ಲಿ ಮಾಡಲು ಸಿದ್ಧನಿದ್ದೇನೆ. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯಕ್ಕೆ ಮಾದರಿಯಾಗಿ ಅಭಿವೃದ್ಧಿ ಮಾಡಲು ಒತ್ತಾಯಿಸಿ ಈಗಾಗಲೇ 2014 ರಿಂದ 2025 ರವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಲವಾರು ಮನವಿ ಪತ್ರಗಳನ್ನು ನೀಡಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಯರಕೋಟೆ ಗಂಗಮ್ಮ ದೇವಸ್ಥಾನಕ್ಕೆ ಇಡೀ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಿಂದ ಸಾವಿರಾರು ಭಕ್ತಾಧಿಗಳಿಗೆ ಭೇಟಿ ನೀಡುತ್ತಾರೆ. ಇದಕ್ಕಾಗಿ ಯರಕೋಟೆ ಗ್ರಾಮದ ಅಭಿವೃದ್ಧಿಗೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸರ್ಕಾರಿ ನೌಕರರು ತಮ್ಮ ಹುದ್ದೆಯ ಪಾವಿತ್ರ್ಯತೆಯನ್ನು ಕಾಪಾಡಬೇಕು: ಷಡಕ್ಷರಿ
ಯರಕೋಟೆ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆ ಪ್ರಾರಂಭವಾದಾಗಿನಿಂದ ಲಕ್ಷಾಂತರ ಹಣ ಲೂಟಿಯಾಗುತ್ತಿದ್ದು, ಇದರ ಸಂಪೂರ್ಣ ತನಿಖೆಯಾಗಬೇಕು. ಗ್ರಾಮಸ್ಥರು ವಲಸೆ ಹೋಗುವುದನ್ನು ತಡೆಗಟ್ಟಿ, ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ಮಾಡಿಕೊಡಬೇಕು. ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮವಾಗಿ ಬಿಲ್ಲುಗಳನ್ನು ಮಾಡುತ್ತಿದ್ದಾರೆ. ಇದನ್ನು ಪರಿಶೀಲಿಸಿ ಕೂಡಲೇ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಕೆಲಸದಿಂದ ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.