ಮಂಗಳೂರು ವಿಧಾನ ಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಮತ್ತು ಹೊಂಡ ಗುಂಡಿಗಳನ್ನು ಮುಚ್ಚಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ರೂ.90 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತೊಕ್ಕೊಟ್ಟು, ಮುಡಿಪು, ಅಬ್ಬಕ್ಕ, ಕೋಟೆಪುರ ಕೋಡಿ, ದೇರಳಕ್ಕಟ್ಟೆ ಅಸೈಗೋಲಿ, ಮುಷ್ಕರ ಕಟ್ಟೆ ರಸ್ತೆಗಳು ಸೇರಿದಂತೆ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.
ರಸ್ತೆಗಳಲ್ಲಿ ಬಿದ್ದಿರುವ ಹೊಂಡ ಗುಂಡಿಗಳನ್ನು ಮುಚ್ಚಿಸುವ ಜವಾಬ್ದಾರಿ ಅಧಿಕಾರಿಗಳದೇ ಆಗಿರುತ್ತದೆ. ಒಂದು ವೇಳೆ ಸರಿಯಾದ ರೀತಿಯಲ್ಲಿ ಗುಂಡಿ ಮುಚ್ಚಿಸದೆ ಅನಾಹುತ ಸಂಭವಿಸಿದರೆ ಅದಕ್ಕೆ ಇಂಜಿನಿಯರ್ಗಳೇ ನೇರ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. ರಸ್ತೆಗಳ ಅಭಿವೃದ್ಧಿ ಮತ್ತು ದುರಸ್ತಿ ಕಾರ್ಯವು ಮಳೆಗಾಲ ಮುಗಿದ ನಂತರ ಪ್ರಾರಂಭ ಮಾಡಲಾಗುವುದು ಎಂದರು.
ಇದನ್ನೂ ಓದಿ: ಸೌದಿ ಅರೇಬಿಯಾ | ಬಸ್ಗಳ ನಡುವೆ ಅಪಘಾತ: ಅನಿವಾಸಿ ಉದ್ಯೋಗಿ ಉಳ್ಳಾಲದ ಯುವಕ ಮೃತ್ಯು
ಕೆಂಪು ಕಲ್ಲು ಸಮಸ್ಯೆ
ಕ್ಯಾಬಿನೆಟ್ ಸಭೆಯಲ್ಲಿ ಜಿಲ್ಲೆಯಲ್ಲಿ ಆಗುತ್ತಿರುವ ಕೆಂಪು ಕಲ್ಲಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ. ಇನ್ನೂ ಮುಂದೆ ಜಿಲ್ಲೆಯ ಜನರಿಗೆ ಕೆಂಪು ಕಲ್ಲುಈ ಹಿಂದಿನ ದರಕ್ಕಿಂತ ಕಡಿಮೆ ದರಲ್ಲಿ ಸಿಗಲಿದೆ. ಹಿಂದೆ ಇದ್ದ ಕೆಲವು ಷರತ್ತುಗಳನ್ನು ಸರಳೀಕರಣಗೊಳಿಸಿ, ವ್ಯಾಪಾರಿಗಳು ಕೆಂಪು ಕಲ್ಲಿನ ವ್ಯಾಪಾರವನ್ನು ಯಾವುದೇ ಆತಂಕವಿಲ್ಲದೇ ಧೈರ್ಯದಿಂದ, ಸ್ವಾಭಿಮಾನದಿಂದ ಮಾಡಲು ಕೆಲವು ಮಾರ್ಪಾಡು ಮಾಡಲಾಗಿದೆ ಎಂದರು.
ಕ್ಯಾಬಿನೆಟ್ನಲ್ಲಿ ಅಧಿಕಾರಿಗಳು, ಶಾಸಕರು, ಕೆಂಪು ಕಲ್ಲಿನ ವ್ಯಾಪಾರಿಗಳು ಸೇರಿದಂತೆ ಹಲವರ ಜತೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ನಿರ್ಧಾರಿಸಲಾಗಿದೆ. ಕೆಂಪು ವ್ಯಾಪಾರಕ್ಕೆ ಅನುಮತಿಗಾಗಿ ಈಗಾಗಲೇ 53 ಜನರು ಅರ್ಜಿ ಸಲ್ಲಿಸಿದರೆ. ಇದರಲ್ಲಿ25 ಜನರಿಗೆ ಅವಕಾಶ ನೀಡಲಾಗಿದೆ. ಮುಂದಿನ ಹಂತದಲ್ಲಿ ಎಲ್ಲರಿಗೂ ಅವಕಾಶ ನೀಡಲಾಗುವುದು ಎಂದು ಖಾದರ್ ಹೇಳಿದರು.
ಕೆಂಪು ಕಲ್ಲು, ಮರಳು ಸಮಸ್ಯೆಗಳ ಕುರಿತು ಬಿಜೆಪಿ ನಡೆಸುವ ಪ್ರತಿಭಟನೆಯ ಬಗ್ಗೆ, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಂಪು ಕಲ್ಲಿನ ಸಮಸ್ಯೆ ಬಗೆಹರಿದಿದೆ. ಅದರೂ ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ಉತ್ತರ ನೀಡಲಿದೆ. ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ ಎಂದರು.
ಸೆ.22ರಿಂದ ರಾಜ್ಯದಲ್ಲಿ ಜಾತಿಗಣತಿ ಆರಂಭವಾಗಲಿದ್ದು, ಸಂಘ-ಸಂಸ್ಥೆಗಳು ಹಾಗೂ ಜನರು ಎಲ್ಲರೂ ಸಹಕರಿಸಬೇಕು. ಆಶಾ ಕಾರ್ಯಕರ್ತರು ನಿಮ್ಮ ನಿಮ್ಮಗೆ ಬಂದು ಜಾತಿಗಣತಿ ಫಾರಂ ನೀಡುತ್ತಾರೆ. ಅದನ್ನು ಓದಿಕೊಂಡು ಜಾತಿಗಣತಿ ವೇಳೆ ಸರಿಯಾದ ಉತ್ತರವನ್ನು ನೀಡಬೇಕು ಎಂದು ಸಲಹೆ ನೀಡಿದರು.
