ದಕ್ಷಿಣ ಕನ್ನಡ | ಉದ್ಯೋಗಕ್ಕಾಗಿ ಡಿವೈಎಫ್ಐ ಬೃಹತ್ ಹೋರಾಟ; ಸೆ.7ರಿಂದ ಯುವ ಜಾಗೃತಿ ಜಾಥಾ

Date:

Advertisements

ಯುವಜನರ ಪಾಲಿಗೆ ಕರಾಳವಾದ ನಿರುದ್ಯೋಗದ ಭೀಕರ ಸಮಸ್ಯೆಗೆ ಎದುರಾಗಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಯುವಜನರ ಬೃಹತ್ ಆಂದೋಲನವನ್ನು ಕೈಗೆತ್ತಿಕೊಂಡಿದೆ. ಇದರ ಭಾಗವಾಗಿ ಸೆಪ್ಟೆಂಬರ್‌ 7ರಿಂದ 9 ರವರೆಗೆ ಮೂರು ದಿನಗಳ ಕಾಲ ಯುವ ಜನರ ಜಾಥಾವನ್ನು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿ ಹೊರಡಿಸಿರುವ ಡಿವೈಎಫ್‌ಐ, ತುಳುನಾಡ್ ದ ಅಭಿವೃದ್ದಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲ ಪಾಲ್ ಎಂಬ ಘೋಷಣೆಯಡಿ ಉದ್ಯೋಗ ಸೃಷ್ಟಿ, ಸ್ಥಳೀಯರಿಗೆ ಆದ್ಯತೆ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳ ಜಾರಿ ಸೇರಿದಂತೆ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವ, ಜಿಲ್ಲೆಯ ವಿವಿಧ ಸರಕಾರಿ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿ, ಗುತ್ತಿಗೆ ಉದ್ಯೋಗಗಳನ್ನು ಕಡಿಮೆಗೊಳಿಸಿ ಖಾಯಂ ನೌಕರರ ನೇಮಕ ಮಾಡಿಕೊಳ್ಳಲು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡಿರುವ ಮೂರು ದಿನದ ಯುವಜನರ ಜಾಥಾವು ಜಿಲ್ಲೆಯಾದ್ಯಂತ ಸಂಚರಿಸಲಿದೆ.

ಜಾಥಾವು ಸೆಪ್ಟೆಂಬರ್ 7ರಂದು ಬೆಳ್ತಂಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆ ವೇಳೆ ಮುಖ್ಯ ಅತಿಥಿಯಾಗಿ ಖ್ಯಾತ ರಂಗಕರ್ಮಿ ಸತೀಶ್ ಶೆಟ್ಟಿ ಹಿರಿಯಡ್ಕ, ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಲವಿತ್ರ ವಸ್ತದ್ ಭಾವಹಿಸಲಿದ್ದಾರೆ. ಸೆಪ್ಟೆಂಬರ್ 9ರಂದು ಸಮಾರೋಪದ ವೇಳೆ ಪ್ರಮುಖ ಭಾಷಣಗಾರರಾಗಿ ಡಿವೈಎಫ್ಐ ಕೇಂದ್ರ ಸಮಿತಿ ಸದಸ್ಯರು, ಕೇರಳದ ಶಾಸಕರಾದ ಎಂ. ವಿಜಿನ್, ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಪ್ರೊ. ಫಣಿರಾಜ್ ಭಾಗವಹಿಸಲಿದ್ದಾರೆ. ಸಾರ್ವಜನಿಕ ಸಭೆಯ ಮುನ್ನ ಡಾ ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಯುವಜನರ ಬೃಹತ್ ಮೆರವಣೆಗೆ ನಡೆಯಲಿರುವುದು. ಜಿಲ್ಲೆಯ ಪ್ರಜ್ಞಾವಂತ ಯುವಜನರು ಒಂದಾಗಿ ಈ ಹೋರಾಟವನ್ನು ಬೆಂಬಲಿಸಬೇಕೆಂದು ಸಂಘಟನೆಯು ಮನವಿ ಮಾಡುತ್ತದೆ.

WhatsApp Image 2025 09 02 at 4.53.20 PM

ನಿರುದ್ಯೋಗದ ಸಮಸ್ಯೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಗರಿಷ್ಟ ಮಟ್ಟ ತಲುಪುತ್ತಿದೆ. ನವ ಉದಾರವಾದ ನೀತಿಗಳು ವೇಗ ಪಡೆಯುತ್ತಿದ್ದಂತೆ ನಿರುದ್ಯೋಗದ ದರವೂ ಹೊಸ ಎತ್ತರಕ್ಕೆ ಎರುತ್ತಿದೆ. ಪ್ರತೀ ಕುಟುಂಬದಲ್ಲೂ ಕನಿಷ್ಟ ಒಬ್ಬ ನಿರುದ್ಯೋಗಿ ಇದ್ದಾನೆ ಎನ್ನುವಷ್ಟು ನಿರುದ್ಯೋಗ ಇಂದು ಮನೆ ಮನೆ ಸಮಸ್ಯೆಯಾಗಿ ವ್ಯಾಪಕತೆ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಎಲ್ಲೆಡೆ ಹತಾಶ ನಿರುದ್ಯೋಗಿಗಳ ದಂಡೇ ಕಂಡು ಬರುತ್ತಿದೆ. ಇಲ್ಲಿರುವ ನೂರಾರೂ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹೊಂದಿ ಸರ್ಟಿಫಿಕೇಟ್ ಪಡೆದು ಹೊರಬರುತ್ತಿದ್ದರೂ ಅದಕ್ಕೆ ಅರ್ಹವಾದ ಶೇಕಡಾ 5ರಷ್ಟು ಉದ್ಯೋಗಗಳು ಅವಿಭಜಿತ ದ.ಕ ಜಿಲ್ಲೆಯಲ್ಲಿ ಸೃಷ್ಡಿಯಾಗುತ್ತಿಲ್ಲ. ಇಲ್ಲಿನ ವೃತ್ತಿಪರ ಶಿಕ್ಷಣ ಸಂಸ್ಥೆಗಳು ದುಬಾರಿ ದರ ಪಡೆದು ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗುತ್ತಿವೆ. ಕೇಂದ್ರ ಸರಕಾರ ವರುಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ಈಡೇರಿಸದೆ ಇರುವ ಉದ್ಯೋಗಳನ್ನು ಕಳೆದುಕೊಳ್ಳುವಂತಹ ತಪ್ಪಾದ ನೀತಿಗಳನ್ನು ಜಾರಿಗೊಳಿಸಿ ಇರುವ ಉದ್ಯೋಗಾವಕಾಶಗಳನ್ನು ನಾಶಪಡಿಸುತ್ತಿವೆ. ಕೇವಲ ಕರ್ನಾಟಕ ರಾಜ್ಯ ಸರಕಾರಿ ಇಲಾಖೆಗಳಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಭರ್ತಿ ಆಗದೆ ಖಾಲಿ ಬಿದ್ದಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಬೃಹತ್ ಕೈಗಾರಿಕೆಗಳು ಕಾರ್ಯಾಚರಿಸುತ್ತಿದ್ದರೂ ಉದ್ಯೋಗ ಸೃಷ್ಟಿಸುವಲ್ಲಿ ಅವುಗಳು ಹಿಂದೆ ಬಿದ್ದಿವೆ. ಇರುವ ಉದ್ಯೋಗಾವಕಾಶಗಳಲ್ಲಿ ಸ್ಥಳೀಯರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿಗಳೆಂಬ ಅರೆ ಸಂಬಳದ, ಉದ್ಯೋಗ ಭದ್ರತೆ ಇಲ್ಲದ ಆಧುನಿಕ ಜೀತ ಪದ್ಧತಿಗಳು ಜಿಲ್ಲೆಯ ಉದ್ಯಮಗಳಲ್ಲಿ ವಿಜೃಂಭಿಸುತ್ತಿವೆ. ಕರಾವಳಿಯ ಮತ್ಸ್ಯೋದ್ಯಮ, ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ರಬ್ಬರ್ ಕೃಷಿಗಳಿಂದ ಉದ್ಯೋಗ ಸೃಷ್ಟಿಯಾಗುವ ಉದ್ಯಮಗಳನ್ನು ಸ್ಥಾಪಿಸುವ ವ್ಯಾಪಕ ಅವಕಾಶಗಳು ಇದ್ದರೂ ಆ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು, ಸರಕಾರ ಆಲೋಚನೆಯನ್ನೆ ಮಾಡಿಲ್ಲ. ಸಮುದ್ರ, ನದಿಗಳು, ಅರಣ್ಯ ಹೀಗೆ ವಿಪುಲ ಅವಕಾಶಗಳನ್ನು ಬಳಸಿ ಉದ್ಯೋಗ ಸೃಷ್ಟಿಯ ಕಣ್ಣೋಟದ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗಿಲ್ಲ. ಅಲ್ಲದೆ ಓಬಿರಾಯನ ಕಾಲದಲ್ಲಿ ಮಂಜೂರಾದ ಸರಕಾರಿ ಹುದ್ದೆಗಳು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲೀ ಬಿದ್ದಿದ್ದರೂ ಅವುಗಳನ್ನೂ ಭರ್ತಿಗೆ ಕ್ರಮಕೈಗೊಳ್ಳುತ್ತಿಲ್ಲ.

ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹಲವು ಉದ್ಯಮಗಳು, ವ್ಯಾಪಾರೀ ಸಂಸ್ಥೆಗಳು, ಬೃಹತ್ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಮಾಲ್ ಗಳು ಇವೆ. ಬಂದರು, ವಿಮಾನ ನಿಲ್ದಾಣ ಸಹಿತ ಸಾರ್ವಜನಿಕ ವಲಯದ ಹಲವು ದೊಡ್ಡ ಕೈಗಾರಿಕೆಗಳು ಇಲ್ಲಿವೆ. ಸಾಕಷ್ಟು ವಿಶಾಲವಾದ ಬೈಕಂಪಾಡಿ, ಯೆಯ್ಯಾಡಿ, ಗಂಜಿಮಠ, ಮುಡಿಪು ಕೈಗಾರಿಕಾ ವಲಯವೂ ಇದೆ. ಇಷ್ಟೆಲ್ಲಾ ಇದ್ದರೂ ಸ್ಥಳೀಯ ಯುವಜನರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ, ಒದಗಿಸುವಲ್ಲಿ ಅವು ಸೋತಿವೆ. ಉತ್ತರ ಭಾರತದ ರಾಜ್ಯಗಳಿಂದ ಅಗ್ಗದ ಕಾರ್ಮಿಕರನ್ನು ಕರೆ ತಂದು ಜೀತದ ಮಾದರಿಯಲ್ಲಿ ದುಡಿಸಲಾಗುತ್ತಿದೆ. ಬ್ಯಾಂಕುಗಳು, ರೈಲ್ವೆಗಳಲ್ಲಿ ಚಿನ್ನದಂತಹ ಖಾಯಂ ಉದ್ಯೋಗಗಳು ಹೊರ ರಾಜ್ಯದವರಿಗಷ್ಟೆ ಮೀಸಲಾಗಿದೆ.

WhatsApp Image 2025 09 02 at 4.53.21 PM 1

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಬಿಜೆಪಿಯ ದ್ವಿಪಾತ್ರಾಭಿನಯಕ್ಕೆ ಆಸ್ಕರ್ ಕೊಟ್ಟರೂ ಕಡಿಮೆಯೇ: ಪ್ರಿಯಾಂಕ್‌ ಖರ್ಗೆ ಲೇವಡಿ

ಇತ್ತೀಚೆಗೆ ಎಮ್‌ಆರ್‌ಪಿಎಲ್‌, ಎಸ್ ಇ ಝಡ್ ನ ಉದ್ಯೋಗಗಳ ನೇಮಕಾತಿಯಲ್ಲಿ ಸ್ಥಳೀಯ ಯುವಜನರನ್ನು ಹೊರಗಿಡುವುದು, ವಿಮಾನ ನಿಲ್ದಾಣ ಅದಾನಿ ಗುಂಪಿನ ವಶವಾದ ತರುವಾಯ ಗುತ್ತಿಗೆ ನೌಕರರಾದ ಸ್ಥಳೀಯರನ್ನು ಹೊರಗಟ್ಟುತ್ತಿರುವುದು, ಹಾರ್ಬರ್ ನಲ್ಲಿ ಉದ್ಯೋಗವಕಾಶ, ಸ್ಥಳೀಯರ ಪಾಲು ಎರಡೂ ವೇಗವಾಗಿ ಇಳಿಕೆಯಾಗುತ್ತಿರುವುದು ಇದಕ್ಕೊಂದು ನಿದರ್ಶನ. ಆವಿಭಜಿತ ದ.ಕ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯ ಎಲ್ಲಾ ಅವಕಾಶಗಳು ಇದ್ದರೂ ಸರಕಾರಗಳ ತಪ್ಪಾದ ನೀತಿಯಿಂದ ನಿರುದ್ಯೋಗಿಗಳ ಕೇಂದ್ರವಾಗಿ ಗುರುತಿಸಲ್ಪಡುತ್ತಿದೆ. ಅವಾಸ್ತವವಾದ ವಲಸೆ ಯುವಜನರ ಬದುಕಿನ ಮಹತ್ವದ ವರ್ಷಗಳನ್ನು ಬಲಿ ಪಡೆಯುತ್ತಿದೆ. ದುಬಾರಿಯಾಗಿರುವ ಉತ್ತಮ ಶಿಕ್ಷಣ ಪಡೆದೂ ನಿರುದ್ಯೋಗಿಗಳಾಗಿ, ಅರೆ ಉದ್ಯೋಗಿಗಳಾಗಿ, ನಿಕೃಷ್ಟ ವೇತನ ಮಾತ್ರ ಪಡೆದು, ಉದ್ಯೋಗ ಭದ್ರತೆ ಇಲ್ಲದೆ ಯುವಜನರು ಅಸಹಾಯಕರಾಗುತ್ತಿದ್ದಾರೆ. ಈ ಎಲ್ಲಾ ಗಂಭೀರ ಸಮಸ್ಯೆಗಳ ಕುರಿತು ಯುವ ಜನತೆಯಲ್ಲಿ ಜಾಗೃತಿ ಮೂಡಿಸಲು ಹಾಗೂ ಸರ್ಕಾರದ ಗಮನ ಸೆಳೆದು ಸಮಾಜದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಅಭಿಯಾನವನ್ನು ಆರಂಭಿಸಲಾಗಿದೆ. ಯುವಜನರು ಸೇರಿದಂತೆ ಸಾರ್ವಜನಿರು ಇದಕ್ಕೆ ಬೆಂಬಲ ನೀಡಬೇಕು ಎಂದು ಗೋಷ್ಠಿಯಲ್ಲಿ ಮನವಿ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ಜಿಲ್ಲಾ ಪದಾಧಿಕಾರಿಗಳಾದ ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್ ಹಾಗೂ ತಯ್ಯೂಬ್ ಬೆಂಗರೆ ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X