ಊರಿನಲ್ಲಿ ಉತ್ಸವ ನಡೆಯುತ್ತದೆ ಎಂದರೆ ಊರಿನ ಎಲ್ಲ ಜಾತಿ, ಮತ, ವರ್ಣ, ವರ್ಗದವರು ಭೇದವಿಲ್ಲದೆ ಒಗ್ಗೂಡುತ್ತಾರೆ. ಅದರಲ್ಲೂ ಊರಿನಲ್ಲಿ ನಡೆಯುವ ಜಾತ್ರಾ ಉತ್ಸವದ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಎಲ್ಲ ಕೋಮಿನವರೂ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಒಗ್ಗಟ್ಟು ಕರಾವಳಿ ಪ್ರದೇಶಗಳಲ್ಲಿ ಕಾಣೆಯಾಗುತ್ತಿದೆ. ‘ವ್ಯಾಪಾರಿ ಧರ್ಮ ದಂಗಲ್’ ನಡೆಯುತ್ತಿದೆ.
ಕಳೆದ ವರ್ಷ ರಾಜ್ಯದಲ್ಲಿ ವಿವಾದ ಸೃಷ್ಟಿಸಿದ್ದ ವ್ಯಾಪಾರಿ ಧರ್ಮ ದಂಗಲ್ ಈಗ ಮತ್ತೆ ಆರಂಭವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ಜಾತ್ರೆಗಳು ಪ್ರಾರಂಭವಾಗಲಿದೆ. ಜಾತ್ರಾ ವ್ಯಾಪಸ್ಥರ ವಿಷಯದಲ್ಲಿ ಪ್ರಜ್ಞಾಪೂರ್ವಕವಾಗಿ ಜಿಲ್ಲೆಯ ಕೋಮುವಾದಿ ಶಕ್ತಿಗಳು ಧರ್ಮದ ಆಧಾರದಲ್ಲಿ ದ್ವೇಷ ರಾಜಕಾರಣ ಮಾಡಲು ಹೊರಟಿವೆ. ಜಾತ್ರಾ ಉತ್ಸವದಲ್ಲಿ ಅಂಗಡಿಯನ್ನು ಹಾಕಿ ಜೀವನ ಸಾಗಿಸುವ ಎಲ್ಲ ಕೋಮಿನ ವ್ಯಾಪಾರಿಗಳ ನಡುವೆ ವಿಷ ಬಿತ್ತುವ ಕೆಲಸಕ್ಕೆ ಹಿಂದುತ್ವವಾದಿಗಳು ಕುಮ್ಮಕ್ಕು ನೀಡುತ್ತಿದ್ದಾರೆ.
ಮುಜರಾಯಿ ಇಲಾಖೆ ಮತ್ತು ಸುಪ್ರೀಂ ಕೋರ್ಟ್ನ ತೀರ್ಪಿನ ಪ್ರಕಾರ ದೇವಸ್ಥಾನದ ಹೊರವಲಯದಲ್ಲಿ ಯಾರು ಬೇಕಾದರೂ ಅಂಗಡಿ ಹಾಕಬಹುದು ಎಂದಿದ್ದರೂ, ಕೋಮುಶಕ್ತಿಗಳು ದೇವಸ್ಥಾನದ ಬಳಿ ಅನ್ಯಧರ್ನಿಯರಿಗೆ ವ್ಯಾಪಾರ ಮಾಡಲು ಅನುಮತಿ ಇಲ್ಲ ಎಂದು ದೊಡ್ಡ ದೊಡ್ಡ ಬ್ಯಾನರ್ ಅಳವಡಿಸುವ ಮೂಲಕ ಸೌಹಾರ್ದತೆಯನ್ನು ಕೆಡಿಸಲು ಹಾತೊರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಳೆದ ವಾರ ಕರ್ನಾಟಕ ರಾಜ್ಯ ಹಿಂದು ಜಾತ್ರಾ ವ್ಯಾಪಸ್ಥರ ಸಂಘವೊಂದು ಹುಟ್ಟಿಕೊಂಡಿದೆ. “ರಾಜ್ಯದಲ್ಲಿ 1.27 ಲಕ್ಷ ಹಿಂದು ವ್ಯಾಪಾರಿಗಳಿದ್ದು, ಅವರೇ ದೇವಸ್ಥಾನಗಳ ಜಾತ್ರೆಯ ಸಂದರ್ಭದಲ್ಲಿ ಅಂಗಡಿಗಳನ್ನು ಹಾಕುತ್ತಾರೆ. ಹೀಗಾಗಿ ದೇವಸ್ಥಾನಗಳಲ್ಲಿ ಹಿಂದುಗಳಿಗೆ ಮಾತ್ರ ಅಂಗಡಿಗಳನ್ನು ಹಾಕಲು ಅನುಮತಿ ನೀಡಬೇಕು” ಎಂದು ಆ ಸಂಘಟನೆಯ ಗೌರವಾಧ್ಯಕ್ಷ ಮಹೇಶ್ ದಾಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉತ್ಸವ ವರ್ತಕರ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಈದಿನ.ಕಾಮ್ ಜೊತೆ ಮಾತನಾಡಿ, “ಸುಪ್ರೀಂ ಕೋರ್ಟ್, ‘ಯಾವುದೇ ದೇವಾಲಯದ ಪರದಿಯನ್ನು ಬಿಟ್ಟು ಹೊರಗಡೆ ಯಾರು ಬೇಕಾದರೂ ವ್ಯಾಪಾರ ಮಾಡಬಹುದು’ ಎಂದು 2021ರಲ್ಲಿ ಬಹಳ ಸ್ಪಷ್ಟವಾಗಿ ತೀರ್ಪನ್ನು ನೀಡಿದೆ. ಅದರ ಆಧಾರದಲ್ಲಿ ಧಾರ್ಮಿಕ ಇಲಾಖೆಯ ಧತ್ತಿ ಆಯುಕ್ತರು ಆದೇಶವನ್ನು ಕೂಡ ಹೊರಡಿಸಿದ್ದಾರೆ. ಆದರೂ, ಈ ಕೋಮುವಾದಿಗಳು ಅಲ್ಪಸಂಖ್ಯಾತರಿಗೆ ವ್ಯಾಪಾರ ನಿರ್ಬಂಧ ಹೇರುತ್ತಿದ್ದಾರೆ. ದೇವಸ್ಥಾನ ಜಾತ್ರೆಯಾಗಲಿ, ಉರೂಸ್ ಆಗಲಿ ಎಲ್ಲರೂ ಒಟ್ಟಿಗೆ ಸೇರಿ ಬದುಕುವ ಖುಷಿ, ಸೌಹಾರ್ದತೆ ಬಹಳ ಮುಖ್ಯ. ಆದರೆ, ಸಂಭ್ರಮದ ಸಂದರ್ಭದಲ್ಲಿ ಹುಳಿ ಹಿಂಡುವ ಕೆಲಸಗಳು ನಡೆಯುತ್ತದೆ. ಯಾವುದೇ ಕಾರಣಕ್ಕೂ ಈ ಬಾರಿಯ ಜಾತ್ರೆ, ಉರೂಸ್, ಉತ್ಸವದ ಸಂದರ್ಭದಲ್ಲಿ ವಿಭಜನ ರಾಜಕೀಯ, ದ್ವೇಷದ ರಾಜಕೀಯ ಮಾಡಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.

“ಈಗ ಸರ್ಕಾರ ಬದಲಾಗಿದೆ. ಹೊಸ ಸರ್ಕಾರ ಯಾರ ಪರ ನಿಲ್ಲುತ್ತದೆ ಎಂದು ನೋಡಬೇಕಾಗಿದೆ. ಕಾನೂನು ಸಂವಿಧಾನ ಪ್ರಕಾರ ನಮ್ಮ ಪರ ನಿಲ್ಲುತ್ತದೆಯೋ ಅಥವಾ ಸಂವಿಧಾನ ಕಾನೂನು ವಿರೋಧಿಗಳ ಪರ ನಿಲ್ಲುತ್ತದೆಯೋ ಎಂದು ನೋಡುತ್ತೇವೆ. ಈ ಜಾತ್ರಾ ವ್ಯಾಪಾರದ ವಿಷಯವನ್ನು ಇಟ್ಟುಕೊಂಡು ಈ ಬಾರಿ ಗಲಾಟೆ ಮಾಡಲು ಬಂದರೆ ನಾವು ಬಿಡುವುದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಉಡುಪಿ | ಗೃಹ ಜ್ಯೋತಿ: ಕತ್ತಲೆಯಲ್ಲೇ ಜೀವನ ದೂಡುತ್ತಿದೆ ಈ ಕುಟುಂಬ
ಸಹಬಾಳ್ವೆ ಉಡುಪಿ ಸಂಚಾಲಕಾದ ಪ್ರೊ ಫಣಿರಾಜ್ ಈದಿನ.ಕಾಮ್ ಜೊತೆ ಮಾತನಾಡಿ, “ಕರಾವಳಿ ಜಿಲ್ಲೆಗಳಲ್ಲಿ ಸಂಘಪರಿವಾರದ ಸಂಘಟನೆಗಳಿಂದ ಕಾನೂನು ಬಾಹಿರವಾಗಿ ಅಲ್ಪಸಂಖ್ಯಾತ ಸಮುದಾಯದ ವ್ಯಾಪಾರಿಗಳನ್ನು ಜಾತ್ರೆಗಳಲ್ಲಿ ನಿರ್ಬಂಧಿಸಲಾಗುತ್ತಿದೆ. ಮುಜರಾಯಿ ಇಲಾಖೆಯ ಕೆಲವೊಂದು ಕಾನೂನುಗಳ ವ್ಯಾಪ್ತಿಯನ್ನು ಮೀರಿ ದೇವಸ್ಥಾನದ ಆಡಳಿತ ಮಂಡಳಿಗೆ ಒತ್ತಡ ಹಾಕಿ ಅನ್ಯಧರ್ಮಿಯರ ಅಂಗಡಿಗಳನ್ನು ತೆರವು ಮಾಡುವ ಯತ್ನ ನಡೆಯುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿಯವರು ಅವಕಾಶ ಮಾಡಿಕೊಟ್ಟಿದ್ದರೂ ಭಜರಂಗದಳವರು ಗೂಂಡಾವರ್ತನೆ ಮಾಡಿ, ಅಲ್ಪಸಂಖ್ಯಾತರು ವ್ಯಾಪಾರ ನಡೆಸದಂತೆ ಅಡ್ಡಿಯುಂಟುಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಈಗಾಗಲೇ ಮರವಂತೆ ಜಾತ್ರೆಯಲ್ಲಿ ಇಂತಹ ಘಟನೆ ಆದಾಗ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೆವು. ಹಿರಿಯಡಕ, ಪೆರ್ಡೂರು, ಕಾರಂಜೆಯಲ್ಲಿ ನಡೆದ ಜಾತ್ರೆಯಲ್ಲಿಯೂ ವ್ಯಾಪಾರಕ್ಕೆ ಅಡ್ಡಿ ಮಾಡಿರುವ ಸುದ್ದಿ ತಿಳಿದುಬಂದಿದೆ. ನಾವು ಎಂಡೋಮೇಷನ್ ಕಮಿಷನರ್, ಗೃಹ ಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಈಗ ಶ್ರಾವಣ ಮಾಸ ಪ್ರಾರಂಭವಗುತ್ತಿದ್ದಂತೆ ಜಾತ್ರೆಗಳು ಪ್ರಾರಂಭವಾಗುತ್ತದೆ. ಕರಾವಳಿ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣ ವಾಗುತ್ತಿದೆ. ಅಂತಹ ವಾತಾವರಣ ನಿರ್ಮಾಣವಾಗಲು ಬಿಡಬಾರದು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದಿದ್ದೇವೆ” ಎಂದು ಅವರು ತಿಳಿಸಿದರು.