ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಿದ್ದಾಗಿ ದಾಖಲಾಗಿರುವ ಪ್ರಕರಣದ ಸಾಕ್ಷಿ ದೂರುದಾರ, ಧರ್ಮಸ್ಥಳದ ಆಸುಪಾಸಿನ ಪ್ರದೇಶಗಳಲ್ಲಿ ಸುಮಾರು 13 ಜಾಗಗಳನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳಿಗೆ ಸೋಮವಾರ ತೋರಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಉತ್ಖನನ ಪ್ರಕ್ರಿಯೆ ಆರಂಭಗೊಂಡಿದೆ.
ಮಧ್ಯಾಹ್ನದ ಬಳಿಕದ ಮಾಹಿತಿಯ ಪ್ರಕಾರ, ನೇತ್ರಾವತಿ ಸ್ನಾನಘಟ್ಟದ ಸಮೀಪ ಎಸ್ಐಟಿ ನಡೆಸುತ್ತಿರುವ ಅಗೆಯುವಿಕೆಯ ವೇಳೆ ನಿರಂತರ ಮಳೆಯಾಗುತ್ತಿದೆ. ನುಗ್ಗಿ ಬರುತ್ತಿರುವ ನೀರಿನಿಂದಾಗಿ ಅಡಚಣೆಯಂಟಾಗಿದೆ. ಅಲ್ಲದೇ, ಸತತ 4 ರಿಂದ 5 ಗಂಟೆಗಳ ಉತ್ಖನನ ನಡೆಸಿದರೂ ಕಳೇಬರಹ ಪತ್ತೆಯಾಗಿಲ್ಲ. ಈ ನಡುವೆಯೇ ಸ್ಥಳಕ್ಕೆ ಇದೀಗ ಜೆಸಿಬಿ ಯಂತ್ರವನ್ನು ಕರೆಸಲಾಗಿದ್ದು, ಅದರ ಮೂಲಕ ಅಗೆಯುವ ಪ್ರಕ್ರಿಯೆ ನಡೆಯುತ್ತಲಿದೆ.
ಈ ಎಲ್ಲ ಬೆಳವಣಿಗೆಯ ನಡುವೆಯೇ ನೇತ್ರಾವತಿ ಸ್ನಾನಘಟ್ಟದ ಬಳಿ ಕುತೂಹಲದಿಂದ ಜನರು ಸೇರುತ್ತಲೇ ಇದ್ದಾರೆ. ನಿರಂತರವಾಗಿ ಮಳೆಯಾಗುತ್ತಿದ್ದರೂ ಕೂಡ ಛತ್ರಿ ಹಾಗೂ ರೈನ್ ಕೋಟ್ ಹಾಕಿಕೊಂಡು ಸ್ಥಳೀಯರ ಸಹಿತ ಸಾರ್ವಜನಿಕರು ಆಗಮಿಸುತ್ತಿದ್ದು, ಏನಾದರೂ ಬೆಳವಣಿಗೆ ಆಗಬಹುದು ಅಥವಾ ಕಳೇಬರ ಸಿಕ್ಕಿರುವ ಸುದ್ದಿ ಸಿಗಬಹುದು ಎಂಬ ಕುತೂಹಲದಿಂದಲೇ ಕಾಯುತ್ತಲೇ ಇದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ಧರ್ಮಸ್ಥಳ ಪೊಲೀಸ್ ಠಾಣೆಯಿಂದ 1 ಕಿ.ಮೀ ವ್ಯಾಪ್ತಿಯಲ್ಲಿರುವ 13 ಜಾಗಗಳು
ಸಾಕ್ಷಿ ದೂರುದಾರ ಸೋಮವಾರ ತೋರಿಸಿರುವ 13 ಜಾಗಗಳೂ ಧರ್ಮಸ್ಥಳ ಪೊಲೀಸ್ ಠಾಣೆಯಿಂದ 1 ಕಿ.ಮೀ ವ್ಯಾಪ್ತಿಯ ಕಾಡಿನಲ್ಲಿವೆ. ಮೊದಲು ತೋರಿಸಿದ ಎಂಟು ಜಾಗಗಳು ನೇತ್ರಾವತಿ ನದಿ ದಂಡೆಯಲ್ಲಿದ್ದರೆ, ಉಳಿದ ನಾಲ್ಕು ಜಾಗಗಳು ನೇತ್ರಾವತಿ ಸೇತುವೆಯಿಂದ ಸ್ನಾನಘಟ್ಟದ ಕಡೆಗೆ ರಾಜ್ಯ ಹೆದ್ದಾರಿ–37ರ ಪಕ್ಕದಲ್ಲಿವೆ. ಒಂದು ಜಾಗ ಮಾತ್ರ ಸ್ನಾನಘಟ್ಟ ಸಮೀಪದ ಕಿರು ಅಣೆಕಟ್ಟೆಯ ಪಕ್ಕದ ಬಯಲು ಜಾಗದಲ್ಲಿದೆ.
