ಇಡೀ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರಕಾರವು ಲಿಂಗತ್ವ ಅಲ್ಪ ಸಂಖ್ಯಾತರ ಸಮೀಕ್ಷೆಯನ್ನು ರಾಜ್ಯಾದ್ಯಂತ ಸೆಪ್ಟೆಂಬರ 15ರಿಂದ ನವೆಂಬರ 21ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದೆ. ಧಾರವಾಡ ಜಿಲ್ಲೆಯಲ್ಲಿಯೂ ಸಮೀಕ್ಷೆ ನಡೆಯಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಯಾವೊಬ್ಬ ಅರ್ಹ ಫಲಾನುಭವಿ ಸಮೀಕ್ಷೆಯಿಂದ ಹೊರಗುಳಿಯದಂತೆ ಸೂಕ್ತ ಕ್ರಮವಹಿಸಬೇಕು ಎಂದು ಸೂಚಿಸಿ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಜಿಲ್ಲಾ ಮಟ್ಟದ ಸಮಿತಿಯ ಪೂರ್ವಸಿದ್ದತಾ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿದರು.
ಈಗಾಗಲೇ 6 ಜನ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮೀಕ್ಷೆ ನಡೆಸುವ ಕುರಿತು ರಾಜ್ಯಮಟ್ಟದಲ್ಲಿ ತರಬೇತಿ ನೀಡಿ, ದತ್ತಾಂಶ ದಾಖಲಿಸಲು ಟ್ಯಾಬ್ಗಳನ್ನು ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳಾದ ಸಮರ ಮತ್ತು ಸಾಮಥ್ರ್ಯ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು 2000 ಜನ ಲಿಂಗತ್ವ ಅಲ್ಪ ಸಂಖ್ಯಾತರಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರೆ ಸಮೀಕ್ಷೆದಾರರಾಗಿರುವದರಿಂದ ಅರ್ಹರು ಸಮೀಕ್ಷೆಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಲಾಗುತ್ತದೆ.
ರಾಜ್ಯ ಸರಕಾರದ ಇ-ಗವರನನ್ಸ್ ಸಿದ್ದಪಡಿಸಿರುವ ವೆಬ್ ಆ್ಯಪ್ ಮೂಲಕ ಸೆಪ್ಟೆಂಬರ್ 15 ರಿಂದ ನವೆಂಬರ 21 ರವರೆಗೆ ಧಾರವಾಡ ಜಿಲ್ಲೆಯಲ್ಲಿ ದೇವದಾಸಿಯರ ಮರು ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 409 ಮಾಜಿ ದೇವದಾಸಿಯರಿದ್ದಾರೆ. ರಾಜ್ಯ ಸರಕಾರವು 1993-94 ರಲ್ಲಿ ಹಾಗೂ 2007-08 ರಲ್ಲಿ ಮಾಜಿ ದೇವದಾಸಿಯರ ಸಮೀಕ್ಷೆ ಮಾಡಲಾಗಿದೆ. ರಾಜ್ಯ ಸರಕಾರವು, ಮಾಜಿ ದೇವದಾಸಿಯರಿಗೆ ವಸತಿ, ಉದ್ಯೋಗ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಲು ಅನುಕೂಲವಾಗುವಂತೆ ಮರು ಸಮೀಕ್ಷೆ ಮಾಡಲು ಅದೇಶಿಸಿದೆ. ಈ ಸಮೀಕ್ಷೆಯಲ್ಲಿ ಹಿಂದಿನ ಸಮೀಕ್ಷೆಗಳಲ್ಲಿದ್ದು, ಈಗ ಮರಣ ಹೊಂದಿದ್ದರೆ ಅವರ ಮಕ್ಕಳು ಅಥವಾ ಮೊಮ್ಮಕ್ಕಳು ನಮೂನೆ -1 ರಲ್ಲಿ ಮಾಹಿತಿ ಭರ್ತಿ ಮಾಡಬೇಕು. ಹಾಗೂ ಹಿಂದಿನ ಸಮೀಕ್ಷೆಯಲ್ಲಿರದ ಮತ್ತು ಈಗ ಜೀವಂತವಾಗಿದ್ದರೆ ನಮೂನೆ -2 ರಲ್ಲಿ ಮಾಹಿತಿ ಭರ್ತಿ ಮಾಡಬೇಕು. ಮತ್ತು ಹಿಂದಿನ ಸಮೀಕ್ಷೆಯಲ್ಲಿ ಇರದೆ, ಮರಣ ಹೊಂದಿದ್ದರೆ ಅಂತವರ ಕುಟುಂಬ ಸದಸ್ಯರು ನಮೂನೆ -3 ರಲ್ಲಿ ಮಾಹಿತಿ ಭರ್ತಿ ಮಾಡಿ ಸಲ್ಲಿಸಬೇಕು ಎಂದರು.
ಮಾಜಿ ದೇವದಾಸಿಯರ ಸಮೀಕ್ಷಾ ಅರ್ಜಿಗಳು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದ್ದು, ಅರ್ಹರು ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ 15 ರಿಂದ 30 ರವರೆಗೆ ಅರ್ಜಿ ಸಲ್ಲಿಸಬೇಕು. ಅವುಗಳನ್ನು ತಹಶಿಲ್ದಾರ ಅಧ್ಯಕ್ಷತೆಯ ತಾಲೂಕು ಸಮಿತಿಗಳು ನಿಯಮಾನುಸಾರ ಪರಿಶೀಲಿಸಿ, ಜಿಲ್ಲಾ ಸಮಿತಿಗೆ ಕಳುಹಿಸುತ್ತಾರೆ. ನವೆಂಬರ 21 ರ ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಸಮಿತಿ ಎಲ್ಲ ತಾಲೂಕು ಸಮಿತಿಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅರ್ಜಿಗಳನ್ನು ಪರಿಗಣಿಸಿ, ಅರ್ಹತಾ ಪ್ರಮಾಣಪತ್ರ ನೀಡುತ್ತದೆ. ಇದನ್ನು ನಂತರ ಅರ್ಹತಾ ಪ್ರಮಾಣಪತ್ರ ಪಡೆದವರು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ನೀಡಿ, ದಾಖಲಿಸಬೇಕೆಂದು ತಿಳಿಸಿದರು.
ಇಲಾಖೆ ಮೂಲಕ ಮಾಜಿ ದೇವದಾಸಿಯರ ಮರು ಸಮೀಕ್ಷೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಕುರಿತು ವ್ಯಾಪಕ ಪ್ರಚಾರ ನೀಡಿ, ಸಮುದಾಯಗಳಿಗೆ ತಿಳುವಳಿಕೆ ನೀಡಬೇಕು. ಮತ್ತು ಸಮೀಕ್ಷೆಯಿಂದ ಯಾರು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಕೃಷಿ ಮೇಳದಲ್ಲಿ ಮಿನಿ ಟ್ರ್ಯಾಕ್ಟರ್ ಬಿದ್ದು ಯುವಕ ಸಾವು: 5ಲಕ್ಷ ಪರಿಹಾರ ವಿತರಣೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ.ಹೆಚ್.ಹೆಚ್.ಕುಕನೂರ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಯೋಜನಾಧಿಕಾರಿ ನಂದಿನಿ ವಂದಿಸಿದರು. ಸಭೆಯಲ್ಲಿ ಎಲ್ಲ ತಾಲೂಕುಗಳ ತಹಶಿಲ್ದಾರರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಭಿವೃದ್ಧಿ ನಿಗಮದ ಅಧಿಕಾರಿಗಳು, ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿಹಳು, ಮಾಜಿ ದೇವದಾಸಿಯರು ಉಪಸ್ಥಿತರಿದ್ದರು.