ಕೊಡಗು ಜಿಲ್ಲೆ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ, ಕೂರ್ಗ್ ಫ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಮಡಿಕೇರಿ ನಗರದ ಗಾಂಧಿ ಮೈದಾನದ ಕರ್ನಾಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ದಿ.ಸಾಕಮ್ಮ ಸಭಾಂಗಣದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ನಡೆದ ಕಾಫಿ ದಸರಾದಲ್ಲಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಕಾಫಿ ಬೆಳೆಗಾರರ ಸಂಕಷ್ಟ ಪರಿಹರಿಸುವಲ್ಲಿ ಎಲ್ಲರೂ ಕೈಜೋಡಿಸಿ ಎಂದರು.
ಕಾಫಿ ಬೆಳೆಗೆ ಒಳ್ಳೆಯ ದರ ಇದ್ದರೂ ಸಹ ಬೆಳೆಗಾರರು ಉತ್ಪಡನೆಯಲ್ಲಿ ಹಲವು ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರದಲ್ಲಿ ಕಾಫಿ ಬೆಳೆಗೆ 250 ರಿಂದ 300 ವರ್ಷಗಳ ಇತಿಹಾಸವಿದ್ದು, ಕಾಫಿ ಬೆಳೆಗೆ ಒಳ್ಳೆಯ ದರವಿದ್ದರೂ ಸಹ ಕಾರ್ಮಿಕರ ಕೊರತೆ, ವಾತಾವರಣದಲ್ಲಿನ ಬದಲಾವಣೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಫಿಯನ್ನು ಹೆಚ್ಚಾಗಿ ಉತ್ಪಾದನೆ ಮಾಡುವುದು ಕೊಡಗು ಜಿಲ್ಲೆ. ಆ ನಿಟ್ಟಿನಲ್ಲಿ ಕಾಫಿ ದಸರಾವನ್ನು ಕಳೆದ ವರ್ಷದಿಂದ ಏರ್ಪಡಿಸಲಾಗುತ್ತಿದ್ದು, ಇದೇ ರೀತಿ ಮುಂದುವರೆಯುವಂತಾಗಬೇಕು. ಕಾಫಿ ಬೆಳೆಗಾರರು ಎಲ್ಲರೂ ಒಂದೆಡೆ ಸೇರಿ ಕಾಫಿ ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆ ವಿಸ್ತರಣೆ ಮತ್ತಿತರ ಬಗ್ಗೆ ಚರ್ಚಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಕಾಫಿ ದಸರಾದಲ್ಲಿ 45 ಮಳಿಗೆ ತೆರೆದಿರುವುದು ವಿಶೇಷವಾಗಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಕಾಪಿಯಲ್ಲಿ ಬಗೆ ಬಗೆಯ ತಿನಿಸು ತಯಾರಿಸಬಹುದಾಗಿದೆ ಎಂದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ದೇವವೃಂದ ಮಾತನಾಡಿ, “ತೋಟಗಾರಿಕೆ ಬೆಳೆಯಾದ ಅಡಿಕೆ ಮತ್ತು ಕಾಳು ಮೆಣಸಿಗೆ ವಿಮಾ ಸೌಲಭ್ಯ ಇರುವಂತೆ ಕಾಫಿ ಬೆಳೆಗೂ ಸಹ ವಿಮೆ ನೀಡಬೇಕು ಎಂದು ಒತ್ತಾಯಿಸಿದರು. ರಾಷ್ಟ್ರದ ಈಶಾನ್ಯ ರಾಜ್ಯಗಳು ಹಾಗೂ ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತದೆ. ಮಲೆನಾಡು ಭಾಗದಲ್ಲಿ ಕಾಫಿ ನಮ್ಮ ಬದುಕಿನಲ್ಲಿ ಒಂದಾಗಿದ್ದು, ಕಾಫಿ ವೃತ್ತಿಯನ್ನು ಅನುಭವಿಸಬೇಕು ಮತ್ತು ಪ್ರೀತಿಸಬೇಕು” ಎಂದು ಕರೆ ನೀಡಿದರು.
ಕೃಷಿ ಪ್ರತಿಯೊಬ್ಬರ ಬದುಕಿಗೆ ಸಂಪರ್ಕ ಸೇತುವೆಯಾಗಿದೆ. ಬೆಲೆಯಲ್ಲಿ ಏರುಪೇರು ಸೇರಿದಂತೆ ಹಲವು ತೊಂದರೆಗಳ ನಡುವೆ ಕಾಫಿ ಬೆಳೆಗಾರರು ಕೃಷಿಯನ್ನು ನಂಬಿಕೊಂಡು ಬದುಕುತ್ತಿದ್ದಾರೆ ಕಾಫಿ ಬೆಳೆ ಸಂಕಷ್ಟ ನಿವಾರಣೆ ಬಗ್ಗೆ ಚರ್ಚೆಗಳು ನಡೆಯಬೇಕು. ಅದರ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಇಡೀ ಜಗತ್ತಿನಲ್ಲಿ ಕಾಫಿ ಬೆಳೆಯ ದರ ಒಂದು ರೀತಿಯ ಸಂಚಲನ ಮೂಡಿಸಿದೆ. ಕಾಫಿ ಬೆಳೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯವಿದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು. ಕಾಫಿ ಮಂಡಳಿಯು ಕಾಫಿ ಬೆಳೆಗಾರರಿಗೆ ಹೊಸ ಹೊಸ ತಂತ್ರಜ್ಞಾನದ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸುತ್ತಿದೆ. ಹೊಸ ರೀತಿಯ ಬದಲಾವಣೆಗೆ ಹೊಂದಿಕೊಂಡು ಕಾಫಿ ಬೆಳೆಗಾರರು ಕೃಷಿಯಲ್ಲಿ ಮುನ್ನಡೆ ಸಾಧಿಸಬೇಕು ಎಂದರು.
ಕೊಡಗು ಜಿಲ್ಲೆಯಲ್ಲಿ ಕಾಫಿಯನ್ನು ಶೇ.75% ರಷ್ಟು ಬೆಳೆಯಲಾಗುತ್ತಿದೆ. ಕಾಫಿ ಬೆಳೆಗೆ ಇನ್ನಷ್ಟು ಉತ್ತೇಜನ ನೀಡುವಲ್ಲಿ ಸಹಕರಿಸಬೇಕು. ಕಾಫಿ ಬೆಳೆ ಸಂಬಂಧಿಸಿದಂತೆ ಉತ್ಪಾದನೆ, ಮಾರುಕಟ್ಟೆ ಮತ್ತಿತರ ಸಂಬಂಧ ಒರಿಸ್ಸಾದಲ್ಲಿ ಚಿಂತನಾ ಸಭೆ ನಡೆದಿದೆ. 2047 ಕ್ಕೆ 7 ಲಕ್ಷ ಟನ್ ಕಾಫಿ ಉತ್ಪಾದಿಸುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ವಿದೇಶಿ ವಿನಿಮಯ ಮಾಡಬೇಕು. ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಬೆಳೆಗಾರರಿಗೆ ಅನುಕೂಲವಾಗಬೇಕು ಎಂದು ಪ್ರತಿಪಾದಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, “ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಜಿಲ್ಲಾಡಳಿತ ರೈತರ, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಲ್ಲಿ ಸದಾ ಸಿದ್ಧವಾಗಿದೆ. ಕಾಫಿ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದೆ. ವರ್ಷದಿಂದ ವರ್ಷಕ್ಕೆ ಹೊಸತನ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ವಿಡಿಯೋ ಸಂವಾದ ಮೂಲಕ ಕಾಫಿ ಬೆಳೆ ಉತ್ಪಾದನೆ, ಮಾರುಕಟ್ಟೆ ಸೌಲಭ್ಯ ಮತ್ತಿತರ ಬಗ್ಗೆ ತರಬೇತಿ ಕಾರ್ಯಕ್ರಮ ಏರ್ಪಡಿಸುವಲ್ಲಿ ಜಿಲ್ಲಾಡಳಿತ ಕೈಜೋಡಿಸಲಿದೆ” ಎಂದರು.
21 ನೇ ಶತಮಾನದ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಪ್ರಗತಿಶೀಲ ಕೃಷಿ ಚಟುವಟಿಕೆ ಕೈಗೊಂಡು ಉತ್ಪಾದನೆ ಹೆಚ್ಚಳ ಹಾಗೂ ಮಾರುಕಟ್ಟೆ ಸೌಲಭ್ಯ ದೊರೆಯುವಂತಾಗಲು ಪ್ರಯತ್ನಗಳು ಮುಂದುವರೆಯಬೇಕು. ಕಾಫಿ ಬೆಳೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಮತ್ತಷ್ಟು ದೊರೆಯುವಂತಾಗಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕನ್ನಡ ಇರುವ ತನಕ ಎಸ್. ಎಲ್. ಭೈರಪ್ಪ ಇರುತ್ತಾರೆ : ಜಯಪ್ಪ ಹೊನ್ನಾಳಿ
ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ನಿರ್ದೇಶಕ ಐಚೆಟ್ಟೀರ ಡಾ.ಮಂದಪ್ಪ, ಕಾಫಿ ಕೃಷಿ ಪರಿಣಿತ ಕರಣ್, ಜರ್ಮಿ ಡಿಸೋಜ, ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಚೇಂದ್ರಿಮಾಡ ಕ್ಯಾಪ್ಟನ್ ತಿಮ್ಮಯ್ಯ, ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್, ಕೂರ್ಗ್ ಪ್ಲಾಂಟರ್ಸ್ ಅಸೋಷಿಯೇಷನ್ನ ಅಧ್ಯಕ್ಷ ನಂದ ಬೆಳ್ಯಪ್ಪ, ಕೊಡಗು ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಎಸ್.ಜಿ.ಮೇದಪ್ಪ, ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಬಾಸ್ತಿ ಸೇರಿದಂತೆ ಇನ್ನಿತರರು ಇದ್ದರು.