ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ 3 ವರ್ಷ ಸೇವೆ ಸಲ್ಲಿಸಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಜಿಲ್ಲಾಡಳಿತದಿಂದ ನಗರದ ವಾಲ್ಮೀಕಿ ಭವನದಲ್ಲಿ ಬುಧವಾರ ಸಂಜೆ ಆತ್ಮೀಯವಾಗಿ ಬಿಳ್ಕೊಡಲಾಯಿತು. ಜತೆಗೆ ನೂತನ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ ಅವರಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
“ನಿರಂತರ ಪ್ರಯತ್ನದಿಂದ ಗೆಲ್ಲಬಹುದು. ಸರ್ಕಾರ ನನಗೆ ನೀಡಿದ್ದ ಅವಕಾಶದಲ್ಲಿ ಬಳ್ಳಾರಿಯಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜಿಲ್ಲಾಧಿಕಾರಿ ಹುದ್ದೆ ಸುಲಭದ ಕೆಲಸವಲ್ಲ, ನಿತ್ಯವೂ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆ ಎಲ್ಲ ಸವಾಲುಗಳನ್ನು ನಿಭಾಯಿಸಿರುವೆ. ಹೀಗೆಯೇ ನಿರಂತರ ಪ್ರಯತ್ನದಿಂದ ಗೆಲುವು ಸಾಧಿಸಬಹುದು” ಎಂದು ಪ್ರಶಾಂತ್ ಕುಮಾರ ಮಿಶ್ರಾ ಕಿವಿಮಾತು ಹೇಳಿದರು.
“ಕಳೆದ ಎರಡು ವರ್ಷದ ಹಿಂದೆ ಬಳ್ಳಾರಿ ಜಿಲ್ಲೆಗೆ ಬಂದಾಗ ನೂರೆಂಟು ಸವಾಲುಗಳನ್ನು ಎದುರಿಸಲು ಸಿದ್ದನಾಗಿ ಬಂದಿದ್ದೆ. ಎಲ್ಲವನ್ನೂ ಸಾಧ್ಯವಾದ ಮಟ್ಟಿಗೆ ನಿಭಾಯಿಸಿರುವೆ. ಜಿಲ್ಲೆಯಲ್ಲಿ ಕೈಗೊಂಡ ಲೋಕಸಭೆ ಚುನಾವಣೆ ಹೊಸ ಅನುಭವವನ್ನು ನೀಡಿದೆ. ಜಿಲ್ಲಾಡಳಿತದ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದ ಸಹಾಯ, ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಕೆಲವು ಸಂದರ್ಭಗಳಲ್ಲಿ ಕೆಲ ನಿರ್ಧಾರಗಳನ್ನು ಮಾಡುವಾಗ ಗೊಂದಲಕ್ಕೆ ಸಿಲುಕುತ್ತೇವೆ. ಅದೆಲ್ಲವೂ ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ” ಎಂದು ಅಭಿಪ್ರಾಯಪಟ್ಟರು.
ನೂತನ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ ಮಾತನಾಡಿ, “ಬಳ್ಳಾರಿ ಜಿಲ್ಲೆಯು ಆಡಳಿತಕ್ಕೆ ಹೆಸರುವಾಸಿ. ಹಾಗೆಯೇ ಅನೇಕ ಸವಾಲುಗಳಿಂದ ಕೂಡಿದ ಜಿಲ್ಲೆಯಾಗಿದ್ದು, ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಲ್ಲಿದೆ. ಪ್ರಶಾಂತ್ ಕುಮಾರ್ ಮಿಶ್ರಾ ಅವರ ಕಾಲಾವಧಿಯಲ್ಲಿ ಜಿಲ್ಲೆಯು ಕಂದಾಯ ಆಡಳಿತ ಕಾರ್ಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿತ್ತು. ಜಿಲ್ಲೆಯಲ್ಲಿ ಅವರು ಮಾಡಿರುವ ಅಭಿವೃದ್ದಿ ಹಾಗೂ ಪ್ರಗತಿಪರ ಕೆಲಸಗಳು ಮುಂದುವರೆಯಲಿವೆ. ಅಧಿಕಾರಿ ವರ್ಗ ನನಗೂ ಸಹಕಾರ ನೀಡಬೇಕು” ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ ಜೆ ಮಾತನಾಡಿ, “ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ ಅವರೊಂದಿಗಿನ ಬಾಂಧವ್ಯ, ಅವರ ಜತೆಯಲ್ಲಿ ಕರ್ತವ್ಯ ನಿರ್ವಹಿಸಿರುವುದಕ್ಕೆ ಹೆಮ್ಮೆ ಇದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಮಹಾನಾಯಕ ಬಿ ಆರ್ ಅಂಬೇಡ್ಕರ್ ಸೇನೆ ಪದಾಧಿಕಾರಿಗಳ ಆಯ್ಕೆ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಮಾತನಾಡಿ, “ಪ್ರಶಾಂತ್ ಕುಮಾರ್ ಮಿಶ್ರಾ ಅವರಿಂದ ಹಲವು ಹೊಸ ವಿಚಾರಗಳನ್ನು ಕಲಿಯಲು ಅವಕಾಶ ದೊರೆಯಿತು. ಅವರೊಬ್ಬ ಶಿಸ್ತಿನ ಸಿಪಾಯಿಯಂತಿದ್ದರು” ಎಂದು ಅಭಿಮತ ವ್ಯಕ್ತಪಡಿಸಿದರು.
ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ ಎನ್ ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್ ಝುಬೇರ್, ಸಹಾಯಕ ಆಯುಕ್ತ ಪಿ ಪ್ರಮೋದ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು 5 ತಾಲೂಕುಗಳ ತಹಶೀಲ್ದಾರರು ಸೇರಿದಂತೆ ಬಹುತೇಕರು ಇದ್ದರು.