“ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ ನಿಷೇದ ಮಸೂದೆ – 2025 ಅಂಗೀಕರಿಸಿದೆ. ಎಲ್ಲ ದೇವದಾಸಿ ಮಹಿಳೆಯರ ಮೂರು ತಲೆ ಮಾರುಗಳ ಕುಟುಂಬದ ಸದಸ್ಯರ ಗಣತಿಗೆ ಕ್ರಮವಹಿಸಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿ ಸ್ವಾಗತಿಸುತ್ತದೆ” ಎಂದು ಗೌರವಾಧ್ಯಕ್ಷ ಬಾಲು ರಾಠೋಡ ಹೇಳಿದರು.
ಗದಗ ಪಟ್ಟಣದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿಯು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
“ಈಗ ಕಾರ್ಯ ನಿರ್ವಹಿಸುವ ಗಣತಿಯಲ್ಲಿ ಈಗಾಗಲೇ ಗಣತಿ ಪಟ್ಟಿಯಲ್ಲಿರುವ ದೇವದಾಸಿ ಮಹಿಳೆಯರು ಹಾಗು ಕುಟುಂಬದ ಸದಸ್ಯರನ್ನು ವಿಶೇಷವಾಗಿ ಮರು ಸಮೀಕ್ಷೆಗೆ ಕ್ರಮ ವಹಿಸಲಾಗಿದೆ. ಆದರೆ ಇದುವರೆಗೆ ಗಣತಿಯಲ್ಲಿ ಸೇರಿಸಲಾಗದಿರುವ ದೇವದಾಸಿ ಮಹಿಳೆಯರು ಹಾಗು ಅವರ ಕುಟುಂಬದ ಸಾವಿರಾರು ಸದಸ್ಯರು ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ದೇವದಾಸಿ ಪದ್ಧತಿ, ಜಾತಿ ಅಸಮಾನತೆ ಮತ್ತು ಅಶ್ಪೃಶ್ಯಾಚರಣೆಯ ಅಪಮಾನಗಳ ತೀವ್ರ ಶೋಷಣೆಗೆ ಗುರಿಯಾಗಿದ್ದರೂ, ಅವರು ಕೇವಲ ಗಣತಿ ಪಟ್ಟಿಯಲ್ಲಿ ಇಲ್ಲವೆಂಬ ಕಾರಣಕ್ಕೆ ದೇವದಾಸಿ ಮಹಿಳೆಯರು ಈಗ ಸಿಗುವ ಯಾವುದೇ ಕನಿಷ್ಠ ಸೌಲಭ್ಯಗಳಕನ್ನು ಪಡೆಯಲಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಗಣತಿ ಪಟ್ಟಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ಅವರಿಗೆ, ಅವರ ಮಕ್ಕಳಿಗೆ ದೇವದಾಸಿ ಕುಟುಂಬದ ಸರ್ಟಿಫಿಕೇಟ್ ಕೂಡಾ ಸಿಕ್ಕಿರುವುದಿಲ್ಲ. ಇದರಿಂದ ಸಾವಿರಾರು ಮಕ್ಕಳು ಅವರ ವಿದ್ಯಾಭ್ಯಾಸ, ಉದ್ಯೋಗದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಾಯಂದಿರು ದೌರ್ಜನ್ಯದಿಂದ ನಲುಗಿದ್ದಾರೆ” ಎಂದು ಹೇಳಿದರು.
“ಗಣತಿ ಪಟ್ಟಿಯಾಚೆ ಇರುವ ಎಲ್ಲ ದೇವದಾಸಿ ಮಹಿಳೆಯರನ್ನು ಅವರ ಮೂರು ತಲೆಮಾರು ಕುಟುಂಬದ ಸದಸ್ಯರನ್ನು ಅತಿ ಶೀಘ್ರವಾಗಿ ಗಣತಿಯಪಟ್ಟಿಗೆ ಸೇರಿಸಲು ವಿಶೇಷ ಕ್ರಮ ವಹಿಸಿ 2026ರ ಬಜೆಟ್ ನಲ್ಲಿ ಈ ಎಲ್ಲರಿಗೂ ಎಲ್ಲ ದೇವದಾಸಿ ಮಹಿಳೆಯರ ಕುಟುಂಬದಂತೆ ಸೌಲಭ್ಯಗಳು ದೊರೆಯುವಂತೆ ಕ್ರಮ ವಹಿಸುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಮಕ್ಕಳ ಹಕ್ಕುಗಳ ಹೋರಾಟ ಸಮಿತಿ, ಮನವಿ ಮಾಡುತ್ತದೆ” ಎಂದರು.
ತಕ್ಷಣದಿಂದಲೆ ಈ ಮಹಿಳೆಯರಿಗೆ ಅವರ ಕುಟುಂಬದ ಸದಸ್ಯರಿಗೆ ದೇವದಾಸಿ ಕುಟುಂಬದ ಸರ್ಟಿಫಿಕೇಟ್ ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ರಾದ ಫಕೀರಮ್ಮ ಪೂಜಾರ ಮಾದೇವಿ ದೋಡ್ಡಮನಿ ಶಿವಕ್ಕ ಮಾದರ . ಮಕ್ಕಳ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷರು ಮಲ್ಲಿಕಾರ್ಜುನ ಮಾದರ ಆನಂದ ಮಾದರ ಇದ್ದರು.