“ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುತ್ತಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿ ಮಾಡಬೇಕು. ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಸಾರ್ವತ್ರಿಕ ಮುಷ್ಕರ ನಡೆಯುತ್ತಿದ್ದು, ಕಾರ್ಮಿಕರು ವಿವಿಧ ಸಮಸ್ಯೆಗಳನ್ನು ನಿರಂತರ ಅನುಭವಿಸುತ್ತಿದ್ದಾರೆ. ಇದರ ಕುರಿತು ಆಳುವ ಸರ್ಕಾರಗಳು ಗಮನಹರಿಸದೆ, ಬಹು ರಾಷ್ಟ್ರೀಯ ಕಂಪನಿಗಳಿಗೆ ತಲೆಬಾಗಿ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿರುವುದು ಖೇದಕರ ಸಂಗತಿ” ಸಿಐಟಿಯು ಜಿಲ್ಲಾ ಮುಖಂಡ ಪೀರು ರಾಠೋಡ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ- ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವುದರ ವಿರುದ್ಧ ಇಂದು ದೇಶವ್ಯಾಪ್ತಿ ಸಾರ್ವತ್ರಿಕ ಮುಷ್ಕರ ಭಾಗವಾಗಿ ಗದಗ ಜಿಲ್ಲೆಯ ಗಜೇಂದ್ರಗಡದ ಕೆ ಕೆ ವೃತ್ತದಲ್ಲಿ ರೈತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಸಿಐಟಿಯು ವತಿಯಿಂದ ಮಾನವ ಸರಪಳಿ ರಚಿಸಿ ಪ್ರತಿಭಟಿಸಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, “ಜುಲೈ 9ರಂದು ದೇಶದ ಕಾರ್ಮಿಕ ವರ್ಗ ಜೆಸಿಟಿಯು ನೇತೃತ್ವದಲ್ಲಿ ಸಾರ್ವತ್ರಿಕ ಮಷ್ಕರ ನಡೆಸುತ್ತಿದೆ. ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಈ ಕರೆ ನೀಡಿವೆ. ಇದಕ್ಕೆ ರೈತ, ಕೂಲಿಕಾರರ ಸಂಘಟನೆಗಳು ಬೆಂಬಲ ನೀಡಿವೆ. ದೇಶವನ್ನು ಆಳುತ್ತಿರುವವರು ಕಾರ್ಮಿಕರನ್ನು ಹಕ್ಕುಗಳಿಲ್ಲದ ಕಾಲಕ್ಕೆ ಪುನಃ ತಳ್ಳುತ್ತಿರುವ ಈ ಸಂದರ್ಭದಲ್ಲಿ, ಆಧುನಿಕ ಜೀತದ ಸ್ಥಿತಿ ನಿರ್ಮಿಸುತ್ತಿರುವ, ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಧಣಿಗಳ ಹಿತಾಸಕ್ತಿಗಳನ್ನಷ್ಟೆ ಪರಿಗಣಿಸುತ್ತಿರುವುದನ್ನು ವಿರೋಧಿಸಿ ಈ ಮಹಾ ಮುಷ್ಕರ ನಡೆಯುತ್ತಿದೆ” ಎಂದರು.
“ದೇಶದ ಹಲವು ರೈತ ಸಂಘಟನೆಗಳು, ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳೂ ಈ ಮುಷ್ಕರವನ್ನು ಬೆಂಬಲಿಸಿ ಬೀದಿಗೆ ಇಳಿದಿವೆ. ಹಲವು ವಿರೋಧ ಪಕ್ಷಗಳೂ ಬೆಂಬಲ ಸೂಚಿಸಿವೆ. ಬಿಹಾರದಲ್ಲಿ ಇಂಡಿಯಾ ಕೂಟ ಇದೇ ಸಂದರ್ಭದಲ್ಲಿ ಬಂದ್ ಗೆ ಕರೆ ನೀಡಿದೆ. ಸಿಪಿಐಎಂ ಸಹಿತ ಎಡಪಕ್ಷಗಳು ಈ ಮಹತ್ವದ ಸಾರ್ವತ್ರಿಕ ಮುಷ್ಕರವನ್ನು ಪೂರ್ತಿಯಾಗಿ ಬೆಂಬಲಿಸುತ್ತಿವೆ. ಇದು ಕಾರ್ಮಿಕ ವರ್ಗದ ಮಾತ್ರ ಅಲ್ಲ, ಕಾರ್ಪೊರೇಟ್ ಬಂಡವಾಳಗಾರರ ಹೊರತಾದ ಇಡೀ ಜನ ಸಮೂಹದ ಹಿತಾಸಕ್ತಿ, ಭವಿಷ್ಯದ ಪ್ರಶ್ನೆಗಳನ್ನು ಅವಲಂಬಿಸಿದೆ. ನಿಮ್ಮೆಲ್ಲರ ಬೆಂಬಲವೂ ಕಾರ್ಮಿಕ ವರ್ಗದ ಈ ಮಹಾ ಮುಷ್ಕರಕ್ಕೆ ಇರಲಿ” ಎಂದು ಕರೆ ನೀಡಿದರು.
“ಕನಿಷ್ಠ ಕೂಲಿ ಜಾರಿ ಮಾಡದೆ ಗ್ರಾಮ ಪಂಚಾಯತಿ ನೌಕರರನ್ನು ಅವಮಾನಿಸುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಅವರ ವೇತನ ಬಿಡುಗಡೆಯಾಗಿಲ್ಲ, ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಕೊಡದೆ, ಕಲ್ಯಾಣ ಮಂಡಳಿಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಭ್ರಷ್ಟಾಚಾರದ ಗೂಡಾಗಿ ನಿರ್ಮಿಸಲಾಗುತ್ತಿದೆ. ಸ್ಕೀಮ್ ನೌಕರರಾದ ಆಶಾ, ಅಂಗನವಾಡಿ, ಬಿಸಿ ಊಟ ತಾಯಂದಿರನ್ನು ಕಾರ್ಮಿಕರು” ಎಂದು ಪರಿಗಣಿಸಬೇಕೆಂದರು.
ಕೆ ಪಿ ಆರ್ ಎಸ್ ಮುಖಂಡರಾದ ಎಂ ಎಸ್ ಹಡಪದ ಅವರು ಮಾತನಾಡಿ, “ರೈತರ ಹಕ್ಕುಗಳ ರಕ್ಷಣೆ ಮಾಡದೇ ರೈತ ವಿರೋಧಿ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಿ ರಾಜ್ಯದಲ್ಲಿ ಜಾರಿ ಮಾಡಿರುವುದನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆಯಬೇಕು. ನಾವು ರೈತರ ಪರ ಎಂದು ಹೇಳಿಕೊಳ್ಳುತ್ತಾ ಇಲ್ಲಿವರೆಗೂ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದೆ ಇರುವುದು ಖೇದಕರ. ಸ್ಥಳೀಯ ಎಂಎಲ್ಎ ಜನಪ್ರತಿನಿಧಿಗಳು ಜನರಿಂದ ದೂರವಾಗಿದ್ದಾರೆ. ಕನಿಷ್ಠ ಜನರ ಹವಾಲುಗಳನ್ನು ಕೇಳುವ ಅವಧಾನ ಅವರಿಗೆ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಸಂಘಟನೆಗಳನ್ನು ಕಟ್ಟಿ ಹೋರಾಟ ಮಾಡಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಅನಿವಾರ್ಯವಾಗಿದೆ” ಎಂದರು.

“ಜನತೆಯೂ ಕೂಡ ಮುಂಬರುವ ಚುನಾವಣೆಗಳಲ್ಲಿ ಪರ್ಯಾಯ ರಾಜಕೀಯವನ್ನು ಗುರುತಿಸಬೇಕು ಹೋರಾಟಗಾರರನ್ನು ಚುನಾವಣೆಗಳಲ್ಲಿ ಗೆಲ್ಲಿಸುವ ಕೆಲಸ ಮಾಡಬೇಕು. ಬಗರ್ ಹುಕಂ ಸಾಗುವಳಿದಾರರ ಪಟ್ಟಾ ಬುಕ್ ವಿತರಣೆ ಮಾಡಬೇಕು, ಕೆರೆಗಳನ್ನು ತುಂಬಿಸುವ ಯೋಜನೆಗಳು ಹಾಗೆ ಬಿದ್ದಿವೆ ಅವುಗಳನ್ನು ಜಾರಿ ಮಾಡಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಮೋದಿ ಸರ್ಕಾರ ರದ್ದುಪಡಿಸಬೇಕು: ಬಸವರಾಜ ಪೂಜಾರ
ನಂತರದಲ್ಲಿ ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರಾದ ಗಣೇಶ್ ರಾಠೋಡ ಮಾತನಾಡಿದರು. ಬಿದಿ ಬದಿ ವ್ಯಾಪಾರಸ್ಥರ ಸಂಘಟನೆ ತಾಲ್ಲೂಕು ಅಧ್ಯಕ್ಷ ಶ್ಯಾಮೀದ್ ಅಲಿ ಡಿಂಡವಾಡ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ, ಕಟ್ಟಡ ಕಾರ್ಮಿಕರ ಸಂಘಟನೆಯ ತಾಲೂಕು ಅಧ್ಯಕ್ಷರಾದ ಅಂದಪ್ಪ ಕುರಿ, ಎಸ್ ಎಫ್ ಐ ತಾಲೂಕು ಅಧ್ಯಕ್ಷರಾದ ಅನಿಲ್, ಮುಖಂಡರಾದ ರವಿ, ಅಭಿ, ಗ್ರಾಮ ಪಂಚಾಯತಿ ತಾಲ್ಲೂಕು ಅಧ್ಯಕ್ಷರಾದ ಮರಿಲಿಂಗಪ್ಪ ಮುತಾರಿ, ಮುಖಂಡರಾದ ಮುದುಕಪ್ಪ ದೊಣ್ಣೆಗುಡ್ಡ, ನಬಿಸಾಬ್, ಕುಮಾರ್, ಸಕ್ರಿ. ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ರೇವಣಪ್ಪ, ಆನಂದ್, ಈರಪ್ಪ, ಪೀರಪ್ಪ, ತುಕಾರಾಂ. ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಯ ಮುಖಂಡರಾದ ಅಂಬರೀಶ್ ಚವ್ಹಾಣ, ಚೌಡಮ್ಮ. ರೈತ ಸಂಘದ ಮುಖಂಡರಾದ ಚನ್ನಪ್ಪ ಗುಗಲೋತ್ತರ್, ಹಾಗೂ ಇತರರು ನೂರಾರು ಕಾರ್ಮಿಕರು ಹಾಜರಿದ್ದರು.