ಸ್ಕಿಝೋಫ್ರೇನಿಯಾದಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಆರೈಕೆಯ ಜೊತೆಗೆ ಮನೋ ಸಾಮಾಜಿಕ ಬೆಂಬಲ ನೀಡಿದಲ್ಲಿ ಅವರೂ ಸಾಮಾನ್ಯರಂತೆ ಜೀವನ ನಡೆಸಬಹುದು ಹಾಗೂ ಸ್ಕಿಝೋಫ್ರೇನಿಯಾ ಕುರಿತು ಸಮಾಜದಲ್ಲಿರುವ ಮೂಢನಂಬಿಕೆ ಹಾಗೂ ತಾರತಮ್ಯಗಳನ್ನು ಎಲ್ಲರೂ ಒಗ್ಗೂಡಿ ಹೋಗಲಾಡಿಸಬೇಕು ಎಂದು ಗದಗ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೊಗ್ಯ ಕಾರ್ಯಕ್ರಮ ಅಧಿಕಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗದಗ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ ವಿಭಾಗ ಗದಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಗದಗ ಹಾಗೂ ಸಂಕನೂರು ಶುಶ್ರೂಷ ವಿಜ್ಞಾನ ಸಂಸ್ಥೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಸ್ಕಿಝೋಫ್ರೇನಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವಹಿಸಿದ್ದ ಶುಶ್ರೂಷ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕಿ ರಶ್ಮಿ ಪಾಟೀಲ್ ಮಾತನಾಡಿ, “ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಧನ್ಯವಾದ. ವಿದ್ಯಾರ್ಥಿಗಳಿಗೆ ಸ್ಕಿಝೋಫ್ರೇನಿಯಾ ಖಾಯಿಲೆ ಮತ್ತು ಚಿಕಿತ್ಸೆ ಕುರಿತು ಸಮಾಜದಲ್ಲಿ ಅರಿವು ಮೂಡಿಸುವುದು ತುಂಬಾ ಅಗತ್ಯ” ಎಂದರು.
ಇದನ್ನೂ ಓದಿ: ಗದಗ | ಅರಣ್ಯ ಸಂರಕ್ಷಕರು ಹಸಿರಿನ ಹರಿಕಾರರು: ನ್ಯಾ.ಗಂಗಾಧರ ಎಂ ಸಿ
ತಾಲೂಕು ಆರೋಗ್ಯಾಧಿಕಾರಿ ಡಾ ಪ್ರೀತ್ ಖೋನಾ ಮಾತನಾಡಿ, “ಮಾನಸಿಕ ಅಸ್ವಸ್ಥರಿಗೆ ಸಮಾಜದ ಕಾಳಜಿ ಅತ್ಯವಶ್ಯವಾಗಿದೆ. ಭಾರತ ಸರ್ಕಾರ ಪ್ರಾರಂಭಿಸಿರುವ ಟೆಲಿ-ಮನಸ್ ಉಚಿತ ಸಹಾಯವಾಣಿ ಸಂಖ್ಯೆ 14416 ಗೆ ಕರೆ ಮಾಡಿ ಆಪ್ತ ಸಮಾಲೋಚನೆ ಸೇವೆ ಪಡೆಯಬಹುದು. ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಅತ್ಯವಶ್ಯಕವಿದ್ದು, ಮಾನಸಿಕ ರೋಗಗಳಿಗೆ ಚಿಕಿತ್ಸೆ ಪಡೆಯಲು ಜಾಗೃತಿ ಮೂಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ವಿದ್ಯಾಭ್ಯಾಸದ ಜೊತೆಗೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಸಂಕನೂರು ಶುಶ್ರೂಷ ವಿಜ್ಞಾನ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು, ನವೀನಪೌಲ ಗೌಡರ, ರಾಜೇಶ್ವರಿ ಟಿ, ಕು.ಮಧು ರೋಣದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು.