ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆ ಎನ್ನುವ ತಪ್ಪು ಗ್ರಹಿಕೆಗೆ ಒಳಗಾದ ಪ್ರಾಚೀನ ಕನ್ನಡ ಪಠ್ಯಗಳನ್ನು ಆಪ್ತವಾಗಿಸುವ ಮತ್ತು ನಮ್ಮ ಸಮಕಾಲೀನ ಬದುಕನ್ನು ಅರ್ಥೈಸಿಕೊಂಡು ಸಂವಿಧಾನದ ಆಶಯದ ಬಹುತ್ವಭಾರತದ ಅರಿವನ್ನು ವಿಸ್ತರಿಸುವ ಆಶಯದೊಂದಿಗೆ ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೆ – 19ರಂದು ‘ಕಬ್ಬದುಳುಮೆ ಹಳಗನ್ನಡ ಕಾವ್ಯದೋದು ಕಮ್ಮಟ’ವನ್ನು ಆಯೋಜಿಸಿದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಜಯಪ್ರಕಾಶ್ ಶೆಟ್ಟಿ ಹೇಳಿದರು.
ಉಡುಪಿಯ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ರಥಬೀದಿ ಗೆಳೆಯರು (ರಿ.), ಉಡುಪಿ, ಸರ್ಕಾರಿ ಪ್ರಥಮದರ್ಜೆ ಹಾಗೂ ಪದವಿಪೂರ್ವ ಕಾಲೇಜು, ಹಿರಿಯಡಕ ಇವುಗಳ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗಾಗಿ ಆಯೋಜಿತವಾದ ಈ ಕಮ್ಮಟವು ಓದನ್ನು ಉಳುಮಯ ಸಜನಶೀಲ ಆವರಣವಾಗಿಸುವ ಆಶಯವುಳ್ಳದ್ದಾಗಿದೆ ಎಂದು ಹೇಳಿದರು.
ನಾಡಿನ ಹಿರಿಯ ಸಾಂಸ್ಕೃತಿಕ ಚಿಂತಕ, ಪ್ರಗತಿಪರ ಮನೋಧರ್ಮದ ಬಂಡಾಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪನವರಿಂದ ಉದ್ಘಾಟನೆಗೊಳ್ಳಲಿರುವ ಕಮ್ಮಟವು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಜಯಪ್ರಕಾಶ್ ಶೆಟ್ಟಿ ಆಶಯಭಾಷಣ ಮಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕುಬ್ ಖಾದರ್ ಗುಲ್ಯಾಡಿ, ಅಮೃತ ಮಹೋತ್ಸವ ಸಮಿತಿ, ಕೆ.ಪಿ.ಎಸ್. ಹಿರಿಯಡಕ ಇದರ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್, ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕಾಳಾವರ, ಕೆ.ಪಿ.ಎಸ್. ಹಿರಿಯಡಕದ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಬಿ.ಎಲ್. ವಿಶ್ವಾಸ್ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಈ ಕಮ್ಮಟವು ಬೆಳಿಗ್ಗೆ 9.45 ರಿಂದ ಮಧ್ಯಾಹ್ನ 4.30ರ ವರೆಗೆ ನಡೆಯಲಿದ್ದು, ಕಮ್ಮಟದ ಭಾಗವಾಗಿ ಮೊದಲ ಗೋಷ್ಠಿಯಲ್ಲಿ ‘ಹಳಗನ್ನಡ ಕಾವ್ಯ : ಓದಿನ ಸವಾಲು ಮತ್ತು ಸಾಧ್ಯತೆಗಳು’ ಎಂಬ ವಿಷಯದ ಕುರಿತು ವಿಮರ್ಶಕ ರಾಮಲಿಂಗಪ್ಪ ಟಿ. ಬೇಗೂರು ಹಾಗೂ ಎರಡನೆಯ ಗೋಷ್ಠಿಯಲ್ಲಿ ‘ಪದವಿಪೂರ್ವ ಪಠ್ಯ ಮತ್ತು ಹಳಗನ್ನಡ ಕಾವ್ಯಭಾಗ’ ಎಂಬ ವಿಷಯದ ಕುರಿತು ಜಯಪ್ರಕಾಶ್ ಶೆಟ್ಟಿ ಹೆಚ್ ವಿಚಾರಮಂಡನೆ ಮಾಡಲಿದ್ದಾರೆ. ಕೃಷ್ಣ ಸಾಸ್ತಾನ ಕುವೆಂಪು ಗೀತೆಗಳನ್ನು ಹಾಡಲಿದ್ದಾರೆ. ಉಡುಪಿ ಡಿ.ಡಿ.ಪಿ.ಯು ಮಾರುತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಮಂಗಳಗಂಗೋತ್ರಿ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ನಾಗಪ್ಪಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ರಥಬೀದಿ ಗೆಳೆಯರು (ರಿ.), ಉಡುಪಿ ಇದರ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಕಾರ್ಯದರ್ಶಿ ಸುಬ್ರಮಣ್ಯ ಜೋಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕುಬ್ ಖಾದರ್ ಗುಲ್ಮಾಡಿ, ಕೆ.ಪಿ.ಎಸ್. ಹಿರಿಯಡಕ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸರಾವ್, ಹಿರಿಯಡಕ ಪದವಿ ಕಾಲೇಜಿನ ಕನ್ನಡ ವಿಭಾಗಮುಖ್ಯಸ್ಥೆ ಸೌಮ್ಯಲತಾ ಪಿ, ಐಕ್ಯುಎಸಿ ಸಂಚಾಲಕ ಲಿತಿನ್ ಬಿ ಎಂ ಉಪಸ್ಥಿತರಿರಲಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಕಾವ್ಯಾಸಕ್ತ ವಿದ್ಯಾರ್ಥಿ, ಉಪನ್ಯಾಸಕರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಯಾವರ ನಾಗೇಶ್ ಕುಮಾರ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸೌಮ್ಯಲತಾ ಪಿ., ನಾಗರಾಜ್ ಎನ್.ಇ., ಡಾ.ಲಿತಿನ್ ಬಿ.ಎಂ. ಉಪಸ್ಥಿತರಿದ್ದರು.