ಸಂವಿಧಾನದ ಮೂಲ ಆಶಯದಂತೆ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಪತ್ರಿಕಾರಂಗ ತಮ್ಮ ಕಾರ್ಯವನ್ನು ಪ್ರಾಮಾಣಿಕತೆ, ಶ್ರದ್ಧೆಯಿಂದ ನಿರ್ವಹಿಸಿದರೆ ಪ್ರಪಂಚದಲ್ಲಿ ದೇಶ ಉನ್ನತ ಸ್ಥಾನದಲ್ಲಿ ಸಾಗುತ್ತದೆ. ಯಾವುದಾದರೂ ಒಂದು ಅಂಗ ವಿಫಲವಾದರೆ ದೇಶ, ಸಮುದಾಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನೌಕರರು ಜನರ ವಿಶ್ವಾಸವನ್ನು ಗಳಿಸಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಗುರುಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ಅನುಪಮಾ ಸೇವೆ ಪ್ರಶಸ್ತಿ ಪ್ರಧಾನ ಮತ್ತು ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ವಾಟಿಸಿ ಮಾತನಾಡಿದರು.
“ಕರ್ತವ್ಯ ಪ್ರಜ್ಞೆ ಇಟ್ಟುಕೊಂಡು ಮನುಷ್ಯ ಧರ್ಮದಿಂದ ಕೆಲಸ ಮಾಡಬೇಕಾಗಿದೆ. ಯಾರಿಗೂ ಶೋಷಣೆ ಮಾಡದೆ ಪಾರದರ್ಶಕತೆಯಿಂದ ಕೆಲಸ ಮಾಡಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು. ಕಾಂಗ್ರೆಸ್ ಸರ್ಕಾರ ನೀಡಿರುವ ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ರಾಜ್ಯ ಸರ್ಕಾರಿ ನೌಕರರ ಮೇಲಿದೆ” ಎಂದರು.
ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡ್ಯಾಳ ಮಾತನಾಡಿ, “ಸರ್ಕಾರಿ ನೌಕರರಿಗೆ ಓಪಿಎಸ್ ಜಾರಿ ಮಾಡಲು ಸರ್ಕಾರದ ಗಮನ ಸೆಳೆಯಲು ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದು ಮನವಿ ಮಾಡಿಕೊಂಡರು.
ತಾಲೂಕು ಘಟಕದ ಅಧ್ಯಕ್ಷ ಬಸವರಾಜ ರಾವುರ ಮಾತನಾಡಿ, “ಸರ್ಕಾರಿ ನೌಕರರ ಸಂಘದ ಖಾತೆಯಲ್ಲಿ ಒಟ್ಟು ₹6 ಲಕ್ಷ ನಿವ್ವಳ ಲಾಭವಿದ್ದು, ₹1.66 ಲಕ್ಷ ಬ್ಯಾಂಕಿನಲ್ಲಿ ಉಳಿದಿದೆ. ಅದಲ್ಲದೆ ಸೇವೆ ಮಾಡುವ ಕೈಗಳು ಶ್ರೇಷ್ಠ ಎಂಬ ಭಾವನೆಯಲ್ಲಿ ನೌಕರರು ಕೆಲಸ ಮಾಡುತ್ತಿದ್ದು, ತಾಲೂಕಿನ ಪ್ರಗತಿಗೆ ಪೂರಕ ಕೆಲಸ ಮಾಡುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತಾಳಿಕೋಟಿ | ಮಡಿವಾಳಮ್ಮ ನಾಡಗೌಡಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ: ಕಸಾಪದಿಂದ ಸನ್ಮಾನ
ಲಕ್ಷ್ಮಿಕಾಂತ ಮೇತ್ರಿ, ಆರಪಿ ಗಿಣಿ, ಧನರಾಜ ಮೋಜಗೊಂಡ ಮಾತನಾಡಿದರು. ನೌಕರರಾದ ಮಹದೇವಪ್ಪ ಏವೂರ, ಗೀತಾ ಗುಪ್ತರಗಿ ಮಠ, ಉಮೇಶ ಲಮಾಣಿ, ಸಿಪಿ ಚೌಹಾನ, ಎಸ್ ವಿ ರಾಘಣ್ಣನವರ, ಎಸ್ ಆರ್ ನಡಗಡ್ಡಿ, ಎಂಎಂ ಸಂಜೆವಾಡ, ಶೃತಿ ಖೆಡಗಿ, ಎಸ್ ಎಸ್ ಮೋದಿ, ಡಬ್ಲ್ಯೂಐ ಇಂಡಿಕರ ಮತ್ತಿತರರನ್ನು ಅನುಪಮ ಸೇವೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯ ಮೇಲೆ ತಾಪಂ ಇಒ ಬಿ ಎಚ್ ಕನ್ನೂರ, ಶಿವರಾಜ ಬಿರಾದಾರ, ಶಿವಾನಂದ ಮಂಗನವರ, ವಿಜಯಕುಮಾರ ಕ್ಷತ್ರಿ ಮತ್ತಿತರರಿದ್ದರು. ನಂತರ ಸರ್ಕಾರಿ ನೌಕರರಿಗೆ ಸ್ಪಂದನ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು.